ಸಂಬರಗಿಯಲ್ಲಿ ಜನತಾ ಸೇವಾ ಸಭೆ

ಸಂಬರಗಿಯಲ್ಲಿ ಜನತಾ ಸೇವಾ ಸಭೆ  Janata Seva Meeting in Sambaragi


ಸಂಬರಗಿ 19: ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿ, ಸಂಬಂಧಿಸಿದ ಅಧಿಕಾರಿಗಳ ಮೂಲಕ ಪರಿಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮ ಭೋಸಗಿ ಹೇಳಿದರು. ಸಂಬರಗಿ ವ್ಯಾಪ್ತಿಯ ಅನಂತಪುರ ಗ್ರಾಮದ ಅಂಬಾ ಭವಾನಿ ದೇವಸ್ಥಾನದ ಆವರಣದಲ್ಲಿ ನಡೆದ ಜನತಾ ಸೇವಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕ ಹಿತದೃಷ್ಟಿಯಿಂದ ಪ್ರತಿ ಶನಿವಾರ ಹೋಬಳಿ ಮಟ್ಟದಲ್ಲಿ ಜನತಾ ಸೇವಾ ಸಭೆ ನಡೆಸಲಾಗುತ್ತಿದ್ದು, ಜನರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಬಹುದು ಎಂದರು. ಸಭೆಯಲ್ಲಿ ಅನಂತಪುರ ಗ್ರಾಮದ ಅಭಿವೃದ್ಧಿ, ಕಾಲುವೆಗೆ ನೀರು ಹರಿಸುವುದು, ಜಕಾರಟ್ಟಿ ಗ್ರಾಮ ಪಂಚಾಯಿತಿಗೆ ಶಾಶ್ವತ ಪಿಡಿಒ ನೇಮಕ, ಹೆದ್ದಾರಿ ಹಾಗೂ ಮಾರ್ಗದ ರಸ್ತೆ ಕುರಿತು ಮಾಹಿತಿ, ಕೃಷ್ಣಾ ನದಿಯಿಂದ ಬೇಸಿಗೆಯಲ್ಲಿ ಮಹಾರಾಷ್ಟ್ರದಿಂದ ನೀರು ಪಡೆಯುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು.

ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬೆಳೆ ಸಮೀಕ್ಷೆಗಾಗಿ ತಂಡ ರಚಿಸಲಾಗಿದೆ. ವರದಿ ಸ್ವೀಕರಿಸಿದ ಬಳಿಕ ಅರ್ಹ ರೈತರಿಗೆ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ಒಟ್ಟು 150 ಅರ್ಜಿಗಳನ್ನು ಸ್ವೀಕರಿಸಿ ಪರೀಶೀಲಿಸಲಾಯಿತು. ಹಲವು ಗ್ರಾಮಗಳ ಮುಖಂಡರು ಹಾಗೂ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟರು. ತಹಶೀಲ್ದಾರ್ ಶಿವಾನಂದ ಕೊಲ್ಹಾಪುರ, ಪ್ರವೀಣ ಹುಣಸಿಕಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್‌. ಮುಂಜಿ, ಆರೋಗ್ಯಾಧಿಕಾರಿ ಬಸಗೌಡ ಕಾಗೆ, ಉಪ ತಹಶೀಲ್ದಾರ್ ಅಮಿತ್ ಧವಳೇಶ್ವರ, ಕಂದಾಯ ನೀರೀಕ್ಷಕ ವಿನೋದ ಕಡಮ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಅನಂತಪುರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಪೋಪಟ್ ನಿಕಂ, ಬಸಗೌಡ ಪಾಟೀಲ, ಮಹಾದೇವ ತಾನಗೆ, ಮಲ್ಲು ಪಡಸಲಗಿ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು. ಸಂಗಮೇಶ ಹಚ್ಚದಡ ಸ್ವಾಗತಿಸಿ, ವಂದಿಸಿದರು.