ಆಹಾರ ನಮ್ಮನ್ನು ನಿಯಂತ್ರಿಸುತ್ತದೆ: ಪೂಜ್ಯ ಸಿದ್ದಲಿಂಗ ಶ್ರೀ

Food controls us: Siddalinga Sri

ತಾಳಿಕೋಟೆ 26: ನಮ್ಮ ಸುಖ-ದು;ಖಗಳಿಗೆ, ನಮ್ಮ ಮನಸ್ಸೇ ಕಾರಣವಾಗಿದ್ದು ಮನಸ್ಸಿನ ನಿಯಂತ್ರಣ ಸಾಧಿಸಿದವರು ಬದುಕಿನ ಏರುಪೇರುಗಳನ್ನು ಸಮನಾಗಿ ಸ್ವೀಕರಿಸಬಲ್ಲರು. ಆದ್ದರಿಂದ ಈ ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ಆಹಾರ ಶುದ್ಧ-ಸಸ್ಯಾಹಾರವಾಗಿರಬೇಕು. ನಮ್ಮ ಆಹಾರ ನಮ್ಮನ್ನು ನಿಯಂತ್ರಿಸುತ್ತದೆ. ಮನಸ್ಸಿಗೆ, ನೆಮ್ಮದಿ ಕೊಡದ ಆಹಾರ ಸೇವನೆ ಬಿಡಬೇಕು.ಕೊಂದು ತಿನ್ನುವ ವಿಕೃತಿ ನಮಗೆ ಬೇಡ ಎಂದು ಖಾಸ್ಗತೇಶ್ವರಮಠದ ಪೀಠಾಧಿಪತಿ ಸಿದ್ಧಲಿಂಗದೇವರು ಹೇಳಿದರು. 

 ಅವರು ಪಟ್ಟಣದ ಶಿವಯೋಗಿ ಧ್ಯಾನಮಂದಿರದ ವತಿಯಿಂದ ವಿಶ್ವಮಿತ್ರ ಲೈಟ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಶಿವಯೋಗಿ ಧ್ಯಾನಮಂದಿರದ ಉದ್ಘಾಟನೆ ಹಾಗೂ ಸಸ್ಯಾಹಾರ ಜನಜಾಗೃತಿ ಜಾಥಾಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಯಾವ ಗೀತೆ, ಶಾಸ್ತ್ರ, ಪುರಾಣಗಳಲ್ಲಿಯೂ, ಧರ್ಮ ಗ್ರಂಥಗಳಲ್ಲಿಯೂ ಪ್ರಾಣಿಗಳನ್ನು ಕೊಂದು ತಿನ್ನುವಂತೆ ಹೇಳಿಲ್ಲ. ಸಸ್ಯಾಹಾರಿಗಳಾಗಿ ಸಮಚಿತ್ತರಾಗಿ ಎಂದರು. ನೀಲಕಂಠೇಶ್ವರ ಸಭಾಭವನದಲ್ಲಿ ಧ್ಯಾನ ಮತ್ತು ಸತ್ಸಂಗ ಜರುಗಲಿದ್ದು ಅತಿಥಿಗಳಾಗಿದ್ದ ಗಂಗಾವತಿ ಬೂಧಗುಂಪಾದ ಶ್ರೀಧರಗೌಡ ಮಾತನಾಡಿ, ಪಿರಾಮಿಡ್ ಧ್ಯಾನಕೇಂದ್ರದ ಲಾಭವನ್ನು ಕಳೆದ 15 ವರ್ಷದಿಂದ ಪಡೆಯುತ್ತಿದ್ದೇನೆ. ಧ್ಯಾನ ಮಾಡುವ ಪೂರ್ವದಲ್ಲಿ ಇದ್ದ ದೇಹದ ಸ್ಥಿತಿ ಹಾಗೂ ಮಾನಸಿಕ ಆರೊಗ್ಯ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಾಗಿದೆ. ಆರೋಗ್ಯಪೂರ್ಣ ಬದುಕಿಗೆ ಧ್ಯಾನ ರಾಮಬಾಣವಾಗಿದೆ ಎಂದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಶರಣಗೌಡ ಬಿರಾದಾರ ಪೀರಾಪುರ, ನಾನು ಹಲವು ಧ್ಯಾನ ಶಿಬಿರಗಳಲ್ಲಿ ಭಾಗವಹಿಸಿರುವೆ. ಅದರ ಪ್ರಯೋಜನ ಅರಿತಿರುವೆ. ಪ್ರತಿನಿತ್ಯಬೆಳಿಗ್ಗೆ ನಾನು ನನ್ನ ಪರಿವಾರ ಅದನ್ನು ಆಚರಣೆಗೆ ತಂದಿದ್ದ ಅದರ ಲಾಭ ನಮಗಾಗಿದೆ. ತಾಳಿಕೋಟೆಯ ಜನತೆಗೂ ಇದರ ಲಾಭ ತಲುಪಿಸುವ ಉದ್ದೇಶದಿಂದ ಧ್ಯಾನಕೇಂದ್ರ ಪ್ರಾರಂಭಿಸಿದ್ದೇವೆ. ಪ್ರತಿ ಹುಣ್ಣಿಮೆಗೆ ಇಲ್ಲಿ ಸೇರಲಿದ್ದೇವೆ. ಇದು ಉಚಿತವಾಗಿರುತ್ತದೆ ಎಂದರು.ಹಲವು ಶಿಬಿರಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಶಿಬಿರದಲ್ಲಿ ಮುದ್ದೇಬಿಹಾಳ, ಇಲಕಲ್ಲ, ಮುಧೋಳ, ಲಿಂಗಸೂರು ಸೇರಿದಂತೆ ಹಲವಾರು ನಗರ ಪಟ್ಟಣಗಳಿಂದ ಬಂದಿದ್ದರು. ಬೆಳಿಗ್ಗೆ ಧ್ಯಾನದ ನಂತರ ನೀಲಕಂಠೇಶ್ವರ ದೇವಸ್ಥಾನದಿಂದ ರಾಜವಾಡೆ ಮಾರ್ಗವಾಗಿ ಜಾಥಾ ಜರತುಗಿತು. ಸಸ್ಯಾಹಾರದ ಪ್ರಮುಖ ಗೋಷಣೆಗಳ ಫಲಕ ಹಿಡಿದು ಘೋಷಣೆಗಳನ್ನು ಕೂಗುತ್ತ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು.ನಂತರ ರಡು ಗಂಟೆಗಳ ಕಾಲ ಸಂಗೀತ ವಾದ್ಯಗಳ ಸಹಯೋಗದಲ್ಲಿ ಧ್ಯಾನ ಶಿಬಿರ ನಡೆಸಲಾಯಿತು. 

 ವೇದಿಕೆಯಲ್ಲಿ ಡಾ.ಎಸ್‌.ಬಿ.ವಡವಡಗಿ, ಪ್ರಭು ಬನ್ನಿಗೋಳಮಠ, ಸುಭಾಸ ಸಾಲಂಕಿ, ಬಾಬು ಹಜೇರಿ, ಮಲ್ಲಿಕಾರ್ಜುನ ಹಿಪ್ಪರಗಿ, ಸುಭಾಸ ಅಲ್ಲಾಪುರ, ರಾಜು ಅಲ್ಲಾಪುರ, ರಾಜು ಅಲ್ಲಾಪುರ, ವೀಣಾ ಅಲ್ಲಾಪುರ ಇತರರಿದ್ದರು. ಇಂದುಮತಿ ಅಲ್ಲಾಪುರ ಹಾಗೂ ಅನಿತಾ ಅಲ್ಲಾಪುರ ನಿರ್ವಹಿಸಿದರು.