ಹಾನಗಲ್ 12 :ಪರಿಸರದ ವಿರುದ್ಧ ಹೋಗುತ್ತಿರುವ ಪರಿಣಾಮ ಮಳೆಗಾಲ, ಬೇಸಿಗೆಕಾಲ ಮತ್ತು ಚಳಿಗಾಲದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಪರಿಸ್ಥಿತಿ ಸುಧಾರಿಸದಿದ್ದರೆ ಇನ್ನಷ್ಟು ಆತಂಕ ಎದುರಿಸಬೇಕಾದೀತು ಎಂದು ಶಾಸಕ ಶ್ರೀನಿವಾಸ ಮಾನೆ ಎಚ್ಚರಿಸಿದರು.
ಇಲ್ಲಿನ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಕುಮಾರೇಶ್ವರ ಕಲಾ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅರಣ್ಯ ಇಲಾಖೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನಸಂಖ್ಯೆ ಬೆಳೆದಂತೆ ಪರಿಸರ ನಾಶವೂ ಹೆಚ್ಚುತ್ತಿದೆ. ಕೃಷಿ ಚಟುವಟಿಕೆಗಳಿಗೂ ತೀವ್ರ ಹಿನ್ನಡೆ ಉಂಟಾಗಿ ರೈತ ಸಮೂಹ ಸಮಸ್ಯೆಗೆ ಸಿಲುಕುವಂತಾಗಿದೆ. ಮನುಷ್ಯ ಕುಲ ಸುಖಕರವಾಗಿ ಬದುಕಬೇಕಾದರೆ ಗಿಡ ನೆಟ್ಟು ಪೋಷಿಸಿ, ಅರಣ್ಯ ಸಂಪತ್ತು ಹೆಚ್ಚಿಸಬೇಕಿದೆ. ಅರಣ್ಯ ನಾಶ ಹೀಗೆಯೇ ಮುಂದುವರೆದರೆ 15-20 ವರ್ಷಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ ಇಡೀ ಜೀವಕುಲವೇ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಉಪಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಶೇಖ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಪೂಜಾರ, ವಲಯ ಅರಣ್ಯಾಧಿಕಾರಿ ಕೆ.ಎನ್.ಗಜೇಂದ್ರ, ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ, ಪ್ರಾಚಾರ್ಯ ಡಾ.ಎಂ.ಎಚ್.ಹೊಳೆಣ್ಣನವರ, ಹಿರಿಯ ಉಪನ್ಯಾಸಕ ಡಾ.ಪ್ರಕಾಶ ಹೊಳೇರ, ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ.ಸತ್ಯಸಾವಿತ್ರಿ, ಉಪ ವಲಯ ಅರಣ್ಯಾಧಿಕಾರಿಗಳಾದ ಬಸವರಾಜ ಜಾಧವ, ಎಸ್.ಕೆ.ರಾಠೋಡ್, ಈಶ್ವರ ನವಲೂರ, ಸತೀಶ್ ನಾಯ್ಕ, ಹನುಮಂತಪ್ಪ ಲಮಾಣಿ, ಗಸ್ತು ಅರಣ್ಯ ಪಾಲಕರಾದ ಸಂತೋಷ ಸವಣೂರ, ಹನುಮಂತಪ್ಪ ಉಪ್ಪಾರ, ಕೃಷ್ಣ ನಾಯ್ಕ, ರಾಮಚಂದ್ರ್ಪ ಎ.ಎನ್., ವಿಶ್ವನಾಥ ರಟ್ಟಿಹಳ್ಳಿ, ಮೌಲಾಸಾಬ, ಶಿವು ನಾಯ್ಕ, ಈರೇಶ ಲಮಾಣಿ, ಫಕ್ಕೀರ್ಪ ಮಲ್ಲಿಗಾರ ಇದ್ದರು.