ಭಾರತ ವಿಶ್ವದಲ್ಲಿಯೇ ವಿಶಿಷ್ಠ ಸಾಂಸ್ಕೃತಿಕ ಪರಂಪರೆ ಹೊಂದಿರುವ ದೇಶ: ಚಿಕ್ಕೂರ

India is a country with a unique cultural heritage in the world: Chikkura

ಧಾರವಾಡ 29: ಭಾರತ ವಿಶ್ವದಲ್ಲಿಯೇ ವಿಶಿಷ್ಠ ಸಂಪ್ರದಾಯ, ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ದೇಶವಾಗಿದೆ.  ಅದರಲ್ಲೂ ಪ್ರಾಚೀನ ಕಾಲದಿಂದಲೂ ಬಂದಿರುವಂತ ಶಾಸ್ತ್ರೀಯ ಕಲೆಗಳಲ್ಲಿ ಅತ್ಯಂತ ಅಗ್ರಸ್ಥಾನದಲ್ಲಿರುವುದು ಭರತನಾಟ್ಯ ಕಲೆಯಾಗಿದೆ ಎಂದು ಶಿಕ್ಷಣ ಸಂಯೋಜಕ ಬಸವರಾಜ ಚಿಕ್ಕೂರ ಹೇಳಿದರು.   

ಧಾರವಾಡದ ಶಾಂತಾಲಾ ನೃತ್ಯಾಲಯವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ದಿನಾಂಕ:25 ರಂದು ನಗರದ ಸೃಜನಾ ರಂಗಮಂದಿರದಲ್ಲಿ ಏರಿ​‍್ಡಸಿದ್ದ “ಶಾಂತಲಾ ನೃತ್ಯೋತ್ಸವ”ವನ್ನು ಉದ್ಘಾಟಿಸಿದ ಬಸವರಾಜ ಚಿಕ್ಕೂರ ಮಾತನಾಡುತ್ತ ಮಕ್ಕಳಿಗೆ ಕೇವಲ ಪಠ್ಯಗಳಿಗೆ ಸೀಮಿತಗೊಳಿಸಿದರೆ ಸಾಲದು, ಅದರ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸಾಹಿತ್ಯ, ಸಂಗೀತ ಹಾಗೂ ನೃತ್ಯದಂತ ಕಲೆಗಳಲ್ಲಿ ಅವರನ್ನು ತೊಡಗಿಸುವುದರಿಂದ ಅವರ ವ್ಯಕ್ತಿತ್ವವೇ ಬದಲಾಗುತ್ತದೆ.  ಅವರಿಗೆ ಸಮಾಜದಲ್ಲಿ ಮತ್ತು ಶಾಲಾ ಹಂತದಲ್ಲಿ ಸಿಗುವ ಗೌರವವೇ ಭಿನ್ನವಾಗಿರುತ್ತದೆ.  ಮಕ್ಕಳು ಕಲಿಕೆಯಲ್ಲಿ ಎಷ್ಟೇ ಕಷ್ಟವಾದರೂ ಸಹ ನಿರಂತರೆಯನ್ನು ಹೊಂದಿದಲ್ಲಿ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.   

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಸಹನಾ ಭಟ್ ಮಾತನಾಡುತ್ತ ಗುರುವಿನ ಕಾರ್ಯವನ್ನು ಶಿಷ್ಯೆ ವಿಜೇತಾ ವೆರ್ಣೇಕರ ಅವರು ಮನಸ್ಸು ತೃಪ್ತಿಯಾಗುವ ರೀತಿಯಲ್ಲಿ ‘ಕರ್ನಾಟಕ ವೈಭವ’ ವಿಶೇಷ ನೃತ್ಯ ರೂಪಕ ಪ್ರಸ್ತುತ ಪಡಿಸಿದ್ದಾರೆ.  ನಾವೂ ಬೆಳೆದು ನಮ್ಮೊಂದಿಗೆ ಇರುವವರನ್ನೂ ಬೆಳೆಸುವುದೇ ನಮ್ಮ ಸಂಸ್ಕಾರವಾಗಿದೆ ಎಂದರು.   

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಂಯೋಜಕ ಪ್ರಕಾಶ ಬಾಳಿಕಾಯಿ ಮಾತನಾಡುತ್ತ  ಕೇವಲ ಐದು ವಿದ್ಯಾರ್ಥಿಗಳಿಂದ ಆರಂಭಗೊಂಡ ಶಾಂತಲಾ ನೃತ್ಯಾಲಯ ಒಂಬತ್ತು ವರ್ಷಗಳಲ್ಲಿ ಐದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶಾಸ್ತ್ರೀಯ ನೃತ್ಯಾಭ್ಯಾಸದಲ್ಲಿ ತೊಡಗಿಸಿದ ವಿದುಷಿ ವಿಜೇತಾ ವೆರ್ಣೇಕರ ಅವರ ಕಾರ್ಯ ಪ್ರಶಂಸನೀಯವಾದುದು ಎಂದರು.   

ಕಲಕೇರಿ ಸಂಗೀತ ವಿದ್ಯಾಲಯದ ಸಂಚಾಲಕ ವೀರಣ್ಣ ಪತ್ತಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಕಲಕೇರಿ ಸಂಗೀತ ವಿದ್ಯಾಲಯದ ಸಂಸ್ಥಾಪಕಿ ಆಗ್ಯಾಥ್ಯಾ ಮ್ಯಾಥು, ಮಂಜುನಾಥ ವೆರ್ಣೇಕರ, ವಿನಾಯಕ ಶೇಟ್, ಮುಕ್ತಾ ವೆರ್ಣೇಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.   

ಇದೇ ಸಂದರ್ಭದಲ್ಲಿ ನೃತ್ಯ ಗುರು ಡಾ.ಸಹನಾ ಪ್ರದೀಪ ಭಟ್ ದಂಪತಿಗಳನ್ನು ಸನ್ಮಾನಿಸಲಾಯಿತು. ಡಾ. ಸಹನಾ ಪ್ರದೀಪ ಭಟ್ ಅವರ ನಿರ್ದೇಶನದಲ್ಲಿ ವಿದುಷಿ ವಿಜೇತಾ ವೆರ್ಣೇಕರ ಅವರ 200 ಶಿಷ್ಯರು “ಕರ್ನಾಟಕ ವೈಭವ” ವಿಶೇಷ ನೃತ್ಯ ರೂಪಕವನ್ನು ಅತ್ಯಂತ ಮನಮೋಹಕವಾಗಿ ಪ್ರಸ್ತುತ ಪಡಿಸಿದರು. ಅಲ್ಲದೇ ಶಾಂತಲಾ ನೃತ್ಯಾಲಯದ ವಿದ್ಯಾರ್ಥಿಗಳು ವಿವಿಧ ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ಪ್ರಸಾಧನದಲ್ಲಿ ಸಂತೋಷ ಮಹಾಲೆ ಇದ್ದರು.