ನೇತ್ರ ಆರೋಗ್ಯ ದಿನಾಚರಣೆ ಮತ್ತು ಜಾಗೃತಿ ಕಾರ್ಯಕ್ರಮ

ನೇತ್ರ ಆರೋಗ್ಯ ದಿನಾಚರಣೆ ಮತ್ತು  ಜಾಗೃತಿ ಕಾರ್ಯಕ್ರಮ Eye Health Day and Awareness Program

        ಯಮಕನಮರಡಿ 25 :  ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದಲ್ಲಿ ಫೋರ್ ಸೈಟ್ ಫೌಂಡೇಶನ್ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ಅಭಯ ಆರೋಗ್ಯ ಶಿಬಿರದಲ್ಲಿ ನೇತ್ರ ತಜ್ಞರ ದಿನಾಚರಣೆ ಅಂಗವಾಗಿ ನೇತ್ರ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.  

ಕಾರ್ಯಕ್ರಮದಲ್ಲಿ ಮಾತನಾಡಿದ ಅಭಯ ಯೋಜನೆ ಮ್ಯಾನೇಜರ್ ಯೋಗೇಶ್ ಜೋಶಿ ಅವರು, ನೇತ್ರ ಆರೋಗ್ಯದ ಮಹತ್ವವನ್ನು ವಿವರಿಸಿ, ಕಣ್ಣುಗಳ ಆರೈಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ ಎಂದು ಹೇಳಿದರು. ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದರಿಂದ ಅನೇಕ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.  

ಈ ವೇಳೆ ಸಂಯೋಜಕಿ ಸುರೇಖಾ ಪಾಟೀಲ ಅವರು ನೇತ್ರದಾನದ ಮಹತ್ವವನ್ನು ವಿವರಿಸಿ, ಮರಣಾನಂತರ ಕಣ್ಣುಗಳನ್ನು ದಾನ ಮಾಡುವ ಮೂಲಕ ಇತರರ ಜೀವನದಲ್ಲಿ ಬೆಳಕು ತರಬಹುದು ಎಂದು ಹೇಳಿದರು.  ನೇತ್ರ ತಜ್ಞರ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ನೇತ್ರ ತಜ್ಞರಾದ ಡಾ. ಸತೀಶ್ ಬಿ.ಡಿ., ಡಾ. ಪುಟ್ನಂಜಯ್ಯ ಹಿರೇಮಠ್, ಡಾ. ಐಶ್ವರ್ಯ ಕೆ. ಮಾಳಗಿ, ಡಾ. ವಿನಾಯಕ ವಿ. ಚಾವಡಿ ಹಾಗೂ ಡಾ. ಪ್ರತಿಕ್ ಎಸ್‌. ಹೊನಮನೆ ಉಪಸ್ಥಿತರಿದ್ದರು.  

       ಕಾರ್ಯಕ್ರಮದಲ್ಲಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡು, ಸ್ಥಳೀಯ ಜನರಿಗೆ ಸೇವೆ ಸಲ್ಲಿಸಿದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದರು.