ಗ್ಯಾಸ್ ಮತ್ತು ತೈಲ ರಹಿತ ಅಡುಗೆ ಸ್ಪರ್ಧೆ; ಆರೋಗ್ಯಕರ ಜೀವನ ಶೈಲಿಗೆ ಒತ್ತು

ಗ್ಯಾಸ್ ಮತ್ತು ತೈಲ ರಹಿತ ಅಡುಗೆ ಸ್ಪರ್ಧೆ; ಆರೋಗ್ಯಕರ ಜೀವನ ಶೈಲಿಗೆ ಒತ್ತು Gas and oil-free cooking competition; Emphasis on healthy lifestyle

ಸವದತ್ತಿ 18 : ಇಂದಿನ ಆಧುನಿಕ ಜೀವನಶೈಲಿಯಲ್ಲಿ ಮರೆಯಾಗುತ್ತಿರುವ ಪಾರಂಪರಿಕ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಇಲ್ಲಿನ ಯಾತಾಳೇಶ್ವರ ದೇವಸ್ಥಾನದ ಆವರಣದಲ್ಲಿ ಧರ್ಮಸ್ಥಳ ಸಂಘದ ವತಿಯಿಂದ ಮಹಿಳೆಯರಿಗಾಗಿ ಗ್ಯಾಸ್ ಮತ್ತು ಖಾದ್ಯ ತೈಲ ರಹಿತ ಅಡುಗೆ ಸ್ಪರ್ಧೆಯನ್ನು ಇತ್ತೀಚೆಗೆ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಡಾ. ನಯನಾ ಭಸ್ಮೆ, ಮಾತನಾಡಿದ ಅವರು ನಮ್ಮ ಹಿರಿಯರು ಅನುಸರಿಸುತ್ತಿದ್ದ ಆಹಾರ ಪದ್ಧತಿಗಳು ಅತ್ಯಂತ ಆರೋಗ್ಯಕರ ಮತ್ತು ಪೌಷ್ಟಿಕಾಂಶಯುಕ್ತವಾಗಿದ್ದವು. ಬದಲಾದ ಜೀವನಶೈಲಿಯಿಂದಾಗಿ ಇಂದು ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ.  

ಇಂತಹ ಸ್ಪರ್ಧೆಗಳು ಅಡುಗೆಯಲ್ಲಿ ಎಣ್ಣೆ ಮತ್ತು ಗ್ಯಾಸ್ ಬಳಕೆಯನ್ನು ಕಡಿಮೆ ಮಾಡುವ ಜತೆಗೆ, ಸಾಂಪ್ರದಾಯಿಕ ಅಡುಗೆ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತವೆ, ಎಂದು ತಿಳಿಸಿದರು. ಅಲ್ಲದೆ, ಇಂತಹ ಆರೋಗ್ಯಕರ ಹವ್ಯಾಸಗಳನ್ನು ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳುವಂತೆ ಅವರು ಕರೆ ನೀಡಿದರು.ಸ್ಪರ್ಧೆಯಲ್ಲಿ ಸವದತ್ತಿಯ ಮಹಿಳೆಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಯಾವುದೇ ರಾಸಾಯನಿಕಯುಕ್ತ ಎಣ್ಣೆ ಅಥವಾ ಗ್ಯಾಸ್ ಬಳಸದೆ, ಸಂಪೂರ್ಣವಾಗಿ ಪ್ರಾಕೃತಿಕ ಪದಾರ್ಥಗಳನ್ನು ಬಳಸಿ ತಯಾರಿಸಿದ ವಿವಿಧ ಬಗೆಯ ಆರೋಗ್ಯಕರ ತಿನಿಸುಗಳು ಗಮನ ಸೆಳೆದವು. ತೀಪುಗಾರರು ಅಡುಗೆಯ ರುಚಿ, ಪೌಷ್ಟಿಕಾಂಶ ಮತ್ತು ಪ್ರಸ್ತುತಿಯನ್ನು ಆಧರಿಸಿ ವಿಜೇತರನ್ನು ಆಯ್ಕೆ ಮಾಡಿದರು.  

ವಿಜೇತ ಸ್ಪರ್ಧಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಲ್ಲವಿ ಪದಕಿ, ಪಾರ್ವತಿ, ಕಾಂತಿಮಠ ವನಜಾಕ್ಷಿ ಸಾಲಿಮಠ, ರೇಣುಕಾ ಕಾಮಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸ್ಪರ್ಧೆಯ ವೇಳೆ ಖಾದ್ಯ ತೈಲ ಸಂರಕ್ಷಣೆ ಮತ್ತು ಸಮತೋಲಿತ ಆಹಾರ ಕ್ರಮದಿಂದ ಸಿಗುವ ಆರೋಗ್ಯ ಲಾಭಗಳ ಕುರಿತು ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯ ಗಣ್ಯರು ಪಾಲ್ಗೊಂಡಿದ್ದರು.