ಬಳ್ಳಾರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ

ಬಳ್ಳಾರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ Amarashilpi Jakanachari Commemoration Day in Bellary

        ಬಳ್ಳಾರಿ 01:  ಅಮರಶಿಲ್ಪಿ ಜಕಣಾಚಾರಿ ಶಿಲ್ಪಿ ಕೆತ್ತನೆಯು ರಾಜ್ಯದ ಶ್ರೀಮಂತ ಪರಂಪರೆಯಾಗಿದ್ದು, ಅವರ ಕೊಡುಗೆ ಮಹತ್ತರವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ  ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕಾಳಮ್ಮ ಬೀದಿಯ ಕಾಳಮ್ಮ ಕಮಠೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಜಕಣಾಚಾರಿಯು ತುಮಕೂರಿನ  ಕೈದಾಳ ಎಂಬ ಹಳ್ಳಿಯಲ್ಲಿ ಜನಿಸಿದವರು. ತಮ್ಮ ಜೀವನವನ್ನೇ ಶಿಲ್ಪ ಕಲೆಗಾಗಿ ಮುಡಿಪಾಗಿಟ್ಟಿದ್ದರು. ಅವರ ಕೆತ್ತನೆಯ  ಬೇಲೂರಿನ ಚನ್ನಕೇಶವ,  ಹಳೇಬೀಡು ದೇವಾಲಯಗಳು ಪ್ರಸಿದ್ದಿ ಪಡೆದಿವೆ ಎಂದರು. 

ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಂದು ಕಲ್ಲಿನಲ್ಲಿ ಶಿಲ್ಪ ಕೆತ್ತನೆಯು ಜೀವಂತವಾಗಿದೆ. ಪ್ರಸ್ತುತ ಆಧುನಿಕ ಯುಗದಲ್ಲಿ ಶಿಲ್ಪಿಕಲೆ ನಶಿಸಿಹೋಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಅಮರಶಿಲ್ಪಿ ಜಕಣಾಚಾರಿ ಅವರ ಪರಂಪರೆಯನ್ನು ನಾವು ಉಳಿಸಿ ಬೆಳೆಸಬೇಕಾಗಿದೆ ಎಂದರು. 

ವಿಶ್ವಕರ್ಮರನ್ನು ವಿಶ್ವರೂಪ, ದಕ್ಷಿಣಾಚಾರ್ಯ, ಜಕಣಾಚಾರ್ಯ, ಸ್ಥಪತಿ ಇನ್ನಿತರ ಹೆಸರುಗಳಿಂದ ಗುರುತಿಸಲಾಗುತ್ತಿದೆ. ಅವರ ಶಿಲ್ಪಕಲಾ ಕುಶಲತೆ ಇಂದು ಜಗತ್ತಿನ ಎಲ್ಲೆಡೆ ಪಸರಿಸಿದೆ. ವಿಶ್ವಕರ್ಮ ಸಮಾಜದವರು ಸಾಮಾಜಿಕ, ಅರ್ಥಿಕ, ರಾಜಕೀಯವಾಗಿ ಸಬಲತೆ ಸಾಧಿಸಬೇಕು ಎಂದು ಹೇಳಿದರು. 

ಸಹಾಯಕ ಆಯುಕ್ತ ರಾಜೇಶ್ ಹೆಚ್‌.ಡಿ ಅವರು ಮಾತನಾಡಿ ಬೇಲೂರು, ಹಳೇಬೀಡು ದೇವಾಲಯಗಳ ವಾಸ್ತುಶಿಲ್ಪವು ಅತ್ಯಂತ ಚಾರಿತ್ರಿಕವಾಗಿವೆ. ಇತಿಹಾಸ ಪ್ರಸಿದ್ಧ ದೇವಾಲಯಗಳು ನಮ್ಮ ದೇಶದ ಸಂಸ್ಕೃತಿ ವೈಭವವನ್ನು ಪ್ರತಿಬಿಂಬಿಸುತ್ತವೆ. ಅಂತಹ ವಾಸ್ತುಶಿಲ್ಪ ಕಲೆ ನಮ್ಮ ದೇಶದಲ್ಲಿ ಇರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. 

ಹೊಸಪೇಟೆಯ ಶ್ರೀ ಅಕ್ಷಯ ಪದವಿಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ವೆಂಕಟೇಶ್ ಬಡಿಗೇರ್ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಅವರು ಕರ್ನಾಟಕ ಸಾಹಿತ್ಯ ಶಿಲ್ಪಕಲಾ ಜಗತ್ತಿನ ಆಸ್ಮಿತೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ವರ್ಣಿಸಿದರು. 

ಹೊಯ್ಸಳರು ಮತ್ತು ಚಾಲುಕ್ಯರ ಕಾಲದಲ್ಲಿ ಸುಂದರ ವಾಸ್ತುಶಿಲ್ಪಕ್ಕೆ ಪುರಾಣ ಪ್ರಸಿದ್ಧಿ ಪಡೆದ ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳು ಶಿಲ್ಪಾ ಕಲೆಗೆ ಜೀವ ತುಂಬುವ ಮೂಲಕ ಜಕಣಾಚಾರಿ ದೇವ ಶಿಲ್ಪಿಯಾಗಿದ್ದಾರೆ ಎಂದು ಸ್ಮರಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನ ಪೀಠಿಕೆ ಭೋದಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಐದು ಜನ ಹಿರಿಯ ವಿಶ್ವಕರ್ಮ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ವಿಶ್ವಕರ್ಮ ವಿಕಾಸ ವೇದಿಕೆಯ ಅಧ್ಯಕ್ಷ ಚಂದ್ರಕಾಂತ್ ಸೋನರ್,  ರಾಜಸ್ತಾನಿ ವಿಶ್ವಕರ್ಮ ಅಧ್ಯಕ್ಷ ಮೇಘರಾಜ್, ಮಹಾನಗರ ಪಾಲಿಕೆ ಸದಸ್ಯೆ ಈರಮ್ಮ ಸುರೇಂದ್ರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ತ್ರಿವೇಣಿ ಪತ್ತಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಮಾಜ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.