ವಿಷಮುಕ್ತ ಕೊಪ್ಪಳ ಮಾಡುವಲ್ಲಿ ನಿರಂತರ ಪ್ರಯತ್ನ: ಮಾರ್ಚ 23 ರಿಂದ ಶಿಬಿರ

Continuous efforts to make Koppal poison-free: Camp on March 23

ಕೊಪ್ಪಳ 21: ಈಗಾಗಲೇ ಇರುವ ಕಾರ್ಖಾನೆಗಳ ಮಾಲಿನ್ಯದ ವಿರುದ್ಧ ಮತ್ತು ಹೊಸ ಉಕ್ಕಿನ ಕಾರ್ಖಾನೆ  ಸ್ಥಾಪನೆ ಹಾಗೂ ಅಣುವಿದ್ಯುತ್ ಸ್ಥಾವರ ಯೋಜನೆಯ ಪ್ರಸ್ತಾಪವನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಎರಡು ದಿನಗಳ ಪರಿಸರ ಜಾಗೃತಿ ಅಧ್ಯಯನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಚಾವೋ ಆಂದೋಲನ ಸಮಿತಿ ತಿಳಿಸಿದೆ. 

ನಗರದ ವಿವಿಧ ಬಾದಿತ ಪ್ರದೇಶ ಮತ್ತು ಅನೇಕ ಬಾದಿತ ಹಳ್ಳಿಗಳಿಗೆ ಕಳೆದ ಒಂದು ವಾರದಿಂದ ಭೇಟಿ ನೀಡಿ ಕುಷ್ಟಗಿ ತಾಲೂಕ ತಾವರಗೇರಿಯ ಬುದ್ಧ ವಿಹಾರದಲ್ಲಿ ಹಮ್ಮಿಕೊಂಡಿರುವ ಶಿಬಿರಕ್ಕೆ ಯುವಜನರನ್ನು ಆಹ್ವಾನಿಸುವ ಜೊತೆಗೆ ಪರಿಸರ ಮಾಲಿನ್ಯದಿಂದ ಆಗುತ್ತಿರುವ ಅನಾಹುತಗಳ ಸಂಕ್ಷಿಪ್ತ ಮಾಹಿತಿ ಹಾಗೂ ಮುಂದಿನ ಸುಧೀರ್ಘ ಹೋರಾಟದ ಕುರಿತು ಮನವರಿಕೆ ಮಾಡಿಕೊಡಲಾಗುತ್ತಿದೆ. 

ಮಾರ್ಚ 23 ರಂದು ಹುತಾತ್ಮ ರತ್ನ ಭಗತ್‌ಸಿಂಗ್ (ರಾಜಗುರು, ಸುಖದೇವ್) ರನ್ನು ಗಲ್ಲಿಗೇರಿಸಿದ ದಿನದಂದು ಶಿಬಿರ ಪ್ರಾರಂಭವಾಗುತ್ತಿದೆ ಇದು ಅನ್ಯಾಯದ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿಯಾಗಲಿದೆ. ಭಗತ್ ಸಿಂಗ್‌ರು ಹೇಳಿದಂತೆ "ಹೇಳುವವರು ಎಷ್ಟೇ ಮಹಾನ್ ವ್ಯಕ್ತಿಗಳಾಗಿರಲಿ ಅವರ ಮಾತುಗಳನ್ನು ವಿಮರ್ಶಿಸದೆ ಒಪ್ಪದಿರಿ. ಆ ಮಾತುಗಳಲ್ಲಿ ಸತ್ಯ ಮತ್ತು ಸಾಮಾನ್ಯ ಜನರ ಹಿತ ಇದ್ದರೆ ಅದಕ್ಕಾಗಿ ನಾವು ವೈಚಾರಿಕವಾಗಿ, ಸಂಘಟನಾತ್ಮಕವಾಗಿ, ರಾಜಕೀಯವಾಗಿ ರೀತಿಯಿಂದಲೂ ಸನ್ನದ್ದರಾಗಬೇಕಾಗುತ್ತದೆ. 

ಎರಡು ದಿನದ ಶಿಬಿರದಲ್ಲಿ ಅನೇಕ ವಿಷಯ ತಜ್ಞರು, ಪರಿಸರವಾದಿಗಳು, ಚಿಂತಕರು, ಹೋರಾಟಗಾರರು, ಕಾರ್ಖಾನೆ, ಉದ್ಯೋಗ, ಅಭಿವೃದ್ಧಿ, ಕೃಷಿ, ಪರಿಸರ ಮಾಲಿನ್ಯ, ಜನಹೋರಾಟಗಳು ಇಂತಹ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ. ಪ್ರಸ್ತುತ ಸಮಸ್ಯೆ ಹಾಗೂ ಪರಿಹಾರಗಳ ಬಗ್ಗೆ ಅರಿಯಲು, ಮುಂದಿನ ದಿನಗಳಲ್ಲಿ ನಮ್ಮ ಕೊಪ್ಪಳ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯುವಜನರ ಐತಿಹಾಸಿಕ ಜವಾಬ್ದಾರಿಯನ್ನು ತಿಳಿಸಿಕೊಡಲು ಎರಡು ದಿನದ ಉಚಿತ ಶಿಬಿರ ಹಮ್ಮಿಕೊಂಡಿದ್ದು, ಭಾಗವಹಿಸುವ ಯುವಜನರಿಗೆ ಉಚಿತ ಊಟ ವಸತಿ ಕಲ್ಪಿಸಲಾಗಿದೆ. 

ಈ ಶಿಬಿರದಲ್ಲಿ ಹೋರಾಟಗಾರರಾದ ಎಸ್‌. ಆರ್‌. ಹಿರೇಮಠ್, ವಿ. ಎನ್ ರಾಜಶೇಖರ್, ಬಸವರಾಜ್ ಸೂಳಿಭಾವಿ, ಕೃಷಿ ವಿಜ್ಞಾನಿ ರಾಜೇಂದ್ರ ಪೋತದಾರ್, ಖ್ಯಾತ ಲೇಖಕರಾದ ಶಿವಸುಂದರ್, ಕೊಪ್ಪಳ ಜಿಲ್ಲಾ ಬಚಾವೋ ಸಮಿತಿಯ ಪ್ರಮುಖ ನಾಯಕರಾದ ಅಲ್ಲಮಪ್ರಭು ಬೆಟ್ಟದೂರು, ಡಿ.ಹೆಚ್‌. ಪೂಜಾರ, ಕೆ.ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಟಿ. ರತ್ನಾಕರ ಅನೇಕರು ಮಾಹಿತಿ ಮಾರ್ಗದರ್ಶನ ಮಾಡುವರು. 

ಶಿಬಿರ ಮತ್ತು ಮಾಲಿನ್ಯದ ಜನಜಾಗೃತಿ ಕಾರ್ಯದಲ್ಲಿ ಕೆ. ಬಿ. ಗೋನಾಳ, ಶರಣು ಗಡ್ಡಿ, ಶರಣು ಪಾಟೀಲ್, ಶರಣು ಶೆಟ್ಟರ್, ಅಲ್ಲಮಪ್ರಭು ಬೆಟ್ಟದೂರು, ಡಿ. ಹೆಚ್‌. ಪೂಜಾರ, ಮಂಜುನಾಥ ಜಿ. ಗೊಂಡಬಾಳ, ಮುದಕಪ್ಪ ಹೊಸಮನಿ, ಕಾಶಪ್ಪ ಛಲವಾದಿ ಸೇರಿದಂತೆ ಅನೇಕರು ನಿರಂತರವಾಗಿ ಹಳ್ಳಿ ಹಳ್ಳಿಗೆ ಸಂಚರಿಸಿ ಮಾಹಿತಿ ನೀಡಿದ್ದು, ಮುಂದಿನ ಬೃಹತ್ ಮತ್ತು ನಿರಂತರ ಹೋರಾಟಕ್ಕೆ ಅಣಿಯಾಗಿದ್ದಾರೆ.