ವಿಜಯಪುರ 09: ವಿದ್ಯಾರ್ಥಿಗಳು ಬದಲಾಗುತ್ತಿರುವ ಕಾರ್ೊರೇಟ್ ಜಗತ್ತಿಗೆ ಅಗತ್ಯವಾಗಿರುವ ಕೌಶಲ್ಯಗಳನ್ನು ಒಡಮೂಡಿಸಿಕೊಂಡಾಗ ಮಾತ್ರ ಕಂಪನಿಗಳ ಆಡಳಿತ ನಿರ್ವಹಣೆ, ವ್ಯವಸ್ಥಾಪನೆ ಹಾಗೂ ಮಾರುಕಟ್ಟೆ, ಫೈನಾನ್ಸ್, ವಿಮೆ, ಸಾರಿಗೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ, ಮಾನವ ಸಂಪನ್ಮೂಲ ನಿರ್ವಹಣೆ, ಬ್ಯಾಂಕಿಂಗ್ನಂತಹ ಕ್ಷೇತ್ರಗಳಲ್ಲಿ ಅರ್ಹತೆಯನ್ನು ಪಡೆಯಲು ಸಾಧ್ಯ. ವಿಷಯ ಜ್ಞಾನದ ಜತೆಗೆ ಪ್ರಾಯೋಗಿಕತೆ, ತಾಂತ್ರಿಕ ಜ್ಞಾನ, ಗಣಕವಿಜ್ಞಾನದ ಬಳಕೆ ಮತ್ತು ಬಹು ಮುಖ್ಯವಾಗಿ ಸಂಪರ್ಕ-ಸಂವಹನ ಕಲೆಯಂತಹ ವಿಶೇಷ ಕೌಶಲ್ಯಗಳನ್ನು ಹೊಂದುತ್ತಾ ದೊರೆಯುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಬಿ.ಎಲ್.ಡಿ.ಇ. ಸಂಸ್ಥೆಯ ಫ.ಗು.ಹಳಕಟ್ಟಿ ಇಂಜನೀಯರಿಂಗ್ ಕಾಲೇಜಿನ ಮ್ಯಾನೇಜಮೆಂಟ್ ಸ್ಟಡೀಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಸುಮಂಗಲಾ ಬದಾಮಿ ಅವರು ಸಲಹೆ ನೀಡಿದರು.
ಅವರು ನಗರದ ನವಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ವಿಭಾಗವು ಆಯೋಜಿಸಿದ್ದ ಬಿ.ಕಾಂ ಮತ್ತು ಬಿ.ಬಿ.ಎ ಪದವಿ ನಂತರ ಮುಂದೇನು?” ಎಂಬ ವಿಷಯ ಕುರಿತು ಆಯೋಜಿಸಿದ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಾಫಲ್ಯ ಪಡೆಯಬೇಕಾದರೆ ಕೌಶಲ್ಯಗಳು ಅಗತ್ಯ. ಅವುಗಳಲ್ಲಿ ಕ್ರಿಯಾತ್ಮಕ ಚಿಂತನೆ, ವಿಭಿನ್ನವಾದ ಆಲೋಚನೆಗಳನ್ನು ಬಳಸಿಕೊಂಡು ತಮ್ಮಲ್ಲಿರುವ ಶಕ್ತಿ-ಸಾಮರ್ಥ, ಕೊರತೆ, ಅವಕಾಶಗಳು ಮತ್ತು ಮುಂದಿನ ಸವಾಲುಗಳ ಬಗ್ಗೆ ವಿಶ್ಲೇಷಣೆ ಮಾಡುತ್ತಾ ಕೊರತೆಗಳನ್ನು ಸಾಧ್ಯತೆಗಳನ್ನಾಗಿ ಪರಿವರ್ತಿಸುವ ವಿಶೇಷ ಗುಣಗಳನ್ನು ಹೊಂದಬೇಕಾಗಿದೆ. ಇವುಗಳ ಜತೆಗೆ ಸಂದರ್ಶನ ಕಲೆ, ಸಂವಹನ ಕೌಶಲ್ಯ, ವಾಕ್ಚಾತುರ್ಯ, ಶ್ರಮ ವಿಭಜನೆ ಮತ್ತು ವೈಶಿಷ್ಟ್ಯೀಕರಣಗಳಂತಹ ಹಾಗೂ ಬಾಹ್ಯ ಕಾರ್ೊರೇಟ್ ಜಗತ್ತು ನೀರೀಕ್ಷಿಸುವ ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ಕುಶಲಗಾರಿಕೆಯನ್ನು ಹೊಂದುತ್ತಾ ಕಠಿಣ ಪರಿಶ್ರಮ, ಸತತ ಅಧ್ಯಯನ, ಸಕಾರಾತ್ಮಕ ಚಿಂತನೆ ಮತ್ತು ಸಾಧಿಸಬಲ್ಲೆನೆಂಬ ದೃಢವಾದ ನಂಬಿಕೆಗಳೊಂದಿಗೆ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಂಕ, ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಬಿ.ಕಾಂ ಪದವಿ ನಂತರ ವೃತ್ತಿಪರ ಕೋರ್ಸಗಳಾದ ಚಾರ್ಟರ್ಡ ಅಕೌಂಟಂಟ್, ಕಾಸ್ಟ್ ಅಕೌಂಟಂಟ್, ಕಂಪನಿ ಸೆಕ್ರೆಟರಿಶಿಪ್, ಅಡಿಟರ್, ಫೈನಾನ್ಸಿಯಲ್ ಎನಾಲಿಸಿಸ್ಟ್ ನಂತಹ ವೃತ್ತಿಪರವಾದ ಕೋರ್ಸ ಮಾಡಬಹುದು. ಅದೇರೀತಿ ಬಿ.ಬಿ.ಎ ಪದವೀಧರರಿಗೆ ಹೋಟೇಲ್, ಮಾರ್ಕೆಂಟಿಂಗ್, ಹ್ಯೂಮನ್ ರಿಸೋರ್ಸ, ರಿಟೇಲ್ ಮತ್ತು ಪೈನಾನ್ಸಿಯಲ್ ಮ್ಯಾನೇಜಮೆಂಟ್ ರಂಗದಲ್ಲಿ ಉದ್ಯೋಗ ಮತ್ತು ಸ್ವಾವಲಂಬನೆ ಸಾಧಿಸಲು ಪೂರಕವಾದ ಕೋರ್ಸಗಳು ಲಭ್ಯವಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಐ.ಬಿ.ಪಿ.ಎಸ್, ಎಸ್.ಎಸ್.ಸಿ, ಅಕೌಂಟಂಟ್ ಆಫೀಸರ್ ಹುದ್ದೆಗಳನ್ನು ಪಡೆಯಬಹುದು ಎಂದರು.
ಪ್ರೊ. ಐ.ಬಿ.ಜಾಬಾ, ಪ್ರೊ. ವ್ಹಿ.ಆರ್.ಕಬಾಡೆ, ಆಶಾ ಹಜೇರಿ ಇನ್ನಿತರರು ಉಪಸ್ಥಿತರಿದ್ದರು.
ಶಾಂಭವಿ ಪತ್ತಾರ ನಿರೂಪಿಸಿದರು. ನಬಿರಸೂಲ ಮುಜಾವರ ಸ್ವಾಗತಿಸಿದರು. ಅಭಿಷೇಕ ನಾವಿ ವಂದಸಿದರು. ಕಾಲೇಜಿನ ಬಿ.ಕಾಂ ಮತ್ತು ಬಿ.ಬಿ.ಎ ನೇಯ ಸೆಮಿಸ್ಟರ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.