ಅಮ್ಮಿನಬಾವಿ ಹಿರೇಮಠದಲ್ಲಿ ಜಂಗಮ ವಟುಗಳಿಗೆ ದೀಕ್ಷೆ

ಅಮ್ಮಿನಬಾವಿ ಹಿರೇಮಠದಲ್ಲಿ ಜಂಗಮ ವಟುಗಳಿಗೆ ದೀಕ್ಷೆ Initiation of movable objects at Amminabavi Hiremath

ಲೋಕದರ್ಶನ ವರದಿ 

ಅಮ್ಮಿನಬಾವಿ 25: ಧಾರವಾಡ ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಶ್ರೀಗುರುಶಾಂತಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ 16 ಜಂಗಮ ವಟುಗಳಿಗೆ ಸೋಮವಾರ ಶಾಸ್ತ್ರೋಕ್ತವಾಗಿ ದೀಕ್ಷೆ ನೀಡಲಾಯಿತು.  

ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಲಬುರ್ಗಿ ಜಿಲ್ಲೆ ಬೆಳಗುಂಪಾ ಬೃಹನ್ಮಠದ ಶ್ರೀಅಭಿನವ ಪರ್ವತೇಶ್ವರ ಶಿವಾಚಾರ್ಯ ಸ್ವಾಮೀಜಿ ವೀರಶೈವ ಧರ್ಮ ಸಿದ್ಧಾಂತ ಪರಂಪರೆಯಂತೆ ಜರುಗಿದ ಶಾಸ್ತ್ರೋಕ್ತ ಸಂಸ್ಕಾರಗಳ ನಂತರ ವಟುಗಳಿಗೆ ಇಷ್ಟಲಿಂಗ ಧಾರಣೆಮಾಡಿ ಮಂತ್ರೋಪದೇಶ ಬೋಧಿಸಿದರು.  

ಇಷ್ಟಲಿಂಗಾರ್ಚನೆ : ಪ್ರಾಣಪ್ರತಿಷ್ಠಾಪನೆ ಮಾಡಿ ಅನುಗ್ರಹಿಸಿರುವ ಇಷ್ಟಲಿಂಗವನ್ನು ಸದಾಕಾಲವೂ ಎದೆಯ ಮೇಲೆಯೇ ಧಾರಣೆ ಮಾಡಿರಬೇಕು. ಇಷ್ಟಲಿಂಗವನ್ನು ಬಿಟ್ಟು ಅರೆಕ್ಷಣವೂ ಇರಬಾರದು. ನಿತ್ಯದಲ್ಲಿ ಇಷ್ಟಲಿಂಗಾರ್ಚನೆ ರೂಢಿಸಿಕೊಂಡರೆ ದಿನಚರಿಯ ಕ್ಷಣಗಳು ಪ್ರಫುಲ್ಲಿತವಾಗಿರುತ್ತವೆ ಎಂದು ಬೆಳಗುಂಪಾ ಬೃಹನ್ಮಠದ ಶ್ರೀಗಳು ಎಲ್ಲ ವಟುಗಳಿಗೆ ಉಪದೇಶ ಮಾಡಿದರು.  

ವೈದಿಕರುಗಳಾದ ಎಸ್‌.ಎಂ. ಪ್ರಶಾಂತ ರಾಜಗುರು, ಕುಮಾರಸ್ವಾಮಿ ಹಾಗೂ ಸೋಮಲಿಂಗಶಾಸ್ತ್ರಿ ಗುಡ್ಡದಮಠ ಅವರು ದೀಕ್ಷಾ ಕಾರ್ಯದ ಪೂಜಾ ಕೈಂಕರ್ಯಗಳನ್ನು ನಿರ್ವಹಿಸಿದರು. ಹಳೇಹುಬ್ಬಳ್ಳಿಯ ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಮಿತಿಯ ವತಿಯಿಂದ ಪದಾಧಿಕಾರಿಗಳಾದ ವೀರಯ್ಯಸ್ವಾಮಿ ಸಾಲಿಮಠ, ಚೆನ್ನಬಸಯ್ಯ ಹಿರೇಮಠ, ಪ್ರಕಾಶ ಕುಲಕರ್ಣಿ ಹಾಗೂ ಡಾ. ಫಕ್ಕೀರಯ್ಯ ಬಿಚಗತ್ತಿಮಠ ಅವರು ಎಲ್ಲಾ ವಟುಗಳಿಗೆ ಶ್ರೀಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಹಾಗೂ ಶಿವಪೂಜಾ ವಿಧಿ ಪುಸ್ತಕವನ್ನು ಶ್ರೀಗಳ ಮೂಲಕ ವಿತರಣೆ ಮಾಡಿದರು.