ಶರಣರ ಬದುಕಿನ ಆದರ್ಶ ಅಳವಡಿಸಿಕೊಳ್ಳಿ: ಪ್ರಭುಲಿಂಗ ಶ್ರೀ

Adopt the ideal of a life of refuge: Prabhulinga Sri

ತಾಳಿಕೋಟಿ 13: ಭಾರತದ ಪರಂಪರೆಯಲ್ಲಿ ಸಂತರ ಶರಣರ ಹಾಗೂ ಮಹಾತ್ಮರ ಜೀವನ ಸಕಲರಿಗೂ ಆದರ್ಶವಾಗಿದೆ ಅವರು ತೋರಿದ ಮಾರ್ಗದಲ್ಲಿಯೇ ಬದುಕಿನ ಸಾರ್ಥಕತೆ ಅಡಗಿದೆ ಎಂದು ನಾಡಿನ ಖ್ಯಾತ ಪ್ರವಚನಕಾರರಾದ ಹಿಕ್ಕನಗುತ್ತಿ ಲಿಂಗಾಯತ ಮಹಾಮಠದ ಪ್ರಭುಲಿಂಗ ಶರಣರು ಹೇಳಿದರು. ಪಟ್ಟಣದ ರಾಜವಾಡೆ ಆವರಣದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ನಿರ್ಮಾಣ ಸಮಿತಿ ವತಿಯಿಂದ ಪುತ್ಥಳಿ ಅನಾವರಣ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ "ಚೆನ್ನಮ್ಮಾಜಿ ಜೀವನ ಚರಿತ್ರೆ" ಮಹಾ ಪ್ರವಚನ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.  

ಕಿತ್ತೂರು ಚೆನ್ನಮ್ಮ ಕೇವಲ ವೀರ, ಶೂರ, ಧೀರ ಮಹಿಳೆ ಮಾತ್ರ ಆಗಿರಲಿಲ್ಲ ಅವಳು ಭಕ್ತಿವಂತೆ, ನ್ಯಾಯವಂತೆ, ಮಹಾ ತ್ಯಾಗಮಯಿ ಆಗಿದ್ದು ಬಡವರ ಕಣ್ಣೀರು ಒರೆಯಿಸಿ ರಾಜ್ಯಕ್ಕಾಗಿ ತನ್ನ ಪ್ರಾಣವನ್ನೇ ನೀಡಿದಳು. ಅವಳ ಇಡೀ ಜೀವನವನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ ಆದ್ದರಿಂದ ಅವಳ ಜೀವನ ಚರಿತ್ರೆಯನ್ನು ಸಮಗ್ರವಾಗಿ ತಿಳಿಸಿಕೊಡಲು ಇಲ್ಲಿ ಇಂದಿನಿಂದ ಜೂನ್ 22 ರವರೆಗೆ 10 ದಿನಗಳ ಕಾಲ ಪ್ರತಿ ದಿನ ಸಂಜೆ 7ರಿಂದ 9ರ ವರೆಗೆ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗ ಮಾಡಿಕೊಳ್ಳಿ ಎಂದರು.  

ಕಾರ್ಯಕ್ರಮದ ಆರಂಭದಲ್ಲಿ ಚೆನ್ನಮ್ಮಾಜಿ ಜೀವನ ಚರಿತ್ರೆ ಗ್ರಂಥ ಹಾಗೂ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಪುತ್ಥಳಿ ನಿರ್ಮಾಣ ಸೇವಾ ಸಮಿತಿ ಗೌರವ ಅಧ್ಯಕ್ಷ ಚಂದ್ರಶೇಖರ ಪಾಟೀಲ,ಅಧ್ಯಕ್ಷೆ ನೀಲಮ್ಮ ಎಸ್‌.ಪಾಟೀಲ, ಉಪಾಧ್ಯಕ್ಷ ಕಲ್ಲಪ್ಪ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಕೋಟಿ, ಕಾರ್ಯದರ್ಶಿ ಭೀಮನಗೌಡ ಪಾಟೀಲ,ಗಣ್ಯರಾದ ಚಂದ್ರಶೇಖರ ಮಠಪತಿ, ಬಸವರಾಜ ನಾಗನೂರ, ಸಿದ್ದು ಸಾಲೋಂಕೆ, ದಿವೇಂದ್ರ ಗೊಟಗುಣಕಿ, ಮಲ್ಲು ಬಿರಾದಾರ, ಬಸ್ಸು ಗುಂಡುಕನಾಳ, ನೇತಾಜಿ ಪವಾರ,ಸಿದ್ದಣ್ಣ ಗುಗ್ರಿ, ಲಕ್ಷ್ಮೀಬಾಯಿ ಚಳೇಕರ್, ಪಾರ್ವತಿ ಮಠಪತಿ, ಸಮಿತಿಯ ಪದಾಧಿಕಾರಿಗಳು ಸಮಾಜದ ಗಣ್ಯರು ಹಿರಿಯರು ಹಾಗೂ ಮಹಿಳೆಯರು ಇದ್ದರು. ಖಾಸ್ಗತೇಶ್ವರ ಸಂಗೀತ ಶಾಲೆಯ ಮುಖ್ಯಸ್ಥ ದೀಲೀಪಸಿಂಗ್ ಹಜೇರಿ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.