ಸಂಭ್ರಮದಿಂದ ಜರುಗಿದ ಚೆನ್ನಮ್ಮಳ ತೊಟ್ಟಿಲು ಕಾರ್ಯಕ್ರಮ
ತಾಳಿಕೋಟಿ 15: ಪಟ್ಟಣದ ರಾಜವಾಡೆ ಮೈದಾನದಲ್ಲಿ ಕಿತ್ತೂರ ರಾಣಿ ಚೆನ್ನಮ್ಮಳ ಪುತ್ಥಳಿ ಅನುಷ್ಠಾನದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ "ಚೆನ್ನಮ್ಮಾಜಿ ಜೀವನ ಚರಿತ್ರೆ" ಪ್ರವಚನದಲ್ಲಿ ಚೆನ್ನಮ್ಮಾಜಿಯ ತೊಟ್ಟಿಲು ಕಾರ್ಯಕ್ರಮ ಶನಿವಾರ ಸಂಭ್ರಮದಿಂದ ಜರುಗಿತು. ಜೂನ್ 12 ರಿಂದ 22 ರವರೆಗೆ ನಡೆಯಲಿರುವ ಈ ಪ್ರವಚನದ ಮೂರನೇ ದಿನದ ಕಾರ್ಯಕ್ರಮದಲ್ಲಿ ತೊಟ್ಟಿಲದ ಈ ವಿಶೇಷ ಕಾರ್ಯಕ್ರಮವನ್ನು ನೂರಾರು ಮಹಿಳೆಯರು ಶಾಸ್ತ್ರೋಕ್ತವಾಗಿನೆರವೇರಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಖ್ಯಾತ ಪ್ರವಚನಕಾರರಾದ ಪರಮ ಪೂಜ್ಯ ಪ್ರಭುಲಿಂಗ ಶರಣರು ವೀರರಾಣಿ ಕಿತ್ತೂರು ಚೆನ್ನಮ್ಮಳ ಇಡೀ ಜೀವನದ ವೃತ್ತಾಂತವನ್ನು ತಿಳಿದುಕೊಳ್ಳುವುದು ನಮ್ಮ ತಾಯಂದಿರಿಗೆ ಅಗತ್ಯವಾಗಿದೆ ರಾಜ ಮನೆತನದಲ್ಲಿ ಜನಸಿದರೂ ತನ್ನ ಅಸ್ತಿತ್ವವನ್ನು ರಕ್ಷಿಸಲು ಸರ್ವಸ್ವವನ್ನು ತ್ಯಾಗ ಮಾಡಿದ ತ್ಯಾಗಮಯಿ ಮಹಿಳೆ ಅವಳಾಗಿದ್ದಾಳೆ ಎಂದರು.
ತೊಟ್ಟಿಲು ಕಾರ್ಯಕ್ರಮಕ್ಕೆ ದಾನಿಗಳಾದ ಶಿವಾನಂದ್ ಬಬಲೇಶ್ವರ ಬೆಳ್ಳಿ ಲಿಂಗದಕಾಯಿ ಮಗುವಿಗೆ ಬಟ್ಟೆ, ಶಂಕ್ರಮ್ಮ ಹಡಪದ ಮಗುವಿಗೆ ಕೈಕಟ್ಟು ಹಾಗೂ ಬಟ್ಟೆ, ನಾಗಮ್ಮ ಕಂದಗಲ್ ಬೆಳ್ಳಿಯ ಚೈನು, ಗುರುಪಾದ ಎಂ ಬಂಗಾರದ ಮೂರವು, ಪ್ರೇಮಬಾಯಿ ಜಾಧವ ಮಗುವಿಗೆ ಬಟ್ಟೆ ಹಾಗೂ ಕೆಲವರು ಕಾಣಿಕೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ಸಿ.ಎಸ್.ಪಾಟೀಲ,ಅಧ್ಯಕ್ಷೆ ನೀಲಮ್ಮ ಎಸ್.ಪಾಟೀಲ,ಉಪಾಧ್ಯಕ್ಷ ಕಲ್ಲಪ್ಪ ಪಾಟೀಲ ಪ್ರಧಾನ ಕಾರ್ಯದರ್ಶಿ ಎಂ.ಬಿ.ಕೋಟಿ, ಕಾರ್ಯದರ್ಶಿ ಬಿ.ಕೆ.ಪಾಟೀಲ, ಸಮಾಜದ ಗಣ್ಯರು ಹಿರಿಯರು ಹಾಗೂ ಮಹಿಳೆಯರು ಇದ್ದರು. ಶ್ರೀ ಖಾಸ್ಗತೇಶ್ವರ ಸಂಗೀತ ಶಾಲೆಯ ದೀಲೀಪಸಿಂಗ್ ಹಜೇರಿ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.