ಹಾನಗಲ್ 14 :ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವುದು ಸವಾಲಿನ ಕೆಲಸ. ಕಾಟಾಚಾರಕ್ಕೆ ಸಂಸ್ಥೆಗಳನ್ನು ಸ್ಥಾಪಿಸಿ ಮಕ್ಕಳ ಭವಿಷ್ಯ ಕತ್ತಲೆಗೆ ನೂಕದೇ ಉತ್ತಮ ಶಿಕ್ಷಣ ನೀಡುವ ಮೂಲಕ ಭವಿಷ್ಯ ಗಟ್ಟಿಗೊಳಿಸುವಂತೆ ಶಾಸಕ ಶ್ರೀನಿವಾಸ ಮಾನೆ ಕಿವಿಮಾತು ಹೇಳಿದರು.
ತಾಲೂಕಿನ ನರೇಗಲ್ ಗ್ರಾಮದಲ್ಲಿ ಭಾರತ್ ಪಬ್ಲಿಕ್ ಸ್ಕೂಲ್ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವುದು ಹಣ ಗಳಿಕೆಯ ಮಾರ್ಗವಾಗಿ ಬದಲಾಗಿದೆ. ಸಮಾಜದಲ್ಲಿ ಹಣ ಗಳಿಸಲು ಸಾಕಷ್ಟು ಮಾರ್ಗಗಳಿವೆ. ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಘನತೆ, ಗೌರವ, ಪಾವಿತ್ರ್ಯತೆ ಇದೆ. ಪ್ರತಿಯೊಂದು ಶಿಕ್ಷಣ ಸಂಸ್ಥೆಗಳೂ ಸಹ ಅಂಥ ಮೌಲ್ಯಗಳೊಂದಿಗೆ ಸದೃಢ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕಿದೆ. ಒಂದು ಮಗು ಶಾಲೆಯಲ್ಲಿ ಪ್ರವೇಶ ಪಡೆದರೆ ಒಂದು ಕುಟುಂಬದ ಭವಿಷ್ಯವೇ ಸಂಸ್ಥೆಯ ಕೈಯಲ್ಲಿದ್ದಂತೆ. ಹಾಗಾಗಿ ಬಹಳ ಜವಾಬ್ದಾರಿ ವಹಿಸಬೇಕಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ನ್ಯೂನ್ಯತೆಗಳಿವೆ. ಇತ್ತೀಚಿಗೆ ಸರ್ಕಾರ ಸಾಕಷ್ಟು ಬದಲಾವಣೆ ತರುವ ಮೂಲಕ ನ್ಯೂನ್ಯತೆಗಳನ್ನು ಸರಿಪಡಿಸಲು ಯತ್ನಿಸುತ್ತಿದೆ. ತಾಲೂಕಿನಲ್ಲಿ ಸಹ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಒತ್ತು ನೀಡಿ ಕೆಲಸ ಮಾಡಲಾಗುತ್ತಿದೆ. ಸಮುದಾಯದ ಸಹಭಾಗಿತ್ವದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ತಾಲೂಕಿನ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಕೆಯ ಸಾಧನೆ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಖಂಡರಾದ ಚಮನಸಾಬ ಪಠಾಣ, ಕಲವೀರ್ಪ ಪವಾಡಿ, ಮಲ್ಲಿಕಾರ್ಜುನ ಅಗಡಿ, ಯಲ್ಲಪ್ಪ ನಿಂಬಣ್ಣನವರ, ಶಾಂತಪ್ಪ ಶೀಲವಂತರ, ಈರ್ಪ ಬೂದಿಹಾಳ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಇದ್ದರು.