ವಿಜಯಪುರ 12: ಅಸಮಾನತೆ, ಕಂದಾಚಾರಗಳಂತಹ ಆಚರಣೆಗಳಿಂದ ನರಳುತ್ತಿದ್ದ ಜಗತ್ತಿಗೆ ಜ್ಞಾನದ ಬೆಳಕಾಗಿ ಶಾಂತಿ, ಸಮಾನತೆಯ ದಾರಿ ತೋರಿದವರು ಭಗವಾನ್ ಬುದ್ಧರು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದ ಎದುರುಗಡೆ ಇರುವ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ಧ-ಬಸವ-ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅನುಸರಣೆ ಮಾಡಬೇಕು. ಜಗತ್ತಿಗೆ ಶಾಂತಿ ಬೋಧಿಸಿದ ಬುದ್ಧನ ಆದರ್ಶ-ವಿಚಾರಗಳ ಬಗ್ಗೆ ಅರಿವು ಹೊಂದಬೇಕು. ಬುದ್ಧ-ಬಸವ-ಅಂಬೇಡ್ಕರ್ ಅವರ ಆದರ್ಶಗಳು ಇಡೀ ಜಗತ್ತಿಗೆ ಸಾರ್ವಕಾಲಿಕವಾಗಿವೆ. ಆಗಾಗ ಅವರ ಆದರ್ಶ, ವಿಚಾರಗಳು, ಚಿಂತನೆಗಳನ್ನು ತಿಳಿದುಕೊಳ್ಳುವ ಅಗತ್ಯತೆ ಇದೆ. ಶಾಲಾ ಕಾಲೇಜಿನ ಮಕ್ಕಳಿಗೆ ಬುದ್ಧರ ತತ್ವಗಳನ್ನು, ಚಿಂತನೆಗಳನ್ನು ತಿಳಿಸಬೇಕು. ಬುದ್ಧ ನಮ್ಮೆಲ್ಲರ ಮನೆಯ ಮನದ ಬೆಳಕು, ಜಗತ್ತಿನ ಭರವಸೆಯ ಬೆಳಕು, ಇಂತಹ ಮಹಾನರ ಆದರ್ಶ-ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಭಗವಾನ ಬುದ್ಧ ನೆಮ್ಮದಿ ಜೀವನಕ್ಕೆ ಮೂಲಗಳಾದ ಸತ್ಯ ಮತ್ತು ಅಹಿಂಸೆಗಳಂತಹ ಎಂಟು ಸನ್ಮಾರ್ಗಗಳನ್ನು ಪ್ರಪಂಚಕ್ಕೆ ಸಾರಿದ್ದಾರೆ. ಅವರ ಅಷ್ಟಾಂಗ ಮಾರ್ಗಗಳನ್ನು ಅನುಸರಿಸುವ ಅಗತ್ಯತೆ ಇಂದಿನ ಪೀಳಿಗೆಗಳಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಬೌದ್ಧ ತತ್ವಜ್ಞಾನಿ ಸಂಶೋಧಕರಾದ ಅನ್ನಪೂರ್ಣ ಬೆಳ್ಳೆನವರ ಅವರು ಬುದ್ಧನ ಜೀವನ ಚರಿತ್ರೆಯ ಕುರಿತು ವಿಸ್ತಾರವಾಗಿ ಮಾಹಿತಿ ನೀಡಿ, ಅನೇಕ ಶಾಂತಿ ತತ್ವಗಳನ್ನು ಬುದ್ಧ ನೀಡಿದ್ದಾರೆ. ಅವರು ನೀಡಿದ ಪಂಚಶೀಲ ತತ್ವಗಳನ್ನು ಪಾಲಿಸುವ ಮೂಲಕ ಜೀವನ ಸಾರ್ಥಕತೆ ಹೊಂದಬೇಕು ಎಂದು ಅವರು ಹೇಳಿದರು.
ಉಪನ್ಯಾಸ ನೀಡಿದ ಹಿರಿಯ ನ್ಯಾಯವಾದಿ ಕೆ.ಎಫ್.ಅಂಕಲಗಿ ಮಾತನಾಡಿ, ಎಲ್ಲ ವೈಭೋಗವನ್ನು ತ್ಯಜಿಸಿ ಜ್ಞಾನಮಾರ್ಗವನ್ನು ತೋರಿಸಿದ ಭಗವಾನ್ ಬುದ್ಧ, ಬಾಲ್ಯದಲ್ಲಿಯೇ ತಮ್ಮ ಅರಮನೆಯ ಸೇವಕರನ್ನು ಬಂಧುಗಳಾಗಿ ಕಾಣುವ ಗುಣ ಹೊಂದುವ ಮೂಲಕ ಜನಾನುರಾಗಿಯಾಗಿದ್ದರು. ಜನರು ಬುದ್ಧನನ್ನು ಪ್ರೀತಿಸುತ್ತಿದ್ದರು. ಇಂತಹ ಗುಣಗಳನ್ನು ಹೊಂದಿದ ಬುದ್ಧನ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪಾಲನೆಗೆ ಮುಂದಾಗಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಬುದ್ಧ ವಿಹಾರದಿಂದ ಆರಂಭಗೊಂಡ ಭಗವಾನ್ ಬುದ್ಧ ಭಾವಚಿತ್ರ ಮೆರವಣಿಗೆಗೆ ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಿಂಗಪ್ಪ ಗೋಠೆ ಚಾಲನೆ ನೀಡಿದರು. ಭಾವಚಿತ್ರ ಮೆರವಣಿಗೆಯು ವಿವಿಧ ಕಲಾ ತಂಡಗಳೊಂದಿಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಸಾಗಿತು.
ಎಚ್.ಎ.ಮಮದಾಪುರ ಕಾರ್ಯಕ್ರಮ ನಿರೂಪಿಸಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಮಾರಿಹಾಳ, ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ನಾರಾಯಣಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಬುದ್ಧ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ರಾಜಶೇಖರ ಎಡಹಳ್ಳಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.