ನೀರಿನ ಮೂಲಗಳ ಸುರಕ್ಷತೆ ಕಾಪಾಡುವ ಆದ್ಯತೆಯಾಗಲಿ: ಡಾ.ಮರಿಯಂಬಿ

ನೀರಿನ ಮೂಲಗಳ ಸುರಕ್ಷತೆ ಕಾಪಾಡುವ ಆದ್ಯತೆಯಾಗಲಿ: ಡಾ.ಮರಿಯಂಬಿ Ensuring the safety of water sources should be a priority: Dr. Mariambi

ಬಳ್ಳಾರಿ 19: ಜಿಲ್ಲೆಯ ನಗರ ಪ್ರದೇಶಗಳಲ್ಲಿನ ನೀರಿನ ಮೂಲಗಳ ಸುರಕ್ಷತೆ ಕಾಪಾಡುವ ಆದ್ಯತೆಯು ನೀರು ಸರಬರಾಜು ಮಾಡುವ ಜವಬ್ದಾರಿ ಸಿಬ್ಬಂದಿಯವರದ್ದಾಗಬೇಕು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಬಳ್ಳಾರಿ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನೀರು ಸರಬರಾಜು ಮಾಡುವ ಮಹಾನಗರ ಪಾಲಿಕೆಯ ಸಿಬ್ಬಂದಿಯವರಿಗೆ ಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕುಡಿಯುವ ನೀರಿನ ಪೈಪ್ ಲೈನ್ ಚರಂಡಿ ಪಕ್ಕದಲ್ಲಿ ಹಾದು-ಹೋದಲ್ಲಿ ನಿರಂತರ ನಿಗಾ ವಹಿಸಬೇಕು. ಪೈಪ್ ಲೈನ್ ದುರಸ್ಥಿ ಕಂಡುಬಂದಲ್ಲಿ ಸಾರ್ವಜನಿಕರಿಗೆ ಈ ಕುರಿತು ಜಾಗೃತಿ ನೀಡಬೇಕು. ಒಂದು ಸಾವಿರ ಲೀಟರ್‌ಗೆ ನಾಲ್ಕು ಗ್ರಾಂ (ಶೇ.33 ರಷ್ಟು) ಬ್ಲೀಚಿಂಗ್ ಪೌಡರ್ ಪ್ರಮಾಣ ನಿಗಧಿಪಡಿಸಿ ಕ್ಲೋರಿನೇಷನ್ ಮಾಡುವ ವಿಧಾನ ತಪ್ಪದೇ ಅನುಸರಿಸಬೇಕು ಎಂದು ನೀರು ಸರಬರಾಜು ಮಾಡುವ ಮಹಾನಗರ ಪಾಲಿಕೆಯ ಸಿಬ್ಬಂದಿಯವರಿಗೆ ತಿಳಿಸಿದರು.ವಾಂತಿ-ಭೇದಿ ಕಂಡು ಬಂದಲ್ಲಿ ಆರೋಗ್ಯ ಇಲಾಖೆಯಿಂದ ನೀಡುವ ಓಆರ್‌ಎಸ್ ಪೊಟ್ಟಣವನ್ನು ಒಂದು ಲೀಟರ್ ನೀರಿಗೆ ಬೆರೆಸಿ 24 ಗಂಟೆಯೊಳಗೆ ಸೇವಿಸಲು ಸೂಚಿಸಬೇಕು. ಬಡಾವಣೆ ಹಾಗೂ ಕುಟುಂಬದಲ್ಲಿ ಯಾರಿಗಾದರು ವಾಂತಿ ಭೇದಿ ಕಂಡುಬಂದಲ್ಲಿ ಕುದಿಸಿ ಆರಿಸಿ ಸೋಸಿದ ನೀರನ್ನು ಸೇವಿಸಲು ತಿಳಿಸಬೇಕು ಎಂದು ಹೇಳಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾಲರಾ ನಿಯಂತ್ರಣ ತಂಡದ ಸದಸ್ಯರು ನಿರಂತರವಾಗಿ ಎಲ್ಲಾ ವಾರ್ಡ್‌ಗಳಿಗೆ ಭೇಟಿ ನೀಡುತ್ತಿದ್ದು, ಯಾವುದೇ ಸಂದರ್ಭದಲ್ಲಿ ಕುಡಿಯುವ ನೀರು ಸರಬರಾಜಿನ ಪೈಪ್ ಸೋರಿಕೆ ಕಂಡುಬಂದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಬೇಕು. ದುರಸ್ಥಿ ಮಾಡುವುದರ ಜೊತೆಗೆ ನಗರದಲ್ಲಿ ಕಂಡುಬರುವ ಸಂಭವನೀಯ ವಾಂತಿ ಭೇದಿ ಪ್ರಕರಣಗಳ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ವಿನಂತಿಸಿದರು.

ಬಳ್ಳಾರಿ ನಗರದಲ್ಲಿ ನೀರು ಸರಬರಾಜು ಮಾಡುವ ಮಹಾನಗರ ಪಾಲಿಕೆಯ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರಿಗೆ ಗುಣಮಟ್ಟದ ನೀರನ್ನು ಕೊಡುವ ಸಂದರ್ಭದಲ್ಲಿ ನಿರಂತರ ನೀರಿನ ಪರೀಕ್ಷೆಗಳನ್ನು ಕೈಗೊಳ್ಳಬೇಕು. ಆರೋಗ್ಯ ಇಲಾಖೆಯಿಂದ ನೀಡುವಂತಹ ತಾಂತ್ರಿಕ ಸಲಹೆಗಳನ್ನು ಪಾಲಿಸುವುದರ ಜೊತೆಗೆ ಮುಖ್ಯವಾಗಿ ನೀರು ಶುದ್ಧೀಕರಣ ಸಂದರ್ಭದಲ್ಲಿ ತಾಂತ್ರಿಕ ಕ್ರಮಗಳನ್ನು ಅನುಸರಿಸುವಂತೆ ಮಹಾನಗರ ಪಾಲಿಕೆಯ ಆಯುಕ್ತರು ತಮ್ಮ ಸಿಬ್ಬಂದಿಗಳಿಗೆ ಸೂಚಿಸಿದರು.ನೀರು ಸರಬರಾಜು ಮಾಡುವ ಸಂದರ್ಭದಲ್ಲಿ ಎಲ್ಲಾ ಬಡಾವಣೆಗಳಲ್ಲಿನ ನೀರಿನ ನಳಗಳು ಇರುವಂತಹ ಸ್ಥಳಗಳಲ್ಲಿ ನೀರು ನಿಲ್ಲದಂತೆ ಜನತೆಗೆ ಜಾಗೃತಿ ನೀಡಬೇಕು. ಆರಂಭಿಕ ನೀರನ್ನು ನೀರು ಬಿಟ್ಟಂತಹ ಸಂದರ್ಭದಲ್ಲಿ ನೀರನ್ನು ಸಂಗ್ರಹಿಸದೇ ಕನಿಷ್ಟ 2-3 ನಿಮಿಷಗಳ ನಂತರ ಆ ನೀರನ್ನು ಕುಡಿಯಲು ಮತ್ತು ಬಳಸಲು ಸಂಗ್ರಹಿಸಬೇಕು ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಯಾವುದೇ ಪೈಪ್ ಲೈನ್‌ಗಳು ದುರಸ್ಥಿ ಇದ್ದಲ್ಲಿ, ಮಹಾನಗರ ಪಾಲಿಕೆ ಕಚೇರಿಗೆ ಗಮನಕ್ಕೆ ತರಬೇಕು. ನಗರದಲ್ಲಿ ಶುದ್ಧ ನೀರು ಸರಬರಾಜಿಗೆ ಸಾರ್ವಜನಿಕರು ಸಹ ಸಹಕಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು, ಸಹಾಯಕ ಪಾಲಕ ಅಭಿಯಂತರರು, ನಗರ ವಾರ್ಡ್‌ಗಳ ಕಿರಿಯ ಅಭಿಯಂತರರು, ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾ ಕಚೇರಿ ಮತ್ತು ಜಿಲ್ಲಾ ಕಾಲರ ನಿಯಂತ್ರಣ ತಂಡದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಮಹಾನಗರ ಪಾಲಿಕೆ ನೀರು ಸರಬರಾಜು ಕಾರ್ಮಿಕರು, ಒಳಚರಂಡಿ ಕಾರ್ಮಿಕರು ಹಾಜರಿದ್ದರು.