ಮಲಗುಂದ ಗ್ರಾಮದಲ್ಲಿ ಗರುಡನಂದಿಗಂಭ ಶಾಸನ ಪತ್ತೆ

Garudanandigamba inscription found in Malagunda village

ಮಲಗುಂದ ಗ್ರಾಮದಲ್ಲಿ  ಗರುಡನಂದಿಗಂಭ ಶಾಸನ ಪತ್ತೆ

ಹಾವೇರಿ 05:   ಜಿಲ್ಲೆಯ ಹಾನಗಲ್ ತಾಲ್ಲೂಕು ಮಲಗುಂದ ಗ್ರಾಮದಲ್ಲಿ  ಶಾಸನ ಇರುವ ಒಂದು ವಿಶೇಷ ಗರುಡನಂದಿಗರಿಗೆ ಪತ್ತೆಯಾಗಿದೆ. ಇದೊಂದು ಗ್ರಾಮದತ್ತಿ ಸಂಬಂಧಿತ ನಿಮಿತ್ತ ನಿರ್ಮಿಸಿದ ಕಂಭವಾಗಿದೆ ಎಂದು ಕಮಲಾಪುರ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ.ಆರ್‌.ಶೇಜೇಶ್ವರ ಅವರು ತಿಳಿಸಿದ್ದಾರೆ.ಇತ್ತೀಚೆಗೆ ಮಲಗುಂದ ಗ್ರಾಮಕ್ಕೆ ಕ್ಷೇತ್ರ ಕಾರ್ಯ ನಿಮಿತ್ತ ಹೋದಾಗ ಈ ಶಾಸನ ಪತ್ತೆಯಾಗಿದ್ದು, ಶಿಷ್ಟ ಶಿಲೆಯಲ್ಲಿ ನಿರ್ಮಿತವಾದ ಈ ಕಂಭದ ಮೇಲ್ಭಾಗದಲ್ಲಿ ಪಶ್ಚಿಮ ಅಭಿಮುಖವಾಗಿ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ನಂದಿಯ ದುಂಡುಶಿಲ್ಪದ ಕೆಳಗಿನ ಪಟ್ಟಿಯಲ್ಲಿ ಗರುಡನ ಉಬ್ಬುಶಿಲ್ಪ ಕೆತ್ತಲಾಗಿದೆ. ಗರುಡ ಶಿಲ್ಪದ ಇಕ್ಕೆಲಗಳಲ್ಲಿ ವಿಷ್ಣುವಿನ ಸಂಕೇತವಾಗಿ ಶಂಖ ಹಾಗೂ ಚಿತ್ರಗಳನ್ನು ಚಿತ್ರಿಸಿದ್ದನ್ನು ಇಲ್ಲಿ ಕಾಣಬಹುದು.ನಂದಿ ಹಾಗೂ ಗರುಡ ಈಶಕೇಶವರ ವಾಹನಗಳು, ಅಂತಾಗಿ ಅವುಗಳನ್ನು ಸಮೀಕರಿಸಿ ಕಂಭ ನಿರ್ಮಿತವಾಗಿದೆ. ಈ ಕಂಭವು 165 ಸೆಂಟಿಮೀಟರ್ ಎತ್ತರ ಹಾಗೂ 14 ಸೆಂಟಿಮೀಟರ್ ಅಗಲವಿದೆ. ಕಂಭದ ಪೂರ್ವ ಮುಖದ ಸಮತಟ್ಟಿನಲ್ಲಿ 05 ಸಾಲಿನ ಕನ್ನಡ ಲಿಪಿಯ ಹಾಗೂ ಕನ್ನಡ ಭಾಷೆಯ ಶಾಸನವನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.ಈ ಶಾಸನದಲ್ಲಿ 'ಹರಿಹರದೇವರ ಹಳ್ಳಿ ಮಲ್ಲಿಗುಂದ ಎಂಬ ಧರ್ಮಸ್ಥಳವನ್ನು ಹಾಳುಮಾಡಿದವನ ಸಂತಾನಹಾನಿಯಾಗುತ್ತದೆ" ಎಂದು ಬರೆಯಲಾಗಿದೆ. ಶೈವ ಹಾಗೂ ವೈಷ್ಣವ ಸಮಯಗಳ ಭಾವೈಕ್ಯತೆಯ ಹರಿಹರರ ಪ್ರತಿರೂಪ ಗರುಡನಂದಿ ಕಂಭವನ್ನು ನೆಟ್ಟು ಅದಕ್ಕೆ ಮಲ್ಲಿಗುಂದವನ್ನು ದತ್ತಿ ಬಿಡಲಾಗಿದೆ. ಕಂಭವನ್ನು ನೆಟ್ಟ ಧರ್ಮಸ್ಥಳವನ್ನು ಹಾಳುಮಾಡಿದವನ ವಂಶ ಹಾಳಾಗುತ್ತದೆ ಎಂಬ ಶಾಪಾಶಯವನುನಿಲ್ಲಿ ಹೇಳಲಾಗಿದೆ. ದತ್ತಿಯ ಹಕ್ಕು, ದತ್ತಿಗ್ರಾಮ, ಹರಿಹರ ದೈವ ಹಾಗೂ ಶಾಪಾಶಯ ಈ ಎಲ್ಲ ವಿವರಗಳನ್ನು ಚಿಕ್ಕದಾಗಿ 'ಕನ್ನಡಿಯಲ್ಲಿ ಕರಿ ಹಿಡಿದಂತೆ' ಶಾಸನದಲ್ಲಿ ತರಲಾಗಿದೆ. ಈ ಶಾಸನವು ಕ್ರಿ.ಶ. 13ನೇ ಶತಮಾನದ ಸೇವುಣರ ಕಾಲದ ಶಾಸನವಾಗಿದೆ.ಹರಿಹರ ದೇವರು ಎಂದರೆ ಇದೇ ಗರುಡನಂದಿಗಂಭ. ಹರಿಹರರ ದೇವಾಲಯನ್ನು ಕಟ್ಟಲು ಅಸಾಧ್ಯವಾದಾಗ ಅವರ ವಾಹನಗಳ ಗುರುತು ಹಾಕಿ ಕಂಭವನ್ನು ನೆಡಲಾಗುತ್ತಿತ್ತು. ದೇವಾಲಯ ನಿರ್ಮಾಣ ಬಹುವೆಚ್ಚದ್ದು. ಕಂಬನಿರ್ಮಾಣ ಕಡಿಮೆ ಖರ್ಚಿನದು. ಹಾಗಾಗಿ ಕನ್ನಡಿಗರು ಸರಳ ನಿಲುಗಂಭದ ಬಯಲು ಆಲಯವನ್ನು ನಿರ್ಮಿಸಿಕೊಂಡರು. ಸಧ್ಯದ ಕಂಭ ಮಲಗುಂದದ ಗರುಡನಂದಿಕಂಭ ಇದಕ್ಕೊಂದು ಉದಾಹರಣೆ.ಧರ್ಮಸಮನ್ವಯ ಕಂಭ: ಹರಿ ಮತ್ತು ಹರ ಅವತಾರವಾದ ಹರಿಹರೇಶ್ವರ ದೈವವು ಒಂದು ಧರ್ಮಸಮಾಗದ ದೇವರಾಗಿದೆ. ಪ್ರಾಚೀನ ಚತುಸ್ಸಮಯಗಳಲ್ಲಿ ಪ್ರಮುಖವಾದ ಶೈವ ಹಾಗೂ ವೈಷ್ಣವ ಸಮಯಗಳು ಒಂದೇ ಎಂಬಂತೆ ಸಾರಲು ಅವತಾರವಾಗಿದೆ. ಅಂತೆಯೇ ವಿಷ್ಣುವಾಹನವಾದ ಗರುಡವನ್ನು ಹಾಗೂ ಶಿವನ ವಾಹನವಾದ ನಂದಿಯನ್ನು ಒಟ್ಟೋಟ್ಟಿಗೆ ಸಮೀಕರಿಸಿ ಕಂಭವನ್ನು ಕೆತ್ತುವ ಸಂಪ್ರದಾಯ ತುಂಗಭದ್ರ ಎಡ ಹಾಗೂ ಬಲದಂಡೆ ಊರುಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಹರಿಹರ ತಾಲೂಕಿನ ಬಿಳಸನೂರು. ರಾಣೆಬೆನ್ನೂರು ತಾಲ್ಲೂಕಿನ ಗುಡ್ಡದಹೊಸಳ್ಳಿ, ನದಿಹರಳಹಳ್ಳಿ, ಹಿರೇಕೆರೂರು ತಾಲೂಕಿನ ಕೋಡ ಗ್ರಾಮದಲ್ಲಿ ಇದೇ ತರಹದ ಗರುಡನಂದಿಗಂಭಗಳು ಕಂಡುಬರುತ್ತವೆ. ಈ ಕಂಭಗಳು ಕನ್ನಡ ಸಂಸ್ಕೃತಿಯ ವಿಶೇಷ ಎಂದು ತಿಳಿಸಿದ್ದಾರೆ.ಕ್ಷೇತ್ರಕಾರ್ಯದಲ್ಲಿ ನೆರವಾದ ಡಾ.ಚಾಮರಾಜ ಕಮ್ಮಾರ. ಡಾ.ರವಿಕುಮಾರ ಕೆ ನವಲಗುಂದ. ಡಾ. ಜಗದೀಶರವರಿಗೆ ಹಾಗೂ ಮಲಗುಂದದ ಗ್ರಾಮಸ್ಥರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.