ಮಳೆ ಅಬ್ಬರಕ್ಕೆ ಬೆಳೆ ಹಾನಿ

Crop damage due to heavy rain

ಶಿಗ್ಗಾವಿ 14 : ತಾಲೂಕಿನಾದ್ಯಂತ ಸತತ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದ್ದು, ಕರೆ-ಕಟ್ಟೆ, ಹಳ್ಳ-ಕೊಳ್ಳ ತುಂಬಿ ಹರಿಯುತ್ತಿದ್ದು, ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳೆಲ್ಲ ನೀರಿನಲ್ಲಿ ನಿಂತಿದ್ದು ರೈತ ಸಮುದಾಯ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ಈ ಭಾರಿ ಮುಂಗಾರು ಪೂರ್ವ ಮಳೆ ಚೆನ್ನಾಗಿ ಆಗಿದ್ದರಿಂದ ಜಿಲ್ಲೆಯಲ್ಲಿ ಶೇ.50ರಷ್ಟು ರೈತರು ಪ್ರಮುಖವಾಗಿ ಹೆಸರು, ಮೆಕ್ಕೆಜೋಳ, ಹತ್ತಿ, ಶೇಂಗಾ, ಜೋಳ ಸೇರಿದಂತೆ ಮತ್ತಿತರ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಳೆ ಅಬ್ಬರಿಸಿದ್ದು, ತಗ್ಗು ಪ್ರದೇಶದ ಮನೆಗಳಿಗೆ, ಹೊಲಗಳಿಗೆ ನೀರು ನುಗ್ಗಿ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ. ಬುಧವಾರ, ಗುರುವಾರ, ಶುಕ್ರವಾರ ಸಂಜೆಯಿಂದ ನಿರಂತರ 4-6 ಗಂಟೆಗಳ ಕಾಲ ಸುರಿದ ಮಳೆಗೆ ಮೆಕ್ಕೆಜೋಳ, ಹೆಸರು, ಸಸಿಗಳು, ಅಡಿಕೆ, ಬಿತ್ತನೆ ಮಾಡಿದ ಸೋಯಾಬಿನ್ ನೀರಿನಲ್ಲಿ ನಿಂತಿದ್ದರೆ, ಇನ್ನೂ ಕೆಲವು ರೈತರು ಎರಡು ದಿನಗಳ ಹಿಂದೆ ಬಿತ್ತನೆ ಮಾಡಿದ್ದವರು ಪರಿಸ್ಥಿತಿ ಇದೆ ಆಗಿದೆ. ಜಮೀನು ಹದಗೊಳಿಸಿ, ಬೀಜ ಗೊಬ್ಬರ ಖರೀದಿ ಪ್ರತಿ ಎಕರೆಗೆ ಸಾವಿರಾರು ಖರ್ಚು ಮಾಡಿದ್ದ ರೈತರಿಗೆ ಮಳೆಯ ಅಬ್ಬರ ದಿಕ್ಕು ತೋಚದಂತಾಗಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆಗಳು ಸಂಪೂರ್ಣ ನೀರಿನಲ್ಲಿ ನಿಂತುಕೊಂಡಿವೆ.

ಜಿಲ್ಲಾಡಳಿತದ ಸೂಚನೆಯ ಪ್ರಕಾರ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗಿದ್ದು, ರಾಜ್ಯ ಹವಾಮಾನ ಇಲಾಖೆ ವರದಿಯಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸಹ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ತಾಲೂಕಿನ ತಹಶಿಲ್ದಾರ ಸೇರಿದಂತೆ ಕೃಷಿ ಅಧಿಕಾರಿಗಳು ಕ್ರಮ ಕೈಗೊಂಡರೆ ಮುಂದೆ ಆಗುವ ಭಾರಿ ಪ್ರಮಾಣದ ಬೆಳೆಹಾನಿಯನ್ನು ತಡೆಯಬಹುದು ಎಂದು ರೈತ ಮುಖಂಡರ ಅಭಿಪ್ರಾಯವಾಗಿದೆ.