ಗುರಿ ಮುಟ್ಟಲು ಗುರುವೇ ಸೋಪಾನ: ಡಾ. ವಾಯ್‌.ಬಿ.ಪಟ್ಟಣಶೆಟ್ಟಿ

Guru is the step to reach the goal: Dr. Y. B. Pattanashetty

ವಿಜಯಪುರ 07: ಮಕ್ಕಳ ಭಾವೀ ಭವಿಷ್ಯಕ್ಕಾಗಿಯೇ ತಮ್ಮ ಜೀವನದ ಮುಕ್ಕಾಲು ಭಾಗವನ್ನು ಮುಡಿಪಾಗಿಡುವ ಶಿಕ್ಷಕರಿಗೆ, ಬದುಕಿನಲ್ಲಿ ಸರಿಯಾದ ದಿಕ್ಕಿನಲ್ಲಿ ಮುನ್ನುಗ್ಗಲು ಮಾರ್ಗದರ್ಶನ ಮಾಡುವ ಗುರುಗಳ ಸ್ಮರಣೆಗೆ ಶಿಕ್ಷಕ ದಿನಾಚರಣೆಯೊಂದೇ ಬೇಕೆಂದಿಲ್ಲ. ವಿದ್ಯಾರ್ಥಿಗಳು ಸದಾ ಗುರುವಿನ ಮಾರ್ಗದರ್ಶನದಲ್ಲಿ ನಡೆದು ತಮ್ಮ ಭಾವೀ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದು ನಿವೃತ್ತ ಪ್ರಾಂಶುಪಾಲರಾದ ಡಾ. ವಾಯ್‌.ಬಿ.ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು. 

ಅವರು ನಗರದ ಪ್ರತಿಷ್ಠಿತ ಎ.ಎಸ್‌.ಪಾಟೀಲ ಕಾಮರ್ಸ ಕಾಲೇಜಿನಲ್ಲಿ ಸಾಲಿನಲ್ಲಿ ಬಿ.ಕಾಂ. ಪದವಿ ಪೂರೈಸಿದ ವಿದ್ಯಾರ್ಥಿಗಳಿಂದ ಅಯೋಜಿಸಿದ್ದ ಗುರು ವಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಪ್ರೊ. ಎಸ್‌.ಎಸ್‌.ಚೌಕಿಮಠ ಅವರು ಮಾತನಾಡುತ್ತಾ, ಆಚಾರ್ಯ ದೇವೋ ಭವಃ ಎಂಬ ಸಂಸ್ಕೃತಿ ನಮ್ಮದು. ಜನ್ಮ ನೀಡಿದ ತಾಯಿ, ಬದುಕು ಕಲಿಸಿದ ತಂದೆ ಮತ್ತು ಕಲ್ಲಿನಂತಿರುವ ನಮಗೆ ಸಂಸ್ಕಾರ ನೀಡಿ ಶಿಲೆ ಅಥವಾ ಮೂರ್ತಿಗಳನ್ನಾಗಿ ರೂಪ ನೀಡಿದ ಗುರು ಈ ಮೂವರನ್ನು ಪೂಜ್ಯನೀಯ ಸ್ಥಾನದಲ್ಲಿಟ್ಟು ಗೌರವಿಸುವುದು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಾಗಿದೆ ಎಂದು ಹೇಳಿದರು. 

ಪ್ರೊ. ಎಂ.ಎಸ್‌. ಖೊದ್ನಾಪೂರ ಅವರು ಮಾತನಾಡಿ, ರಾಷ್ಟ್ರಕ್ಕೆ ಉತ್ತಮ ನಾಗರೀಕರು ಮತ್ತು ಸತ್ಪ್ರಜೆಗಳನ್ನು ರೂಪಿಸುವಲ್ಲಿ ಗುರುವಿನ ಪಾತ್ರ ಅನನ್ಯ ಮತ್ತು ಮಹತ್ವಪೂರ್ಣವಾಗಿದೆ. ಶಿಕ್ಷಕರು ಕೇವಲ ಇಂದಿನ ಪೀಳಿಗೆಗೆ ಅಂಧಕಾರವೆಂಬ ಅಜ್ಞಾನವನ್ನು ಹೊಡೆದೋಡಿಸಿ ಜ್ಞಾನವೆಂಬ ಪ್ರಭೆಯನ್ನು ಬೆಳಗಲು ಹಾಗೂ ಎಲ್ಲೆಡೆ ಪಸರಿಸುವಂತೆ ಹಾಗೂ ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ವ್ಯಕ್ತಿತ್ವ ವಿಕಸನಗೊಳ್ಳುವಲ್ಲಿ ಭದ್ರ ಅಡಿಪಾಯ ಹಾಕುವವರೇ ಶಿಕ್ಷಕರು. ಅವರು ತಮ್ಮ ನಿಸ್ವಾರ್ಥ ಸೇವೆಯ ಮೂಲಕವೇ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ,ಸಂಸ್ಕಾರ, ನಡೆ-ನುಡಿ, ಆಚಾರ-ವಿಚಾರ, ಪ್ರಾಮಾಣಿಕತೆ, ಕಾರ್ಯದಲ್ಲಿ ಶ್ರದ್ಧೆ, ಮಾನವೀಯ ಸಂಬಂಧಗಳು, ಜೀವನ ಮೌಲ್ಯಗಳು, ಆದರ್ಶ ಮತ್ತು ತತ್ವ-ಸಿದ್ಧಾಂತಗಳಂತಹ ಮೌಲ್ಯಗಳ ಧಾರಣೆ ಮಾಡಿ ಬದುಕು ಬಂಗಾರಮಯವನ್ನಾಗಿಸಲು ಕಾರ್ಯನಿರ್ವಹಿಸಬೇಕಾಗಿದೆ ಎಂದರು.  

ಈ ಗುರುವಂದನಾ ಕಾರ್ಯಕ್ರಮದಲ್ಲಿ ಪ್ರೊ. ಸಿ.ಜಿ.ಸಜ್ಜನರ. ಪ್ರೊ. ಎಸ್‌.ಜಿ.ತಾಳಿಕೋಟಿ, ಡಾ. ಎಸ್‌.ಆರ್‌.ಮಠ, ಪ್ರೊ. ವ್ಹಿ.ಎಸ್‌.ಬಗಲಿ, ಪ್ರೊ. ಎಸ್‌.ಜಿ.ರೋಡಗಿ, ಪ್ರೊ. ಎಸ್‌.ಎಸ್‌.ಕೋರಿ ಇನ್ನಿತರರನ್ನು ವಿದ್ಯಾರ್ಥಿಗಳು ಪ್ರೀತಿ-ಆದರದ ಮೂಲಕ ಸನ್ಮಾನ ಮಾಡಿ ಗೌರವಿಸಿದರು.ಅಮೀತ ಕದಂ ಮತ್ತು ಶಿವನಗೌಡ ಬಿರಾದಾರ ಮತ್ತು ಪ್ರೊ. ಐ.ಬಿ.ಜಾಬಾ ಇನ್ನಿತರರು ತಮ್ಮ 20 ವರ್ಷಗಳ ಹಿಂದಿನ ವಿದ್ಯಾರ್ಥಿ ಜೀವನದಲ್ಲಿ ಅನುಭವಿಸಿದ ಗುರು-ಶಿಷ್ಯರ ಸಂಬಂಧ ಮತ್ತು ಗೆಳೆಯರೊಂದಗಿನ ಸವಿ ನೆನಪುಗಳನ್ನು ಅನಿಸಿಕೆಯ ಮೂಲಕ ಹಂಚಿಕೊಂಡರು.  

ಪ್ರೊ. ಐ.ಬಿ.ಜಾಬಾ ಹಾಗೂ ಕಾರ್ಯಕ್ರಮ ನಿರೂಪಿಸಿದರು. ಜೋತ್ಸ್ನಾ ವಾರದ ಸಂಗಡಿಗರು ಪ್ರಾರ್ಥನಾ ಗೀತೆ ಪ್ರಚುರ ಪಡಿಸಿದರು. ಜ್ಞಾನ ಧಾರೆದು ಭವಿಷ್ಯ ರೂಪುಗೊಳ್ಳಲು ಸನ್ಮಾರ್ಗ ತೋರಿದ ಗುರುವರ್ಯರನ್ನು ಪುಷ್ಪ ಸಿಂಚನ ಮಾಡಿ ಹೃದಯ ಪೂರ್ವಕವಾಗಿ ಸ್ವಾಗತಿಸಿದರು.