ಶಿರವಳದ ಬಳಿ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ನಾಲ್ವರು ಯುವಕರು ಮೃತ್ಯು, ಇಬ್ಬರಿಗೆ ಗಾಯ

ಶಿರವಳದ ಬಳಿ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ನಾಲ್ವರು ಯುವಕರು ಮೃತ್ಯು, ಇಬ್ಬರಿಗೆ ಗಾಯ Four youths killed, two injured in road accident near Shirwal on Pune-Bengaluru highway

ಕೊಲ್ಹಾಪುರ, ಆಗಸ್ಟ್ 11 : ಸಾತಾರಾ ಜಿಲ್ಲೆಯ ಶಿರವಳದ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಿರವಳ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಬೆಳಗಿನ ಜಾವ ಸುಮಾರು 1.10ರ ವೇಳೆಗೆ ಪುಣೆಯಿಂದ ಸಾತಾರಾ ಕಡೆಗೆ ವೇಗವಾಗಿ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ಪಲ್ಟಿಯಾಗಿ ಎದುರಿನ ಲೇನ್‌ಗೆ ಉರುಳಿದ್ದು, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಮೃತಪಟ್ಟ ನಾಲ್ವರನ್ನು ವೇದಾಂತ್ ಅರ್ಜುನ್ ವ್ರೋಂಗೆ, ಸೋನ್ಲಾಂಗ್ ಧೀರೇಂದ್ರ ಠಾಕೂರ್, ಆದಿತ್ಯ ಬಾಳಾಸಾಹೇಬ್ ಗರುಡ್ ಹಾಗೂ ನಿಖಿಲ್ ಬಾಳು ರಾವತ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ 19ರಿಂದ 20 ವರ್ಷದೊಳಗಿನವರಾಗಿದ್ದು, ಪುಣೆ ಜಿಲ್ಲೆಯ ಮಾವಳ್ ಮತ್ತು ಕಾಮ್‌ಶೇಟ್ ಪ್ರದೇಶದವರು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡವರನ್ನು ದೀಕ್ಷಿತ್ ದಯಾನಂದ ಪೂಜಾರಿ ಮತ್ತು ಮಯೂರ್ ಹನುಮಂತ ಶಿಂಧೆ ಎಂದು ಗುರುತಿಸಲಾಗಿದ್ದು, ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಶಿರವಳ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.