ವಿಜಯಪುರ ಜಿಲ್ಲೆಯನ್ನು 371ಜೆ ಮೀಸಲಾತಿಗೆ ಸೇರಿಸಲು ಆಗ್ರಹ

ವಿಜಯಪುರ ಜಿಲ್ಲೆಯನ್ನು 371ಜೆ ಮೀಸಲಾತಿಗೆ ಸೇರಿಸಲು ಆಗ್ರಹ Demand to include Vijayapura district in 371J reservation

ವಿಜಯಪುರ 23:  ಜಿಲ್ಲೆಯನ್ನು 371ಜೆ ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಪದಾಧಿಕಾರಿಗಳು ವಿಜಯಪುರ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಮೂಲಕ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಬೆಂಗಳೂರು ಮನವಿ ಸಲ್ಲಿಸಲಾಯಿತು. 

ಈ ಸಂದರ್ಬದಲ್ಲಿ  ಜಯ ಕರ್ನಾಟಕ ರಕ್ಷಣಾ ಸೆನೆಯ ಜಿಲ್ಲಾಧ್ಯಕ್ಷ ಕೃಷ್ಣಾ ಭೋಸಲೆ ಮಾತನಾಡಿ, ವಿಜಯಪುರ ಜಿಲ್ಲೆಗೆ ಆದ ಐತಿಹಾಸಿಕ ಅನ್ಯಾಯ ಸರಿಪಡಿಸಲು 371ಜೆ ಮೀಸಲಾತಿ ಒದಗಿಸುವುದಾಗಿ  ಪಕ್ಷದವರು ಹಾಗೂ ಪಕ್ಷೇತರ ಅಭ್ಯರ್ಥಿಗಳು ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ವಿಜಯಪುರ ಜಿಲ್ಲೆಯನ್ನು 371ಜೆ ಮೀಸಲಾತಿಗೆ ಸೇರಿಸಬೇಕು. ವಿಜಯಪುರ ಜಿಲ್ಲೆಯು ಅತಿ ಹಿಂದುಳಿದ ಪ್ರದೇಶವಾಗಿದೆ. ಮೀಸಲಾತಿ ವಿರೋಧಿಸಿದ ಪಕ್ಷ ಮತ್ತು ಮುಖಂಡರು ಯುವ ಜನರ ಮತ ಪಡೆಯುವಗೋಸ್ಕರ 371 ಜೆ ಕಲ್ಯಾಣ ಕರ್ನಾಟಕ ಮೀಸಲಾತಿಯನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು. ಚುನಾವಣೆ ಮುಗಿದ ನಂತರ ಯಾವೊಬ್ಬ ಜನಪ್ರತಿನಿಧಿಗಳು ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಶೈಕ್ಷಣಿಕ ಹಾಗೂ ಉದ್ಯೋಗದ ಮೀಸಲಾತಿ ಒದಗಿಸುವ ಪಯತ್ನ ಮಾಡದೇ ಇರವುದು ದುರಂತದ ಸಂಗತಿ. ಪದೇ ಪದೇ ಸುಳ್ಳು ಭರವಸೆಗಳನ್ನು ರಾಜಕಾರಣಿಗಳು ನೀಡಿ ಜನರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ. ಇಂದಿಗೆ ಮೀಸಲಾತಿ ಜಾರಿಯಾಗಿ 10 ವರ್ಷ ಗತಿಸಿವೆ. ಜಿಲ್ಲೆಯು ಅಭಿವೃದ್ಧಿಯಿಂದ ಹತ್ತು ವರ್ಷ ವಂಚಿತವಾಯಿತು. 

ಈ ಸಂದರ್ಭದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಮಂಜುಳಾ ವಾಲಿ ಮಾತನಾಡಿ, ವಿಜಯಪುರ ಜಿಲ್ಲೆಯು 371 ಜೆ ವಿಶೇಷ ಸ್ಥಾನ ಮಾನ ಪಡೆಯಲು ಎಲ್ಲ ಅರ್ಹತೆ ಹೊಂದಿದೆ. ಜೊತೆಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಹಾಗೂ ಕಲಬುರಗಿ ಉಚ್ಛ ನ್ಯಾಯಾಲಯ ಪೀಠದ ಆಧೀನದಲ್ಲಿ ಜಿಲ್ಲೆಯು ಒಳಪಟ್ಟಿದೆ. ಕೂಡಲೇ ವಿಜಯಪುರ ಜಿಲ್ಲೆಯನ್ನು ಬಿಟ್ಟು ಹೋದ ಪ್ರದೇಶವೆಂದು ಪರಿಗಣಿಸಿ 371ಜೆ ಮೀಸಲಾತಿ ಅಡಿ ಸೇರಿಸಿ ಈ ಭಾಗದ ಪ್ರತಿಯೊಬ್ಬ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಗಳವೆ, ಜಿಲ್ಲಾಧ್ಯಕ್ಷರಾದ ವಾಣೀಶ್ರೀ ಪಟ್ಟಣಶೆಟ್ಟಿ, ಬಸವನ ಬಾಗೇವಾಡಿ ತಾಲೂಕಾಧ್ಯಕ್ಷರಾದ ಸಿದ್ದಮ್ಮ ಹೇರೂರ, ಜಿಲ್ಲಾ ಉಪಾಧ್ಯಕ್ಷರಾದ ಸಮಿತ್ರಾ ಪಟ್ಟಣಶೆಟ್ಟಿ, ಎಸ್ಸಿ ಎಸ್ಟಿ ಘಟಕ ಜಿಲ್ಲಾಧ್ಯಕ್ಷ ಯಮನಪ್ಪ ಬೂದಿಹಾಳ, ಜಿಲ್ಲಾ ಕಾನೂನು ಸಲಹೆಗಾರರಾದ ಉತ್ತಮ ಹೊಸಮನಿ, ವಿಜಯಪುರ ತಾಲೂಕಾಧ್ಯಕ್ಷರಾದ ವಿಠ್ಠಲ ತಳವಾರ, ಜಿಲ್ಲಾ ಮುಖಂಡರಾದ ಸಕಾರಾಮ ಪವಾರ, ಜಿಲ್ಲಾ ಮುಖಂಡರಾದ ರಾಜು ಕೋಟ್ಯಾಳ, ಕೇಧಾರನಾಥ ರಜಪೂತ,ಶಂಕರಗೌಡ ಬಿರಾದಾರ, ಮಹಾದೇವ ಢಗೆ, ರಾಜು ಬಿಸೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.