ಮಳೆ ಆರ್ಭಟಕ್ಕೆ ನದೀತೀರದ ಜನರಲ್ಲಿ ಹೆಚ್ಚಿದ ಆತಂಕ ಕೃಷ್ಣ ನದಿಗೆ ನಿತ್ಯ ಹರಿದು ಬರುತ್ತಿದೆ 1 ಲಕ್ಷ ಕ್ಯುಸೆಕ್ ನೀರು

ಮಳೆ ಆರ್ಭಟಕ್ಕೆ ನದೀತೀರದ ಜನರಲ್ಲಿ ಹೆಚ್ಚಿದ ಆತಂಕ ಕೃಷ್ಣ ನದಿಗೆ ನಿತ್ಯ ಹರಿದು ಬರುತ್ತಿದೆ 1 ಲಕ್ಷ ಕ್ಯುಸೆಕ್ ನೀರು Anxiety is mounting among people living along the riverbanks due to the torrential rains; 1 lakh cus

ಲೋಕದರ್ಶನ ವರದಿ 

ಮಾಂಜರಿ 08: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ಚಿಕ್ಕೋಡಿ-ನಿಪ್ಪಾಣಿ ಭಾಗದ ಎಂಟು ಸೇತುವೆಗಳು ಜಲಾವೃತಗೊಂಡಿವೆ. ಇದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಆವರಿಸಿದೆ. ಮಹಾರಾಷ್ಟ್ರ ಸೇರಿ ಗಡಿ ಭಾಗದಲ್ಲಿ ಅಪಾರ ಮಳೆ ಸುರಿಯುತ್ತಿರುವದರಿಂದ  ಕೃಷ್ಣಾ ನದಿಗೆ ನಿತ್ಯ  1 ಲಕ್ಷ  ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇದರಿಂದ  ನದಿ ತೀರದ ಜನರು ಭಯದಲ್ಲೇ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. 

ಮಹಾ' ಆಣೆಕಟ್ಟೆಗಳು ಶೇ 40ರಷ್ಟು ಭರ್ತಿ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕೃಷ್ಣಾ ನದಿಯ ರಾಜಾಪೂರೆ ಬ್ಯಾರೇಜಿನಿಂದ ಸೋಮವಾರ 59,875 ಕ್ಯುಸೆಕ್ ಹೊರ ಹರಿವು ಇದ್ದು, ತಾಲ್ಲೂಕಿನ ಮಲಿಕವಾಡ-ದತ್ತವಾಡ ಸೇತುವೆ ಬಳಿಯಲ್ಲಿ ದೂಧಗಂಗಾ ನದಿಯ ಹೊರ ಹರಿವು 17,248 ಕ್ಯುಸೆಕ್ ಇದೆ. ಕಲ್ಲೋಳ-ಯಡೂರ ಬ್ಯಾರೇಜ್ ಬಳಿಯಲ್ಲಿ ಕೃಷ್ಣಾ ನದಿಗೆ 77,123 ಕ್ಯುಸೆಕ್ ಹೊರ ಹರಿವು ಇದೆ. ಹಿಪ್ಪರಗಿ ಬ್ಯಾರೇಜಿನಿಂದ 50,150 ಕ್ಯುಸೆಕ್ ಹೊರ ಹರಿವು ದಾಖಲಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶ ವ್ಯಾಪ್ತಿಯ ಕೊಯ್ನಾದಲ್ಲಿ 77 ಮಿ.ಮೀ, ನವಜಾದಲ್ಲಿ 56 ಮಿ.ಮೀ, ಮಹಾಬಳೇಶ್ವರದಲ್ಲಿ 75 ಮಿ.ಮೀ, ವಾರಣಾದಲ್ಲಿ 46 ಮಿ.ಮೀ, ರಾಧಾನಗರಿಯಲ್ಲಿ 75 ಮಿ.ಮೀ ಮಳೆ ದಾಖಲಾಗಿದ್ದು, ಮಹಾರಾಷ್ಟ್ರದ ಬಹುತೇಕ ಆಣೆಕಟ್ಟೆಗಳು ಶೇ 40ರಷ್ಟು ಭರ್ತಿಯಾಗಿವೆ. 

ಸೇತುವೆಗಳು ಸಂಪೂರ್ಣ ಜಲಾವೃತ: ಮಹಾ ಮಳೆಯಿಂದ ಉಪ ವಿಭಾಗ ವ್ಯಾಪ್ತಿಯ ನಿಪ್ಪಾಣಿ ತಾಲ್ಲೂಕಿನ ಭೋಜ-ಕಾರದಗಾ, ಭೋಜ-ಕುನ್ನೂರ, ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಶಿ, ಹುನ್ನುರಗಿ-ಮಮದಾಪೂರ ಕೆಎಲ್, ಬಾರವಾಡ-ಕುನ್ನೂರ, ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ-ಯಡೂರ, ಮಲಿಕವಾಡ-ದತ್ತವಾಡ ಸೇತುವೆಗಳು ಜಲಾವೃತಗೊಂಡ ಸ್ಥಿತಿಯಲ್ಲಿವೆ. 

ಕೃಷ್ಣಾಗೆ ಹರಿದು ಬರುತ್ತಿದೆ 1 ಲಕ್ಷ ಕ್ಯೂಸೆಕ್ಸ್‌ ನೀರು: ಗಡಿಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸುಮಾರು 1 ಲಕ್ಷ  ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿದೆ. ಇದರಲ್ಲಿ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದಲೇ ಸುಮಾರು 1 ಲಕ್ಷ ಕ್ಯೂಸೆಕ್ಸ್‌ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಇನ್ನು ದೂದಗಂಗಾ ಮತ್ತು ವೇದಗಂಗಾ ಈ ಎರಡೂ ನದಿಗಳು ಪ್ರಸ್ತುತ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿಗಳ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕುಗಳಲ್ಲಿ ಹಲವು ಪ್ರಮುಖ ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದು, ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಬಳಸಲಾಗುತ್ತಿದೆ. 

ಮುನ್ನೆಚ್ಚರಿಕೆ ನೀಡಿದ ಜಿಲ್ಲಾ ಆಡಳಿತ: ಕೃಷ್ಣಾ, ವೇದಗಂಗಾ ಮತ್ತು ದೂದಗಂಗಾ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಸಾರ್ವಜನಿಕರು ಯಾರೂ ನದಿಗೆ ಇಳಿಯಬಾರದು ಮತ್ತು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆಡಳಿತವು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.