ವ್ಯವಸ್ಥಿತವಾಗಿ ಪರೀಕ್ಷೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚನೆ

ವ್ಯವಸ್ಥಿತವಾಗಿ ಪರೀಕ್ಷೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚನೆ Additional District Magistrate Somalinga Gennur instructs to conduct examinations systematically


 ವಿಜಯಪುರ 04: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಡೆಸುವ ಪ್ರಸಕ್ತ 2025-26ನೇ ಸಾಲಿನ ಯುಪಿಎಸ್‌ಸಿ ನಾಗರೀಕ ಸೇವೆ, ಕೆಎಎಸ್ ಗೆಜೆಟೆಡ್ ಪ್ರೊಬೆಷನರ್ ಮತ್ತು ಗ್ರೂಪ್‌-ಸಿ ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆ ಮಾಡಲು ವಿಜಯಪುರ ನಗರದಲ್ಲಿ  ನ.8 ಹಾಗೂ 9 ರಂದು ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಯನ್ನು ವ್ಯವಸ್ಥಿತ ಹಾಗೂ ಪಾರದರ್ಶಕವಾಗಿ  ನಡೆಸುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಗರದ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜ್‌ನಲ್ಲಿ ನಡೆಯಲಿದ್ದು, ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಗ್ರೂಪ್‌-ಸಿ ಪರೀಕ್ಷೆಗೆ 131 ಹಾಗೂ ಐಎಎಸ್ ಮತ್ತು ಕೆಎಎಸ್ ಪರೀಕ್ಷೆ 381  ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದು, ನ.8 ರ ಶನಿವಾರ ಬೆಳಿಗ್ಗೆ 10-30ರಿಂದ ಮಧ್ಯಾಹ್ನ 12-30ರವರೆಗೆ ಗ್ರೂಪ್‌-ಸಿ ಪರೀಕ್ಷೆಗಳು ಹಾಗೂ ನ.9ರ ಭಾನುವಾರ ಬೆಳಿಗ್ಗೆ 10-30ರಿಂದ 12-30ರವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 2 ರಿಂದ 3-30ರವರೆಗೆ ಪತ್ರಿಕೆ-2 ಯುಪಿಎಸ್‌ಸಿ ನಾಗರಿಕ ಸೇವೆ, ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ ಪರೀಕ್ಷೆಗಳು ಜರುಗಲಿವೆ.  

ವ್ಯವಸ್ತಿತ ಪರೀಕ್ಷೆಗಾಗಿ ತ್ರಿ-ಸದಸ್ಯ ಸಮಿತಿ ನಿಯೋಜಿಸಲಾಗಿದೆ. ಪರೀಕ್ಷಾ ದಿನದಂದು ಸೂಕ್ತ ಪೊಲೀಸ್ ಭದ್ರತೆ, ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆ, ಪಶ್ನೆ ಪತ್ರಿಕೆಗಳನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಸ್ವೀಕರಿಸಿ, ಭದ್ರಪಡಿಸುವುದು ಹಾಗೂ ನಿಯಮಾನುಸಾರ ಪರೀಕ್ಷಾ ದಿನದಂದು ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆ ರವಾನೆ, ನಿಗದಿತ ಸಮಯಕ್ಕೆ ಪ್ರಶ್ನೆ ಪತ್ರಿಕೆ ತಲುಪಿಸುವುದು, ನಂತರ ಉತ್ತರ ಪತ್ರಿಕೆಗಳನ್ನು ನಿಯಮಾನುಸಾರ ಜಿಲ್ಲಾ ಖಜಾನೆಗೆ ಮರಳಿಸುವುದು,  ಪರೀಕ್ಷೆಗೆ ನಿಯೋಜಿತ ಸ್ಥಾನಿತ ಜಾಗೃತ ಅಧಿಕಾರಿಗಳು ಯಾವುದೇ ರೀತಿಯ ಅಕ್ರಮ ನಡೆಯದಂತೆ ಸೂಕ್ತ ಗಮನ ಹರಿಸಬೇಕು. ಮುಖ್ಯ ಅಧೀಕ್ಷಕರು ಮತ್ತು ಉಪ ಅಧೀಕ್ಷಕರು ಪರೀಕ್ಷೆಗೆ ಮುನ್ನ ಪರೀಕ್ಷಾ ಕೇಂದ್ರಗಳಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳ ಕುರಿತು ಪರೀಶೀಲನೆ ನಡೆಸಿ ಖಚಿತಪಡಿಸಿಕೊಳ್ಳುವುದು ಸೇರಿದಂತೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿ ಪರೀಕ್ಷೆಯನ್ನು ಯಶಸ್ವಿಗೊಳಿಸಲು ಸೂಕ್ತ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.  ಪರೀಕ್ಷೆ ಮುಗಿಯವರೆಗೂ ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರ-ಕೊಠಡಿಗಳಿಂದ ಪ್ರಶ್ನೆ ಪತ್ರಿಕೆ ಬಹಿರಂಗವಾಗುವಂತಿಲ್ಲ. ಈ ಬಗ್ಗೆ ಜಿಲ್ಲಾ ನೊಡಲ್ ಅಧಿಕಾರಿಗಳು ತೀವ್ರ ನಿಗಾ ಇರಿಸಬೇಕು. ತಪ್ಪಿದ್ದಲ್ಲಿ ನೊಡಲ್ ಅಧಿಕಾರಿಗಳನ್ನೇ ಹೊಣೆಗಾರನ್ನಾಗಿಸಲಾಗುವುದು ಎಂದು ಅವರು ಹೇಳಿದರು.  

ಸಭೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಪ್ರಶಾಂತ ಪೂಜಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ, ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ಎಂ.ಎ.ಶೇಖ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕಾ ವಿಸ್ತರಣಾಧಿಕಾರಿ ರಾಮಲಿಂಗ ಭೈರೋಡಗಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸೋಮಶೇಖರ ಕೊಲ್ಲೂರು, ಅರಕೇರಿಯ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಕಾಲೇಜ್ ಪ್ರಾಂಶುಪಾಲ ಸಂಗಣ್ಣ ಆಲಗೂರ, ಅಫಜಲಪೂರ ಟಕ್ಕೆ ಮುಸ್ಲಿಂ ವಸತಿ ಶಾಲೆ ಪ್ರಾಂಶುಪಾಲ ಸಿದ್ರಾಮ ಎಂಟೆತ್ತ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ತಾಲೂಕಾ ವಿಸ್ತರಣಾಧಿಕಾರಿ ಇಲಾಯಿ ನಾಗರಾಳ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.