ನೇಣಿಗೆ ಶರಣಾದ ರೈತನಿಗೆ ಪರಿಹಾರಕ್ಕೆ, ಸೂಸೈಟಿ ವಿರುದ್ಧ ಕ್ರಮಕ್ಕೆ ಒತ್ತಾಯ

ನೇಣಿಗೆ ಶರಣಾದ ರೈತನಿಗೆ ಪರಿಹಾರಕ್ಕೆ, ಸೂಸೈಟಿ ವಿರುದ್ಧ ಕ್ರಮಕ್ಕೆ ಒತ್ತಾಯ  Demand for compensation for farmer who committed suicide, action against suicide bomber


ಬೆಳಗಾವಿ 06: ಮಾರ್ಕಂಡೇಯ ಸೂಸೈಟಿಯವರ ಕಿರುಕುಳ ತಾಳಲಾರದೇ ನೇಣಿಗೆ ಶರಣಾದ ಕಡೋಲಿ ಗ್ರಾಮದ ರೈತನಿಗೆ ಪರಿಹಾರ ಒದಗಿಸುವಂತೆ ಹಾಗೂ ಸೂಸೈಟಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.  

ಕಡೋಲಿ ಗ್ರಾಮದ ರೈತ ಸಾತೇರಿ ಹೊನ್ನಪ್ಪ ರುಟಕಟೆ ಎಂಬುವರು ಮಾರ್ಕಂಡೇಯ ಸೂಸೈಟಿಯಿಂದ 12 ಲಕ್ಷ ರೂ. ಮನೆ ಮೇಲೆ ಸಾಲ ಪಡೆದಿದ್ದರು. ಕೃಷಿಯಲ್ಲಿ ನಷ್ಟ ಅನುಭವಿಸಿದ್ದರಿಂದ ಸಾಲ ಮರುಪಾವತಿಸಲು ಸಾಧ್ಯವಾಗಲಿಲ್ಲ. ಅ.31 ರಂದು ಸಾಲ ಮರುಪಾವತಿಗೆ ಕೊನೆ ದಿನಾಂಕ ನಿಗದಿಯಾಗಿದ್ದರೂ, ಅ.25 ರಂದು ಸೊಸೈಟಿ ಸಿಬ್ಬಂದಿಗಳು ಮನೆಗೆ ತೆರಳಿ ಸಾಲ ಕಟ್ಟಬೇಕು ಇಲ್ಲದಿದ್ದರೆ ಮನೆ ಹರಾಜು ಮಾಡುವುದಾಗಿ ಕಿರುಕುಳ ನೀಡಿದ್ದಾರೆ. ಅಲ್ಲದೇ ಊರಿನ ತುಂಬೆಲ್ಲಾ ಮನೆ ಹರಾಜುಗೊಳಿಸಲಾಗುವುದು  ಎಂದು ಊರೆಲ್ಲಾ ಡಂಗೂರ ಸಾರಿದ್ದಾರೆ. ಇದರಿಂದ ಮನನೊಂದ ರೈತ ಅ.31 ರ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ಸೊಸೈಟಿ ಸಿಬ್ಬಂದಿಗಳು ನೀಡಿದ ಕಿರುಕುಳವೇ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದರು.   

ಸಾಲ ವಸೂಲಾತಿಯ ಸರಕಾರದ ನಿಯಮಗಳನ್ನು ಪಾಲಿಸದ ಸರಕಾರದ ನಿಯಮಗಳನ್ನು ಪಾಲಿಸಿದ ಸೂಸೈಟಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಆತ್ಮಹತ್ಯೆಗೆ ಶರಣಾದ ಬಡ ರೈತನ ಕುಟುಂಬಕ್ಕೆ ಪರಿಹಾರ ನೀಡಿ, ಸಂಪೂರ್ಣ ಸಾಲ ಮನ್ನಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಈ ವೇಳೆ ರೈತ ಮುಖಂಡರಾದ ಅಪ್ಪಾಸಾಹೇಬ ದೇಸಾಯಿ, ಸುಭಾಷ ಧಾಯಗೊಂಡ, ರಾಜು ಕಾಗಣಿಕರ, ಫಕೀರಾ ಸದಾವರ, ರಾಮನಗೌಡ ಪಾಟೀಲ, ಮಾರುತಿ ಕಡೆಮನಿ, ಚಂದ್ರಾಮ ರಾಜಾಯಿ, ನಾಮದೇವ ದುಡುಮ ಸೇರಿದಂತೆ ಇತರರಿದ್ದರು.