ಪೋಲಿಯೋ ಮುಕ್ತ-ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ : ಸಚಿವ ಡಾ.ಎಂ.ಬಿ.ಪಾಟೀಲ

ಪೋಲಿಯೋ ಮುಕ್ತ-ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ : ಸಚಿವ ಡಾ.ಎಂ.ಬಿ.ಪಾಟೀಲ  Join hands to build a polio-free and healthy society: Minister Dr. M.B. Patil

 ವಿಜಯಪುರ 21 :  ಪೋಲಿಯೋ ಮುಕ್ತ ಸಮಾಜವನ್ನಾಗಿ ರೂಪಿಸಲು ಎಲ್ಲ ಪಾಲಕರು ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರೂ ಆದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾ ನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು  ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ  ರವಿವಾರ ನಗರದ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ದರ್ಗಾದಲ್ಲಿ ನಡೆದ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಅಭಿಯಾನ ಕಾರ್ಯಕ್ರಮವನ್ನು ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಡಿ.21ರಿಂದ 24ವರೆಗೆ ಹಮ್ಮಿಕೊಂಡ ಪಲ್ಸ್‌ ಪೊಲೀಯೋ ಲಸಿಕಾ ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಂಡು ಲಸಿಕೆ ಹಾಕುವ ಗುರಿಯನ್ನು ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸುವ ಮೂಲಕ ದೇಶದಲ್ಲಿಯೇ ವಿಜಯಪುರ ಜಿಲ್ಲೆಯನ್ನು ಮುಂಚೂಣಿಯಲ್ಲಿ ತರಬೇಕು ಎಂದು ಅವರು ಹೇಳಿದರು.  

          ವಿಜಯಪುರ ಜಿಲ್ಲೆಯ 0-5 ವರ್ಷದೊಳಗಿನ ಮಕ್ಕಳ ಗುರಿ-296119 ಇದ್ದು, ಅದಕ್ಕಾಗಿ ಪೋಲಿಯೋ ಭೂತಗಳ ಸಂಖ್ಯೆ-1331 ರಚಿಸಿದ್ದು, ಇದರಲ್ಲಿ 31 ಸಂಚಾರಿ ತಂಡಗಳು ಮತ್ತು ಟ್ರಾಂಜಟ್‌-40 ತಂಡಗಳನ್ನು ಒಳಗೊಂಡಿದೆ. ಪೋಲಿಯೋ ನಿರ್ಮೂಲನೆಯಲ್ಲಿ ದೇಶ ಗಣನೀಯ ಸಾಧನೆ ಮಾಡಿದೆ ಈ ನಿಟ್ಟಿನಲ್ಲಿ ಪೋಲಿಯೋ ನಿರ್ಮೂಲನೆಗೆ ಜಿಲ್ಲಾದ್ಯಾಂತ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಯಾವುದೇ ಮಗು ಪೊಲಿಯೋ ಲಸಿಕೆಯಿಂದ ವಂಚಿತವಾಗದೇ ನಿಗಧಿತ ಗುರಿ ಸಾಧಿಸುವಂತೆ ಅವರು ಹೇಳಿದರು.  ನಗರ ಪ್ರದೇಶ ಮತ್ತು ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ಮಾಹಾ ನಗರ ಪಾಲಿಕೆ ಹಾಗೂ ಗ್ರಾಮ ಪಂಚಾಯಿತಿಗಳ ಪಾತ್ರ ಬಹಳ ಮುಖ್ಯವಾಗಿದೆ. ನಮ್ಮ ದೇಶವು ಯುವ ಜನಾಂಗದಿಂದ ಕೂಡಿದ್ದು, ಯುವ ಜನತೆಯು ಒಳ್ಳೆಯ ಆರೋಗ್ಯ ಮತ್ತು ಸಮೃದ್ದಿ ಹೊಂದಲು ಆರೋಗ್ಯ ಸೇವೆಯನ್ನು ನೀಡುವಲ್ಲಿ ಎಲ್ಲರೂ ಭದ್ದತೆ ಹಾಗೂ ಸೃದ್ದತೆಯಿಂದ ಕಾರ್ಯನಿರ್ವಹಿಸಿ ಪೋಲಿಯೋ ನಿರ್ಮೂಲನೆಗೆ ಕೈಜೋಡಿಸಬೇಕೆಂದು ಅವರು ಕರೆ ನೀಡಿದರು. 

          ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಮಾಹಾಪೌರ ಮಡಿವಾಳಪ್ಪ ಕರಡಿ, ಉಪ ಮಹಾ ಪೌರರಾದ ಸುಮಿತ್ರಾ ರಾಜು ಜಾಧವ ಹಾಗೂ ಮಹಾನಗರ ಪಾಲಿಕೆಯ ಸದಸ್ಯರಾದ ಅಲ್ತಾಫ ಇಟಗಿ, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೇಕ್ಕಳಕಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ತ ಗುಣಾರಿ, ಡಬ್ಲ್ಯೂ.ಹೆಚ್‌.ಓ ಅಧಿಕಾರಿ ಡಾ. ಮುಕುಂದ ಗಲಗಲಿ, ಜಿಲ್ಲೆಯ ಪಲ್ಸ್‌ ಪೋಲಿಯೋ ನೋಡಲ್ ಅಧಿಕಾರಿ ಡಾ. ಶ್ರೀನಿವಾಸ್ ಎಸ್ ಆರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಮಹಾನಗರ ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಎಸ್‌.ಎಲ್ ಲಕ್ಕಣ್ಣವರ, ಜಿಲ್ಲಾ ಆರ್‌.ಸಿ.ಹೆಚ್‌.ಅಧಿಕಾರಿ ಪರಶುರಾಮ ಹಿಟ್ನಿಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃಧಿ ಇಲಾಖೆ ಉಪ ನಿರ್ದೇಶಕ ಕೆ ಕೆ ಚವ್ಹಾಣ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ   ಜಾನ್ ಕಟವಟೆ, ಅಪ್ಪಾಸಾಹೇಬ ಇನಾಮದಾರ, ಅರ್ಚನಾ ಕುಲಕರ್ಣಿ, ತಾಲೂಕಾ ಆರೋಗ್ಯಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಅಧಿಕಾರಿ,ಸಿಬ್ಬಂದಿಗಳು ಉಪಸ್ಥಿತರಿದ್ದರು. ಜಿಲ್ಲಾ ಆಸ್ಪತ್ರೆಯ ಆಪ್ತಸಮಾಲೋಚಕ ರವಿ ಕಿತ್ತೂರ ಸ್ವಾಗತಿಸಿದರು. ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎನ್ ಆರ್ ಬಾಗವಾನ ವಂದಿಸಿದರು.