ಶ್ರವಣದೋಷವುಳ್ಳ ವಿಶೇಷ ಚೇತನರಿಗೆ ಸಾಧನ ಸಲಕರಣೆ ವಿತರಣೆ

ಶ್ರವಣದೋಷವುಳ್ಳ ವಿಶೇಷ ಚೇತನರಿಗೆ ಸಾಧನ ಸಲಕರಣೆ ವಿತರಣೆ Distribution of aids and equipment to the hearing impaired

ಬೆಳಗಾವಿ 26: ಇಲ್ಲಿನ ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರದಲ್ಲಿ ಸಮರ್ಥನಂ ಸಂಸ್ಥೆ ಹಾಗೂ ಎಸ್‌ಬಿಐ ಫೌಂಡೇಶನ್ ಸಹಯೋಗದೊಂದಿಗೆ ಇತ್ತೀಚೆಗೆ ಶ್ರವಣದೋಷವುಳ್ಳ ವಿಶೇಷ ಚೇತನರಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಬೆಳಗಾವಿ ಶಾಖಾ ಮುಖ್ಯಸ್ಥ ಅರುಣಕುಮಾರ್ ಎಮ್‌. ಜಿ. ಅವರು ವಹಿಸಿದ್ದರು. 

ಯೋಜನಾ ಸಂಯೋಜಕ ಶಿವಕುಮಾರ ಹಲ್ಯಾಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಮನ್ವಯ ಶಿಕ್ಷಣದ ಮಹತ್ವ, ವಿಶೇಷ ಚೇತನ ಮಕ್ಕಳ ಬೆಳವಣಿಗೆಯಲ್ಲಿ ಪಾಲಕರು ಮತ್ತು ಶಿಕ್ಷಕರ ಪಾತ್ರ ಹಾಗೂ ಸಾಧನ ಸಲಕರಣೆಗಳ ಸದುಪಯೋಗದ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯು ಜಿಲ್ಲೆಯ ಆಯ್ದ ಶಾಲೆಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಅವರು ಸ್ಮರಿಸಿದರು. ಮತ್ತೊಬ್ಬ ಯೋಜನಾ ಸಂಯೋಜಕಿ ಶಾಹಿದಾ ಮುಲ್ತಾನಿ ಮಾತನಾಡಿ, ಸಮನ್ವಯ ಶಿಕ್ಷಣ ಯೋಜನೆಯಡಿ ಅಂಗವಿಕಲ ಸ್ನೇಹಿ ಶೌಚಾಲಯ, ಕೊಠಡಿ ದುರಸ್ತಿ, ರಾಂಪ್ ನಿರ್ಮಾಣ, ಸ್ಮಾರ್ಟ್‌ ಬೋರ್ಡ್‌ ಹಾಗೂ ಅರ್ಹ ಫಲಾನುಭವಿಗಳಿಗೆ ಕೃತಕ ಕಾಲು, ಗಾಲಿಕುರ್ಚಿ, ವಾಟರ್ ಬೆಡ್ ಸೇರಿದಂತೆ ವಿವಿಧ ಉಪಕರಣಗಳನ್ನು ವಿತರಿಸುತ್ತಿರುವ ಬಗ್ಗೆ ವಿವರಿಸಿದರು. 

ಸಂಸ್ಥೆಯ ವಿಶೇಷ ಶಿಕ್ಷಕ ಸತ್ತೆಪ್ಪಾ ರಾಚಪ್ಪನವರ, ಶುಭಂ ಕಿತ್ತೂರ, ಅನಿಲ ಶಿಂದೋಳಿ, ಹನುಮಂತ ಅನ್ನಿಗೇರಿ ಹಾಗೂ ಪಾಲಕರು ಮತ್ತು ಮಕ್ಕಳು ಪಾಲ್ಗೊಂಡಿದ್ದರು. ಸಂಸ್ಥೆಯ ಈ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದರು.