ಕಂಪ್ಲಿ 12: ಕಾಲೇಜು ವಿದ್ಯಾರ್ಥಿಗಳು ಶಿಕ್ಷಣ ಜೊತೆಗೆ ಬಿಜಿನೆಸ್ ಕಡೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಲೇಜು ಐ.ಕ್ಯೂ.ಎ.ಸಿ ಹಾಗೂ ಸಾಂಸ್ಕೃತಿಕ ಚಟುವಟಿಕೆ ಸಮಿತಿಗಳ ಅಡಿಯಲ್ಲಿ ಕಾಲೇಜಿನ ವಿವಿಧ ಸಮಿತಿಗಳ ಮುಕ್ತಾಯ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ. ಆದ್ದರಿಂದ ಗುರುಗಳ ಮಾರ್ಗದರ್ಶನದಲ್ಲಿ ಪೋಷಕರ ಆಕಾಂಕ್ಷೆಗೆ ತಕ್ಕಂತೆ ವಿದ್ಯಾವಂತರಾಗುವ ಮೂಲಕ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬೇಕು.
ಗುರಿ ಹೊಂದಿದರೆ ಸಾಧನೆ ಮಾಡಲು ಅತಿ ಸುಲಭ. ಜೀವನದಲ್ಲಿ ಸೋಲು-ಗೆಲುವು ಸಾಮಾನ್ಯ. ಆದ್ದರಿಂದ ಸೋಲಾದಾಗ ಕುಗ್ಗದೇ, ಛಲದಿಂದ ಮುನ್ನುಗ್ಗುವ ಮೂಲಕ ಗೆಲುವು ಸಾಧಿಸಲು ಸಾಧ್ಯ. ಕಂಪ್ಲಿಯ ಅರಳಿಹಳ್ಳಿ ತಾಂಡದಲ್ಲಿ ಸುಮಾರು 80 ಕೋಟಿ ವೆಚ್ಚದಲ್ಲಿ ಜಿಟಿಡಿಸಿ ಕಾಲೇಜು ಸ್ಥಾಪಿಸಲು ಅನುಮೋದನೆ ದೊರತಿದೆ. ಕ್ಷೇತ್ರದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಬಳ್ಳಾರಿ, ಹೊಸಪೇಟೆ ಸೇರಿದಂತೆ ನಾನಾ ದೂರದ ಕಾಲೇಜುಗಳಿಗೆ ತೆರಳಬೇಕಾಗಿದೆ.
ಇದರಿಂದ ಕೆಲ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಆಗಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಂಪ್ಲಿ-ಕುರುಗೋಡು ತಾಲೂಕು ಕೇಂದ್ರದಲ್ಲಿ ಎಂ.ಎ ಮತ್ತು ಎಂ.ಕಾಂ ಆರಂಭಿಸಲು ಈಗಾಗಲೇ ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿಜಿಟಲ್ ಗ್ರಂಥಾಲಯಕ್ಕೆ ಸುಮಾರು 3 ಕೋಟಿ ಅನುದಾನ ಮಂಜೂರಾಗಿದೆ. ಶಿಕ್ಷಣ ಸೇರಿದಂತೆ ಪ್ರತಿಯೊಂದು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದರು.
ಪ್ರಾಂಶುಪಾಲ ಬಾಲಾಜಿ ಎಂ.ಪಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಂಚಾಲಕ ಡಾ. ಚಂದ್ರಶೇಖರ ಬಿಳೇಗುಡ್ಡ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಡಾ. ಕೆ. ಮಹೇಶ್ ಇವರು ವರದಿ ವಾಚಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಉಪಾಧ್ಯಕ್ಷ ಇಟಗಿ ಶರಣಗೌಡ, ಪುರಸಭೆ ಸದಸ್ಯ ಸಿ.ಆರ್.ಹನುಮಂತ, ಪ್ರಾಚಾರ್ಯರಾದ ಚಂದ್ರಶೇಖರ ಹೆಚ್, ಮಹ್ಮದ್ ಶಫಿ, ಉಪನ್ಯಾಸಕರಾದ ಡಾ. ಜೆ.ಕೃಷ್ಣ, ಡಾ.ಅನ್ನಪೂರ್ಣ ಗುಡುದೂರು, ಡಾ. ಮಮತಾ ಜಿ.ಎಂ, ರಾಜ್ಯಾಟಿ.ಎಂ.ಅರ್, ಗ್ರಂಥಪಾಲಕ ವೀರಭದ್ರ್ಪ ಎ.ಜಿ, ಕಂಪ್ಲಿ ತಾಲೂಕು ಅತಿಥಿ ಉಪನ್ಯಾಪಕರ ಸಂಘದ ಅಧ್ಯಕ್ಷ ಸಂದೀಪ್ ಕುಮಾರ್, ಮುಖಂಡರಾದ ಕೆ.ಷಣ್ಮುಖಪ್ಪ, ಚನ್ನಬಸವರಾಜಗೌಡ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು.