ಕಳರಿ ಪಯಟ್ಟು ಕಲೆಯ ‘ಲುಕ್ ಬ್ಯಾಕ್‌’ ಟ್ರೇಲರ್ ಬಿಡುಗಡೆ ಮಾಡಿದ ಹಂಸಲೇಖ

ಲೋಕದರ್ಶನ ವರದಿ 


ಕಳರಿ ಪಯಟ್ಟು ಕಲೆಯ ‘ಲುಕ್ ಬ್ಯಾಕ್‌’ ಟ್ರೇಲರ್ ಬಿಡುಗಡೆ ಮಾಡಿದ ಹಂಸಲೇಖ 

ಬೆಂಗಳೂರು, 18: ಕೇರಳದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಕಳರಿ ಪಯಟ್ಟು ಎಂಬ ಯುದ್ದ ಕಲೆ ಕುರಿತಾದ ಸಿನಿಮಾವೊಂದು ಸಿದ್ಧವಾಗಿದೆ. ಆ ಚಿತ್ರದ ಹೆಸರು ‘ಲುಕ್ ಬ್ಯಾಕ್‌’. ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸಿನಿಮಾ ತಯಾರಾಗಿದ್ದು, ಕನ್ನಡದಲ್ಲಿ ಚಿತ್ರಕ್ಕೆ ‘ನೆನೆ ಮನವೆ’ ಎಂದು ಹೆಸರು ಇಡಲಾಗಿದೆ. ಇದೇ ಸೆಪ್ಟೆಂಬರ್ 27ರಂದು ಕರ್ನಾಟಕ ಮತ್ತು ಕೇರಳದಲ್ಲಿ ರೀಲೀಸ್ ಆಗಲಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಟ್ರೇಲರ್ ಬಿಡುಗಡೆ ಮಾಡಿದ ಹಿರಿಯ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ‘ನಾನು ಇದರಲ್ಲಿ ಸಪೂಟಿಂರ್ಗ್ ಪಾತ್ರ ನಿರ್ವಯಿಸಿದ್ದೇನೆ. ಭಾರತೀಯ ಪ್ರಾಚೀನ ಕಲೆಯ ಸಿನಿಮಾ ಮಾಡಿರುವ ಉದ್ದೇಶ ಚನ್ನಾಗಿದೆ. ಸಾಂಗ್‌ಗೆ ಕೆಲಸ ಮಾಡಿ ಕೊಟ್ಟಿದ್ದೇನೆ. ಕಳರಿ ಅಂದರೆ ಕಳೆಯನ್ನು ಕಿತ್ತು ಹಾಕು ಎನ್ನಬಹುದು. ಮೈಮೇಲೆ ಮನಸಿನ ಮೇಲೆ ಅರಿವಿರಬೇಕು ಎಂಬುದು ಚಿತ್ರದ ಆಶಯವಾಗಿದೆ. ಪ್ರತೀಕಾರದ ಕಥೆ ಒಳಗೊಂಡಿದ್ದು, ಕ್ಲೈಮ್ಯಾಕ್ಸ್‌ನಲ್ಲಿ ಕ್ಷಮಿಸು ಎಂದು ಹೇಳಲಾಗಿದೆ. ಇಂದಿನ ಹೆಣ್ಣು ಮಕ್ಕಳು ರಕ್ಷಣೆಗೆ ದೃಷ್ಠಿಯಿಂದ ಈ ಕಲೆಯನ್ನು ಕಲಿಯಬೇಕು’ ಎಂದು ಹೇಳಿದರು. 

ಅಂದಹಾಗೆ ಈ ಚಿತ್ರವನ್ನು ರಂಜನ್ ಮುಲಾರತ್ ನಿರ್ದೇಶನ, ನಟನೆ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡುವ ರಂಜನ್ ‘ಮೂರು ವರ್ಷಗಳ ಹಿಂದೆ ಸಿನಿಮಾ ಶುರುವಾಗಿ ಸ್ಟ್ರಗಲ್‌ನಿಂದ ಸಾಗುತ್ತಾ ಬಂತು. ಕಳರಿ ಪಯಟ್ಟು ಮಾರ್ಷಲ್ ಆರ್ಟ್ಸ್‌ನ ಒಂದು ಭಾಗ. ಕಥೆ ಎಲ್ಲಾ ಭಾಷೆಗೆ ಆಪ್ತವಾಗಿದ್ದರಿಂದ ಇಂಗ್ಲೀಷ್‌ನಲ್ಲಿ ಸಂಭಾಷಣೆ ಇರುವ ಟ್ರೇಲರ್ ರೀಲೀಸ್ ಮಾಡಲಾಗಿದೆ. ಚಿತ್ರದಲ್ಲಿ ಕಳರಿ ಪಯಟ್ಟು ಕಲೆಯೇ ಹೀರೋ ಎನ್ನಬಹುದು. ಇನ್ನು 84 ವರ್ಷದ ಕಳರಿ ಪಯಟ್ಟು ಕಲೆಯಲ್ಲಿ ಪದ್ಮಶ್ರೀ ಅವಾರ್ಡ್‌ ಪಡೆದಿರುವ ಮೀನಾಕ್ಷಿಯಮ್ಮ ಕೂಡ ನಟಿಸಿದ್ದು, ಅವರು ಇರುವುದು ನಮಗೆ ಬಲ ಸಿಕ್ಕಿದೆ. ಇನ್ನು ಚಿತ್ರದ ಹೃದಯ ಸಂಗೀತ ಎನ್ನಬಹುದು. ಹಂಸಲೇಖ ಸೇರಿದಂತೆ ನಾಲ್ಕು ವಿದೇಶಿ ಸಂಗೀತ ನಿರ್ದೇಶಕರು ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಕೇರಳ ಹಾಗೂ ಕರ್ನಾಟಕ ಸೆ. 27 ರಂದು ಸಿನಿಮಾ ರೀಲೀಸ್ ಆಗಲಿದ್ದು, ನಂತರ ದಿನಗಳಲ್ಲಿ ದೇಶ, ವಿದೇಶಗಳಲ್ಲಿ ಬಿಡುಗಡೆ ಆಗಲಿದೆ. ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಸಿನಿಮಾ ಇದಾಗಿದೆ’ ಎಂದು ತಿಳಿಸಿದರು.  

ಚಿತ್ರದ ನಾಯಕಿಯಾಗಿ ಪ್ರಮುಖ ಪಾತ್ರ ನಿರ್ವಯಿಸಿರುವ ಉಪಾಸನಾ ಗುರ್ಜನ್ ಮಾತನಾಡಿ ‘ನಿರ್ದೇಶಕರು ಕಥೆ ಹೇಳಿದಾಗ ಭಯ ಆಯ್ತು. ಇದು ತುಂಬಾ ಸ್ಪೆಷಲ್ ಸಿನಿಮಾ ನಂಗೆ. ಅಜ್ಜಿ ಮನೆಯಲ್ಲಿ ಶೂಟ್ ಮಾಡಲಾಗಿದೆ. ಕಳರಿ ಪಯಟ್ಟು ಟ್ರೇನಿಂಗ್ ಪಡೆದು ಪಾತ್ರ ಮಾಡಿದ್ದೇನೆ. ಇಂದಿನ ಯುಗದಲ್ಲಿ ಮಹಿಳೆಯರು ಸ್ವ ರಕ್ಷಣೆ ಮಾಡಿಕೊಳ್ಳಲು ಕಲರಿ ಉತ್ತಮ ಆಯ್ಕೆ ಹಾಗೂ ಆರೋಗ್ಯಕ್ಕೂ ಇದು ಒಳ್ಳೆಯ ಕಲೆ ಆಗಿದೆ’ ಎನ್ನುವರು. ಚಿತ್ರದ ಛಾಯಾಗ್ರಾಹಕ ಕೃಷ್ಣ ನಾಯಕರ್ ‘ಚಿತ್ರದಲ್ಲಿ 10 ಫೈಟ್ ಇವೆ. ಒಂದು ತಿಂಗಳು ಕೇರಳ ಹಾಗೂ ಆಗುಂಬೆಯಲ್ಲಿ ಶೂಟಿಂಗ್ ಮಾಡಲಾಗಿದೆ’ ಎಂದರು. ವೇದಿಕೆಯಲ್ಲಿ ನಿರ್ದೇಶಕರ ಪುತ್ರ ಆರ್ಯನಾಥ್ ಮುಲಾರತ್ ಹಾಗೂ ಮಡದಿ ಸಿನಿ ರಂಜನ್ ತಮ್ಮ ಅನುಭವ ಹಂಚಿಕೊಂಡರು.