ಕೆಲಸಕ್ಕೆ ಹೋಗು ಎಂದ ಅಣ್ಣನನ್ನೇ ಕೊಲೆ ಮಾಡಿದ ತಮ್ಮ

Brother killed his own brother who told him to go to work

ಬೆಳಗಾವಿ 14: ಕೆಲಸಕ್ಕೆ ಹೋಗು ಎಂದು ಬುದ್ಧವಾದ ಹೇಳಿದ್ದಕ್ಕೆ ಅಣ್ಣನನ್ನೇ ಕೊಲೆ ಮಾಡಿದ ಘಟನೆ ಯಮಕನಮರ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಹಟ್ಟಿ ಆಲೂರ ಗ್ರಾಮದ ರಾಯಪ್ಪ ಸುರೇಶ ಕಮತಿ (28) ಎಂಬಾತ ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ತಮ್ಮ ಬಸವರಾಜ ಸುರೇಶ ಕಮತಿ (24) ಕೊಲೆ ಮಾಡಿದ್ದಾನೆ.ಇಂದು ಬೆಳಗಾವಿಯಲ್ಲಿ ಈ ಘಟನೆ ಕುರಿತು ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಬೆಳಗಾವಿಯ ಎಸ್ಪಿ ಡಾ. ಭೀಮಾಶಂಕರ ಗುಳೇದ್ ಅವರು ಕೆಲಸ ಮಾಡು ಎಂದು ಹೇಳಿದ್ದಕ್ಕೆ ರೊಚ್ಚಿಗೆದ್ದ ತಮ್ಮ ಅಣ್ಣನನ್ನು ರಹಸ್ಯವಾಗಿ ಕೊಲೆ ಮಾಡಿದ ಪ್ರಕರಣವನ್ನು ಯಮಕನಮರ್ಡಿ ಪೊಲೀಸ್ ಇನ್ಸಪೆಕ್ಟರ್ ಜಾವೀದ್ ಮುಶಾಪುರೆ ನೇತೃತ್ವದ ತಂಡ ಬೇಧಿಸಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ತಿಳಿಸಿದರು.

ಕಳೆದ ತಿಂಗಳು ಮೇ 9ರಂದು ಯಮಕನಮರ್ಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಪಾಶ್ಚಾಪೂರದ ಗದ್ದೆಯೊಂದರ ಕೆನಾಲ್ ಬಳಿ ರಕ್ತಸಿಕ್ತ ಯುವಕನ ಶವ ಪತ್ತೆಯಾಗಿತ್ತು. ಪೊಲೀಸರ ತನಿಖೆಯ ವೇಳೆ ಇದು ಕುರಿಗಾಹಿ ರಾಯಪ್ಪನ ಶವವೆಂದು ಗುರುತಿಸಲಾಯಿತು. ಸ್ಥಳ ಪರೀಶೀಲಿಸಿದಾಗ ಮೃತನ ಕಣ್ಣಲ್ಲಿ ಖಾರದ ಪುಡಿ ಎರಚಿರುವುದು ಪತ್ತೆಯಾಗಿದೆ. ಯಮಕನಮರ್ಡಿ ಪೊಲೀಸ ಜಾವೀದ್ ಮುಶಾಪೂರೆ ಅವರು ವಿಶೇಷ ತಂಡ ರಚಿಸಿ ಅಧಿಕ ತಪಾಸಣೆ ನಡೆಸಿದಾಗ ಹಟ್ಟಿ ಆಲೂರ ಗ್ರಾಮದ ರಾಯಪ್ಪ ಸುರೇಶ ಕಮತಿಯ ತಮ್ಮ ಬಸವರಾಜ ಸುರೇಶ ಕಮತಿ ಎಂಬಾತನೇ ವ್ಯವಸ್ಥಿತವಾಗಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.  

ಬಸವರಾಜ್ ಕುವೈತನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಮಾರ್ಚ ತಿಂಗಳಲ್ಲಿ ಬೆಳಗಾವಿಗೆ ಬಂದಿದ್ದ. ನಂತರ ಕೆಲಸಕ್ಕೆ ಮರಳಿ ಹೋಗಿರಲಿಲ್ಲ. ರಾಯಪ್ಪ ಒಬ್ಬನೇ ಕೆಲಸ ಮಾಡಿ ಕುಟುಂಬ ನಿರ್ವಹಣೆಯನ್ನು ಮಾಡುತ್ತಿದ್ದ. ಈ ವಿಚಾರವಾಗಿ ಇಬ್ಬರಲ್ಲೂ ಆಗಾಗ ವಾದವಿವಾದ ನಡೆಯುತ್ತಿದ್ದವು. ಇದೇ ಸಿಟ್ಟಿನಿಂದ ಬಸವರಾಜ್ ಸಂಚು ಮಾಡಿ ಅಣ್ಣ ರಾಯಪ್ಪ ಕುರಿ ಮೇಯಿಸಲು ಕೆನಾಲ್ ಬಳಿ ಹೋಗುತ್ತಿದ್ದನ್ನು ಅರಿತು ಕೊಲೆ ಮಾಡಿದ್ದಾನೆ. ಆರೋಪಿತನಿಂದ ಕೃತ್ಯಕ್ಕೆ ಉಪಯೋಗಿಸಿದ ಸಲಕರಣೆಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡು ಆರೋಪಿಯನ್ನು  ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದಾರೆ ಎಂದು ಎಸ್ಪಿ ಡಾ. ಭೀಮಾಶಂಕರ ಗುಳೇದ್ ಅವರು ತಿಳಿಸಿದರು.