ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಕಂಡುಬಂದಲ್ಲಿ ದೂರು ಸಲ್ಲಿಸಿ: ಜಂಟಿ ಕೃಷಿ ನಿರ್ದೇಶಕರು

ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಕಂಡುಬಂದಲ್ಲಿ ದೂರು ಸಲ್ಲಿಸಿ: ಜಂಟಿ ಕೃಷಿ ನಿರ್ದೇಶಕರು File a complaint if you find fertilizer being sold at high prices: Joint Director of Agriculture

ಕೊಪ್ಪಳ 11 : ಕೊಪ್ಪಳ ಜಿಲ್ಲೆಗೆ ಬೇಡಿಕೆಯ ಅನ್ವಯ ರಸಗೊಬ್ಬರಗಳು ಸರಬರಾಜಾಗುತ್ತಿದ್ದು ಕೃಷಿ ಪರಿಕರ ಮಾರಾಟ ಮಳಿಗೆಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಿಸಲಾಗುತ್ತಿದೆ. ರಸಗೊಬ್ಬರಗಳ ವಿತರಣೆಯನ್ನು ಕೃಷಿ ಇಲಾಖೆಯಿಂದ ಉಸ್ತುವಾರಿ ಮಾಡಲಾಗುತ್ತಿದ್ದು, ಉಲ್ಲಂಘನೆಗಳು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.  

ಅದರಂತೆ ಯೂರಿಯಾ ರಸಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿರುವ ಕುರಿತು ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ) ಇವರ ಪರೀಶೀಲನೆಯಲ್ಲಿ ಕಂಡುಬಂದಿದ್ದು, ಮಾರಾಟಗಾರರಾದ ಕೊಪ್ಪಳದ ಎಸ್‌.ಜಿ.ಗಂಜ್‌ನ  ಶ್ರೀ ನಾಗರಾಜ ಟ್ರೇಡಿಂಗ್ ಕಂಪನಿಯ ರಸಗೊಬ್ಬರ ಮಾರಾಟ ಪರವಾನಿಗೆಯನ್ನು ರಸಗೊಬ್ಬರ ನಿಯಂತ್ರಣ ಆದೇಶ 1985 ರ ಕ್ಲಾಸ್ 3, 4, 5, 8 ಮತ್ತು 35 ರ ಉಲ್ಲಂಘನೆಗಳಿಗಾಗಿ ಅಮಾನತ್ತುಗೊಳಿಸಲಾಗಿದೆ ಹಾಗೂ ಕನಕಗಿರಿಯ ತಾವರಗೇರಾ ರಸ್ತೆಯ ಲಲಿತಾ ಟ್ರೇಡರ್ಸ್‌ ಮಳಿಗೆಯು ಯೂರಿಯಾ ರಸಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದಕ್ಕಾಗಿ ರಸಗೊಬ್ಬರ ಮಾರಾಟ ಪರವಾನಿಗೆಯನ್ನು ಅಮಾನತ್ತುಗೊಳಿಸಲಾಗಿರುತ್ತದೆ. ರಸಗೊಬ್ಬರ ನಿಯಂತ್ರಣ ಆದೇಶ 1985 ರ ಉಲ್ಲಂಘನೆಗಾಗಿ ಕಾರಟಗಿ ತಾಲ್ಲೂಕಿನ ಸಿದ್ದಾಪೂರದ ಶ್ರೀ ಸಪ್ತಗಿರಿ ಟ್ರೇಡರ್ಸ್‌ ಹಾಗೂ ಗಂಗಾವತಿಯ ಅದಿತಿ ಏಜೇನ್ಸಿಸ್ ಇವರ ರಸಗೊಬ್ಬರ ಮಾರಾಟ ಪರವಾನಿಗೆಗಳನ್ನು ರದ್ದುಗೊಳಿಸಲಾಗಿರುತ್ತದೆ. 

ರೈತರು ರಸಗೊಬ್ಬರ ಖರೀದಿಸುವ ಸಮಯದಲ್ಲಿ ಮಾರಾಟಗಾರರು ಖರೀದಿ ಬಿಲ್ ಅನ್ನು ನೀಡದೇ ಇದ್ದಲ್ಲಿ ಅಥವಾ ಕೃಷಿ ಪರಿಕರಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಥವಾ ಕಳಪೆ ಗುಣಮಟ್ಟದ ರಸಗೊಬ್ಬರ ಕಂಡುಬಂದಲ್ಲಿ ಕೃಷಿ ಅಧಿಕಾರಿ ಅಥವಾ ಸಹಾಯಕ ಕೃಷಿ ನಿರ್ದೇಶಕರು ಅಥವಾ ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ), ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೊಪ್ಪಳ ಮೊ.ಸಂ. 8277932117 ಇವರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.