ಬಾನು ಮುಷ್ತಾಕ್ ಅವರು ವಿಧಾನ ಪರಿಷತ್‌ಗೆ ಅತ್ಯಂತ ಅರ್ಹ ಆಯ್ಕೆ : ಮಂಜುನಾಥ. ಎಸ್‌. ಕಟ್ಟಿಮನಿ

Banu Mushtaq is the most deserving choice for the Legislative Council: Manjunath. S. Kattimani

ವಿಜಯಪುರ 29: ಕನ್ನಡದ ಸುಪ್ರಸಿದ್ಧ ಲೇಖಕಿ, ಪತ್ರಕರ್ತೆ ಹಾಗೂ ಸಮಾಜ ಸೇವಕಿಯೂ ಆಗಿರುವ ಬಾನು ಮುಸ್ತಾಕ್ ಅವರಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿರುವುದು ಕನ್ನಡಿಗರು ಇನ್ನಷ್ಟು ಹೆಮ್ಮೆಪಡುವ ಸಂಗತಿಯಾಗಿದೆ ಎಂದು ಜಿಲ್ಲೆಯ ಯುವ ಲೇಖಕ, ಪತ್ರಕರ್ತ ಹಾಗೂ ಸಮಾಜಸೇವಕರೂ ಆಗಿರುವ ಮಂಜುನಾಥ. ಎಸ್‌. ಕಟ್ಟಿಮನಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. 

ಬಾನು ಮುಸ್ತಾಕ್ ಅವರು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ​‍್ರ​‍್ರಥಮ ಕನ್ನಡಿಗರಾಗಿದ್ದಾರೆ. ಇದು ಕನ್ನಡ, ಕನ್ನಡಿಗ ಹಾಗೂ ಕರ್ನಾಟಕ ಸಂಭ್ರಮಿಸುವ ಅವಿಸ್ಮರಣೀಯ ಗಳಿಗೆಯಾಗಿದೆ. ಈ ಮೂಲಕ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ. 

ಬಾನು ಮುಸ್ತಾಕ್ ಅವರು ತಮ್ಮ ಬರಹ ಹಾಗೂ ಭಾಷಣಗಳಲ್ಲಿ ನಮ್ಮ ನೆಲದ ಮೂಲ ತತ್ವವಾಗಿರುವ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಮೌಲ್ಯವನ್ನು ಬೆಸೆಯುವ ಕಾರ್ಯವನ್ನು ಮಾಡುತ್ತಲೇ ಬಂದಿದ್ದಾರೆ. ಇಂತಹ ಧೀಮಂತಿಕೆಯ ವ್ಯಕ್ತಿತ್ವದ ಲೇಖಕಿಗೆ ಇಂತಹದೊಂದು ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ಕನ್ನಡ ನಾಡು ಹೆಮ್ಮೆಪಡುವ ಸಂಗತಿ ಹಾಗೂ ಸಂದರ್ಭ ಎಂದು ಅವರು ಶ್ಲಾಘಿಸಿದ್ದಾರೆ. 

ವಿಶ್ವಮಾನವ ಸಂದೇಶವನ್ನು ಜಗದಗಲ ಹರಡುತ್ತಿರುವ ಬಾನು ಮುಸ್ತಾಕ್ ಅವರ ಇನ್ನಷ್ಟು ಕೃತಿಗಳು ವಿಶ್ವದ ಎಲ್ಲ ಭಾಷೆಗಳಿಗೂ ಅನುವಾದಗೊಳ್ಳಬೇಕು ಎಂಬುದು ನನ್ನ ಆಶಯ. ಬಾನು ಮುಸ್ತಾಕ್ ಅವರ ಹಸೀನಾ ನನ್ನ ಬಹಳ ಇಷ್ಟದ ಕೃತಿ. ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. 

ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವ ಲೇಖಕಿ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಬಾಸ್ತಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರವು ತಲಾ ಹತ್ತು ಲಕ್ಷ ನಗದು ಬಹುಮಾನವನ್ನು ಘೋಷಿಸಬೇಕೆಂದು ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಹಾಗೂ ಭಾರತಕ್ಕೆ ಕೀರ್ತಿ ತಂದಿರುವ ಈ ಇಬ್ಬರಿಗೂ ರಾಜ್ಯ ಸರ್ಕಾರದಿಂದ ಗೌರವ ಧನ ನೀಡಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ಜಗತ್ತಿನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಬೂಕರ್ ಇಂಟರ್ ನ್ಯಾಷನಲ್ ಗೆದ್ದು ಕನ್ನಡ, ಕರ್ನಾಟಕಕ್ಕೆ ಹೆಮ್ಮೆ ತಂದುಕೊಟ್ಟವರು ಬಾನು ಮುಷ್ತಾಕ್‌. ಕರ್ನಾಟಕದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಾಧನೆಯನ್ನು ತಕ್ಷಣವೇ ಗುರುತಿಸಿ ಅಭಿನಂದನೆ ಸಲ್ಲಿಸಿದ್ದು, ಮಾತ್ರವಲ್ಲ, ಬಾನು ಮುಷ್ತಾಕ್ ಅವರಿಗೆ ಬೆಂಗಳೂರಿನಲ್ಲಿ ಸರಕಾರದ ವತಿಯಿಂದ ಜಿ ಕೆಟಗರಿ ಸೈಟ್ ನೀಡುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. 

ಸಾಹಿತ್ಯ, ಸಾಹಿತಿಗಳ ಕುರಿತು ಒಲವುಳ್ಳ ಸಿಎಂ ಸಿದ್ದರಾಮಯ್ಯ ಈ ಮಾತುಗಳನ್ನು ಸಹಜವಾಗಿಯೇ ಆಡಿದ್ದಾರೆ. ಕರ್ನಾಟಕಕ್ಕೇ ಹೆಮ್ಮೆ ತಂದ ಸಾಹಿತಿಯನ್ನು ಗೌರವಿಸಲು ಅವರು ಈ ಕೊಡುಗೆಯನ್ನು ಪ್ರಕಟಿಸಿದ್ದಾರೆ. ಆದರೆ ಸಾಹಿತಿಗಳು ಸಾಧನೆ ಮಾಡುವುದೇ ಜಿ ಕೆಟಗರಿ ಸೈಟಿಗೆ ಎನ್ನುವ ಅಭಿಪ್ರಾಯ ರಾಜ್ಯದಲ್ಲಿ ಮೂಡಿರುವಂತಿದೆ. ಜಿ ಕೆಟಗರಿ ಸೈಟಿಗಾಗಿ ಕನ್ನಡದ ಹಲವಾರು ಸಾಹಿತಿಗಳು ಅಧಿಕಾರಸ್ಥರ ಅಂಗಳಕ್ಕೆ ಪದೇ ಪದೇ ಅಲೆದಾಡುವುದನ್ನು ಸಿಎಂ ಅವರೂ ಗಮನಿಸಿದಂತಿದೆ. ಹಾಗಾಗಿ ತಕ್ಷಣಕ್ಕೆ ಅವರಿಗೆ ಆ ಆಲೋಚನೆ ಬಂದಿರಬಹುದು. 

ಆದರೆ ಕರ್ನಾಟಕ ಸರಕಾರ ನಿಜಕ್ಕೂ ಬಾನು ಮುಷ್ತಾಕ್ ಅವರಿಗೆ ಅರ್ಹ ಗೌರವ ಸಲ್ಲಿಸಬೇಕು ಎಂದಿದ್ದರೆ, ಸೈಟ್ ನೀಡುವುದಲ್ಲ, ಅವರನ್ನು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ನಾಮಕರಣ ಮಾಡಬೇಕು. ಇದು ಅವರಿಗೆ ಅರ್ಹವಾಗಿ ಸಲ್ಲಬೇಕಾಗಿರುವ ಗೌರವ ಎಚಿದು ಅವರು ಒತ್ತಾಯಿಸಿದ್ದಾರೆ. 

ವಿಧಾನ ಪರಿಷತ್ತು ಹಿರಿಯರ ಮನೆ. ಬಾನು ಮುಷ್ತಾಕ್ ಅವರೂ 77 ವರ್ಷಗಳ ಸಮೀಪ ಇದ್ದಾರೆ. ಕೇವಲ ವಯಸ್ಸು ಮಾತ್ರವಲ್ಲ, ಸಾಧನೆಯ ವಿಷಯದಲ್ಲೂ. ಸರಕಾರವು ಇತ್ತೀಚೆಗೆ ವಿಧಾನ ಪರಿಷತ್ತನ್ನು ಪಕ್ಷ ರಾಜಕಾರಣಿಗಳ ಪುನರ್ವಸತಿ ಕೇಂದ್ರ ಎಂಬಂತೆ ಭಾವಿಸುತ್ತಿದೆ. ಆ ರೀತಿಯಲ್ಲೇ ಇತ್ತೀಚಿನ ನಾಮಕರಣಗಳು ನಡೆದಿವೆ.  

ಬಾನು ಮುಷ್ತಾಕ್ ಅವರ ಸಾಧನೆಯನ್ನೇ ಗಮನಿಸಿ. ಸಾಹಿತ್ಯ ಕೋಟಾ ಮಾತ್ರವಲ್ಲ ಬೇರೆ ಎಲ್ಲ ವಿಧಾನಗಳಲ್ಲೂ ಅವರದ್ದು ಅತ್ಯಂತ ಅರ್ಹ ಆಯ್ಕೆ ಆಗಲಿದೆ. ಬಂಡಾಯ ಸಾಹಿತ್ಯ ಸಂಘಟನೆ, ರೈತ ಚಳವಳಿ, ದಲಿತ ಚಳವಳಿ, ಕನ್ನಡದ ಚಳವಳಿ, ಕೋಮು ಸೌಹಾರ್ದ ಚಳವಳಿ ಎಲ್ಲದರಲ್ಲೂ ಅವರು ಮುಂಚೂಣಿಯಲ್ಲಿ ನಿಂತು ಹೋರಾಡಿದವರು. ಇವರನ್ನು ವಿಧಾನ ಪರಿಷತ್ತಿಗೆ ಸರಕಾರ ನಾಮಕರಣ ಮಾಡಿದರೆ ಜನಚಳುವಳಿಗಳಿಗೆ ಪ್ರಾತಿನಿಧ್ಯ ಕೊಟ್ಟಂತಾಗುತ್ತದೆ. ಮಹಿಳೆಯರಿಗೆ ಪ್ರಾತಿನಿಧ್ಯ ಕೊಟ್ಟಂತಾಗುತ್ತದೆ. ಅವರು ಅಲ್ಪಸಂಖ್ಯಾತ ಸಮುದಾಯದ ಪ್ರಗತಿಪರ ಧ್ವನಿ. ಮತ್ತು ಪತ್ರಿಕಾ ಮಾಧ್ಯಮದ ಹಿರಿಯ ಪ್ರತಿನಿಧಿಯೂ ಹೌದು. 

ಸಿಎಂ ಸಿದ್ದರಾಮಯ್ಯ ಅವರು ಈ ಅವಕಾಶವನ್ನು ಕಳೆದುಕೊಳ್ಳಬಾರದು. ಹೇಗೂ ಈಗ ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳನ್ನು ತುಂಬಬೇಕಿದೆ. ಬಾನು ಮುಷ್ತಾಕ್ ಅವರು ಅತ್ಯಂತ ಅರ್ಹ ಆಯ್ಕೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕನ್ನಡದ ಇಡೀ ಸಾರಸ್ವತ ಲೋಕ ಈ ಆಯ್ಕೆಯನ್ನು ಸ್ವಾಗತಿಸಲಿದೆ.  

ಹಿಂದೆ ರಾಮಕೃಷ್ಣ ಹೆಗಡೆ, ಎಚ್‌.ಡಿ.ದೇವೇಗೌಡರ ಕಾಲದಲ್ಲೂ ಬಾನು ಮುಷ್ತಾಕ್ ಅವರ ಹೆಸರು ವಿಧಾನ ಪರಿಷತ್ ನಾಮಕರಣಕ್ಕೆ ಪ್ರಸ್ತಾಪ ಆಗಿತ್ತು. ಒಮ್ಮೆ ಲಂಕೇಶ್ ಅವರೂ ಬಾನು ಅವರಿಗೆ, "ನೀವು ವಿಧಾನ ಪರಿಷತ್ ಸದಸ್ಯರಾಗಬೇಕು ಕಣ್ರೀ" ಎಂದಿದ್ದರು. ಈಗ ಸಿದ್ದರಾಮಯ್ಯ ಅವರಿಗೆ ಇಂತಹದ್ದೊಂದು ನಿರ್ಧಾರ ಕೈಗೊಳ್ಳುವ ಅವಕಾಶ ಬಂದಿದೆ.  

ಜಿ ಕೆಟಗರಿ ಸೈಟ್ ಕೊಟ್ಟರೆ ಬಾನು ಮುಷ್ತಾಕ್ ಅವರ ಕುಟುಂಬಕ್ಕೆ ಲಾಭ ಆಗಬಹುದು. ಆದರೆ ಅವರು ವಿಧಾನ ಪರಿಷತ್ ನಲ್ಲಿ ಇದ್ದರೆ ಇಡೀ ನಾಡಿಗೇ ಅದರ ಲಾಭ ಸಿಗುತ್ತದೆ. ಏಕೆಂದರೆ ಬಾನು ಮುಷ್ತಾಕ್ ಅವರದ್ದು ಸದಾ ನಿಷ್ಠುರ ಧ್ವನಿ. ಚಳವಳಿಗಳಿಗೆ, ಸಾಹಿತ್ಯ ಕ್ಷೇತ್ರಕ್ಕೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ, ಮಾಧ್ಯಮ ರಂಗಕ್ಕೆ- ಹೀಗೆ ಎಲ್ಲ ಕ್ಷೇತ್ರಗಳಿಗೂ ಪ್ರಾತಿನಿಧ್ಯ ಕೊಟ್ಟಂತೆ ಆಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.