ಕಂಪ್ಲಿಯಲ್ಲಿ ಸಿವಿಎಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆ: ಆರ್‌.ನಟರಾಜ

ಕಂಪ್ಲಿಯಲ್ಲಿ ಸಿವಿಎಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆ: ಆರ್‌.ನಟರಾಜ   CVL and JMFC court inaugurated in Kampli: R. Nataraja

ಲೋಕದರ್ಶನ ವರದಿ

ಕಂಪ್ಲಿ 26:  ಜನರ ಹಿತರಕ್ಷಣೆ ಹಾಗೂ ಹಕ್ಕುಗಳನ್ನು ಒದಗಿಸಿಕೊಡುವ ಜೊತೆಗೆ ಸಕಾಲದಲ್ಲಿ ಜನತೆಗೆ ನ್ಯಾಯ ಒದಗಿಸಿಕೊಡುವುದು ನ್ಯಾಯಾಲಯದ ಮುಖ್ಯ ಉದ್ದೇಶವಾಗಿದೆ ಎಂದು ಕರ್ನಾಟಕ ಉಚ್ಛನ್ಯಾಯಾಲಯ ಮತ್ತು ಆಡಳಿತಾತ್ಮಕ ನ್ಯಾಯಾಧೀಶರಾದ ಆರ್‌.ನಟರಾಜ ಹೇಳಿದರು.ಪಟ್ಟಣದ 20ನೇ ವಾರ್ಡಿನ ಶಿಬಿರದಿನ್ನಿ(ಮಾರುತಿನಗರ)ಯಲ್ಲಿ ಭಾನುವಾರ ನೂತನ ಸಿವಿಎಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟಿಸಿ ಮಾತನಾಡಿ, ಜನರು ಕೇಸ್ ವಿಚಾರಣೆಗಾಗಿ ಕಂಪ್ಲಿಯಿಂದ ದೂರದ ಬಳ್ಳಾರಿ ಕೋರ್ಟಗೆ ಹೋಗಬೇಕಾಗಿತ್ತು.  ಕಂಪ್ಲಿಯಲ್ಲಿ ಕೋರ್ಟ್‌ ಆಗದಿದ್ದರೆ, ಅಪೂರ್ಣವಾಗುತ್ತಿತ್ತು.

ಇಲ್ಲಿನ ಜನರು ಹಕ್ಕು ಭಾದಿತರಾಗಿದ್ದಾರೆ. ಇಲ್ಲಿನ ಜನತೆಗೆ ಕೋರ್ಟ್‌ ಅತ್ಯವಶ್ಯಕವಾಗಿದೆ. ಇಲ್ಲಿನ ಪುರಸಭೆಗೆ ಒಳಪಡುವ ಕಟ್ಟಡದಲ್ಲಿ ಕೋರ್ಟ್ಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿನ ನಿಗದಿತ ಸ್ಥಳದಲ್ಲಿರುವ ಕಟ್ಟಡಕ್ಕೆ ಹೊಸ ರೂಪುರೇಷೆ ನೀಡಲಾಗುತ್ತದೆ. ಸರ್ಕಾರ ಅನುಮತಿ ನೀಡಿದರೆ, ಭವ್ಯ ಕಟ್ಟಡ ಮಾಡಲಿದ್ದೇವೆ. ಉತ್ತಮ ಸ್ಥಳದಲ್ಲಿ ಕೋರ್ಟ್‌ ಸ್ಥಾಪಿತವಾಗಬೇಕಾಗಿತ್ತು. ಇಲ್ಲಿನ ಕೋರ್ಟ್‌ ಸಾಕಾಗಲ್ಲ. ಇಲ್ಲಿ 63 ಜನ ವಕೀಲರಿದ್ದು, ಒಂದು ಸಾವಿರ ಕೇಸ್ ಇರುತ್ತಿದ್ದವು. ಈಗ ಕಂಪ್ಲಿಯಲ್ಲೇ ನ್ಯಾಯಾಲಯ ಸ್ಥಾಪಿತವಾಗಿದೆ. ಇದರಿಂದ ಈ ಭಾಗದ ಜನರು ನ್ಯಾಯ ಪಡೆಯುವ ಜೊತೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದಾರೆ.

ಜನರ ಹಿತರಕ್ಷಣೆ ಹಾಗೂ ಜನರು ತಮ್ಮ ಹಕ್ಕುಗಳನ್ನು ಪಡೆದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದರು.ಕರ್ನಾಟಕರಾಜ್ಯ ಬಾರ್ ಕೌನ್ಸಿಲ್ ಸದಸ್ಯ ಅನೀಲ್ ಕುಮಾರ ಮಾತನಾಡಿ, ಕಂಪ್ಲಿಯಲ್ಲಿ ಈಗ ನ್ಯಾಯಾಲಯ ಸ್ಥಾಪನೆಗೊಂಡಿದೆ. ಕಂಪ್ಲಿ ಬಳಿಯಲ್ಲಿ ಮೀಸಲಿಸಿರುವ 3.12 ಎಕರೆ ಜಾಗದಲ್ಲಿ ಸುಮಾರು 25 ಕೋಟಿ ಅನುದಾನ ಮಂಜೂರು ಮಾಡಿಸಿ, ಭವ್ಯ ಕಟ್ಟಡ ನಿರ್ಮಿಸಿಕೊಡುವ ಭರವಸೆಯನ್ನು ಶಾಸಕ ಜೆ.ಎನ್‌.ಗಣೇಶ ನೀಡಿದ್ದಾರೆ. ಸಕಾಲದಲ್ಲಿ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ವಕೀಲರು ಮುಂದಾಗಬೇಕು ಎಂದರು.ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಜಿ.ಶಾಂತಿ, ಎಸ್‌.ಇಸ್ಮಾಯಿಲ್ ಜಬಿವುಲ್ಲಾ, ಕ.ರಾ.ವಕೀಲರ ಪರಿಷತ್ ಸದಸ್ಯ ಜೆ.ಎಂ.ಅನಿಲ್ ಕುಮಾರ, ಲೋಕೋಪಯೋಗಿ ಇಇ ಬಿ.ವಿಜಯ ಭಾಸ್ಕರ್, ವಕೀಲರಾದ ಪ್ರಭಾಕರ, ಹರೀಶ್, ರುದ್ರ​‍್ಪ, ಶಿವಪ್ಪ, ಯಂಕಪ್ಪ, ನಟರಾಜ, ಹುಲುಗಪ್ಪ, ವೀರಣ್ಣ, ಮಾರುತಿಸಿಂಗ್, ಮೋಹನ್ ಕುಮಾರ್ ದಾನಪ್ಪ, ಮುಂಖಡರಾದ ಕೆ.ಎಂ.ಹೇಮಯ್ಯಸ್ವಾಮಿ, ಹೊಸಕೋಟೆ ಜಗದೀಶ, ಜಿ.ರಾಮಣ್ಣ, ಬಿ.ಸಿದ್ದಪ್ಪ ಸೇರಿದಂತೆ ಅನೇಕರಿದ್ದರು.