ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಣ ಅಗತ್ಯ: ಬಾಲಚಂದ್ರ ಜಾರಕಿಹೊಳಿ

 ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಣ ಅಗತ್ಯ: ಬಾಲಚಂದ್ರ ಜಾರಕಿಹೊಳಿ Foot and mouth disease control is necessary for livestock: Balachandra Jarakiholi

ಲೋಕದರ್ಶನ ವರದಿ 

ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಣ ಅಗತ್ಯ: ಬಾಲಚಂದ್ರ ಜಾರಕಿಹೊಳಿ 

ಗುರ್ಲಾಪೂರ(15)   ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆಯನ್ನು ಹಾಕಿಸಿ, ರೋಗ ಬರದಂತೆ ಜಾನುವಾರುಗಳನ್ನು ರಕ್ಷಿಸುವಂತೆ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.  

ಗುರ್ಲಾಪೂರದಲ್ಲಿ ಬುಧವಾರದಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಜರುಗಿದ ಉಚಿತ ಕಾಲುಬಾಯಿ ರೋಗ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ದಿ. 3 ರಿಂದ ಆರಂಭವಾಗಿರುವ ಲಸಿಕಾ ಅಭಿಯಾನವು ಡಿಸೆಂಬರ್ 2ರ ತನಕ ನಡೆಯಲಿದ್ದು, ಇದನ್ನು ಯಶಸ್ವಿಗೊಳಿಸುವಂತೆ ಪಶುಪಾಲಕರಲ್ಲಿ ಕೋರಿದರು.  

ರೈತರಿಗೆ ಆರ್ಥಿಕ ಸಂಕಷ್ಟಗಳನ್ನು ತಂದೊಡ್ಡುವ ಕಾಲು ಬಾಯಿ ರೋಗವನ್ನು ನಿಯಂತ್ರಿಸುವುದು ಅವಶ್ಯವಾಗಿದೆ. ಇದನ್ನು ನಿರ್ಮೂಲನೆ ಮಾಡಲು ಪ್ರತಿ 6 ತಿಂಗಳಿಗೊಮ್ಮೆ ಈ ರೋಗದ ವಿರುದ್ಧ ಲಸಿಕೆ ಹಾಕಿಸುವುದು ಕಡ್ಡಾಯವಾಗಿದೆ ಎಂದರು.  

ಪಶುಪಾಲನಾ ಇಲಾಖೆಯ ಮಾಹಿತಿಯಂತೆ ಮೂಡಲಗಿ ತಾಲ್ಲೂಕಿನಲ್ಲಿ 41707 ದನಗಳು ಮತ್ತು 58686 ಎಮ್ಮೆಗಳಿದ್ದು ಒಟ್ಟು ಒಂದು ಲಕ್ಷಕ್ಕೂ ಅಧಿಕ ಜಾನುವಾರುಗಳಿವೆ. 72 ಲಸಿಕೆದಾರರಿದ್ದು, ಪ್ರತಿ ಸಂಸ್ಥೆಗಳಿಂದ ತಂಡಗಳನ್ನು ರಚಿಸಿ ಗ್ರಾಮಗಳಲ್ಲಿರುವ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಲು ಈಗಾಗಲೇ ಇಲಾಖೆಗೆ ಸೂಚನೆಯನ್ನು ನೀಡಲಾಗಿದೆ ಎಂದು ತಿಳಿಸಿದರು.  

ಜಾನುವಾರುಗಳು ಈ ದೇಶದ ಆಸ್ತಿಯಾಗಿದ್ದು, ಇವುಗಳ ಸಂರಕ್ಷಣೆ ಮಾಡಬೇಕಾದುದ್ದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.  

ಮೂಡಲಗಿ ತಹಶೀಲ್ದಾರ ಶ್ರೀಶೈಲ ಗುಡುಮೆ, ಗೋಕಾಕ ತಹಶೀಲ್ದಾರ ಮೋಹನ ಭಸ್ಮ, ತಾ.ಪಂ. ಇಓಗಳಾದ ಎಫ್‌.ಜಿ. ಚಿನ್ನನವರ, ಪರಶುರಾಮ ಗಸ್ತೆ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮೋಹನ ಕಮತ, ಮೂಡಲಗಿ ಪುರಸಭೆಯ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.