ಸವದತ್ತಿ ತಾಲೂಕಿಗೆ ಪ್ರಥಮ ಸ್ಥಾನ: ಗಾಯತ್ರಿ ಹುರಕಡ್ಲಿಗೆ ಸನ್ಮಾನ

ಸವದತ್ತಿ ತಾಲೂಕಿಗೆ ಪ್ರಥಮ ಸ್ಥಾನ:   ಗಾಯತ್ರಿ ಹುರಕಡ್ಲಿಗೆ ಸನ್ಮಾನ First place for Savadatti Taluk: Gayatri Hurakadli felicitated

ಸವದತ್ತಿ  12: 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸವದತ್ತಿ  ಪ್ರಥಮ ಹಾಗೂ ಬೆಳಗಾವಿ ಜಿಲ್ಲೆಗೆ 4ನೇ ಸ್ಥಾನ ಪಡೆದ ಸಾಧಕ ವಿದ್ಯಾರ್ಥಿನಿ ಕುಮಾರಿ ಗಾಯತ್ರಿ ಹುರಕಡ್ಲಿ ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು.ಮುನವಳ್ಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯಾದ ಗಾಯತ್ರಿ, ಅತ್ಯುತ್ತಮ ಅಂಕಗಳನ್ನು ಪಡೆಯುವ ಮೂಲಕ ತನ್ನ ಗ್ರಾಮ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ, ಹಿರೋರ ಗ್ರಾಮದಲ್ಲಿರುವ ಗಾಯತ್ರಿ ಅವರ ನಿವಾಸಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಆರ್‌. ಎಲ್‌. ಕದಂ ಅವರು ಭೇಟಿ ನೀಡಿ, ಇಲಾಖೆಯ ಪರವಾಗಿ ವಿದ್ಯಾರ್ಥಿನಿಯನ್ನು ಅಭಿನಂದಿಸಿ ಗೌರವಿಸಿದರು.

ಸನ್ಮಾನದ ನಂತರ ಮಾತನಾಡಿದ ಆರ್‌. ಎಲ್‌. ಕದಂ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂತಹ ಅಪ್ರತಿಮ ಸಾಧನೆ ಮಾಡಿದಾಗ ಇಲಾಖೆಗೆ ಮತ್ತು ಸಮಾಜಕ್ಕೆ ಹೆಮ್ಮೆ ಎನಿಸುತ್ತದೆ. ಕಠಿಣ ಪರಿಶ್ರಮವಿದ್ದರೆ ಯಾವುದೇ ಗುರಿಯನ್ನು ತಲುಪಲು ಸಾಧ್ಯ ಎಂಬುದನ್ನು ಗಾಯತ್ರಿ ಸಾಬೀತುಪಡಿಸಿದ್ದಾರೆ. ವಿದ್ಯಾರ್ಥಿನಿಯು ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದು ದೇಶದ ಉತ್ತಮ ಪ್ರಜೆಯಾಗಿ ಬೆಳೆಯಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಕುಟುಂಬಸ್ಥರು ಸೇರಿದಂತೆ ಇಲಾಖೆಯ ಸಿಬ್ಬಂದಿಯಾದ ಅನ್ನಪೂರ್ಣಾ ಗೌಡರ, ಎಮ್‌.ಎ.ತಹಶೀಲ್ದಾರ,ಜಿ.ಎನ್‌.ಅಲಮನ್ನವರ, ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯ ಈ ಅಮೋಘ ಸಾಧನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.