ಯುವ ಕಾಂಗ್ರೆಸ್: ಜೆ.ರವಿ, ಬಾಬರ್ ಕಮ್ಲಿ, ಸಿದ್ದು ಹೆಚ್. ಆಯ್ಕೆ
ಗಂಗಾವತಿ 08: ಕಳೆದ ಐದು ತಿಂಗಳ ಹಿಂದೆ ಯುಥ್ ಕಾಂಗ್ರೆಸ್ಗಾಗಿ ಆನ್ ಲೈನ್ ಮೂಲಕ ಸಾರ್ವಜನಿಕವಾಗಿ ಜರುಗಿದ ಆಯ್ಕೆ ಪ್ರಕ್ರಿಯೆಯಲ್ಲಿ ಅನ್ಸಾರಿ ಬಣದ ಕಾರ್ಯಕರ್ತರು ಆಯ್ಕೆಯಾಗಿದ್ದು, ನಗರದ ಬಸ್ ನಿಲ್ದಾಣದ ಬಳಿ ತಾಶಾ, ಪಟಾಕಿ ಹಚ್ಚಿ ವಿಜಯೋತ್ಸವ ಆಚರಿಸಿದರು.
ಗಂಗಾವತಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಜೋಗದ ರವಿ ನಾಯಕ, ನಗರ ಘಟಕದ ಅಧ್ಯಕ್ಷರಾಗಿ ಬಾಬರ್ ಮಾಬುಸಾಬ್ ಕಮ್ಲಿ, ಗ್ರಾಮೀಣಾಧ್ಯಕ್ಷರಾಗಿ ಸಿದ್ದು ಹಿರೇಮಠ ಆಯ್ಕೆಯಾಗಿದ್ದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾರ್ಯಕರ್ತರು, ಅಭಿಮಾನಿಗಳಲ್ಲಿ ಹುರುಪು ಹೆಚ್ಚಿದೆ.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಇಲಿಯಾಸ್ ಖಾದ್ರಿ ಮಾತನಾಡಿ, ಹೊಸ ಮುಖಗಳನ್ನು ಗುರುತಿಸಿ ಅವರಿಗೆ ಸೂಕ್ತ ಅಧಿಕಾರ ಕೊಡಿಸುವಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸಿದ್ಧಹಸ್ತರು, ಸಾಮಾನ್ಯರನ್ನು ಅಧಿಕಾರದ ಗದ್ದುಗೆಗೆ ಏರಿಸಿ ತಮ್ಮ ಚಾಣಕ್ಷನೀತಿ ಪ್ರದರ್ಶಿಸಿರುವ ಅವರು ಶಾಸಕರಾದಲ್ಲಿ ಗಂಗಾವತಿ ಇನ್ನು ಹೆಚ್ಚಿನ ಅಭಿವೃದ್ಧಿಯಾಗಲಿದೆ, ಆದ್ದರಿಂದ ಗಂಗಾವತಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಜನತೆ ಅನ್ಸಾರಿಯವರನ್ನು ಗೆಲ್ಲಿಸುವಲ್ಲಿ ಫಣ ತೊಡಬೇಕಿದೆ, ಆಯ್ಕೆಯಾದ ಪ್ರತಿಯೊಬ್ಬರು ಅರ್ಹನಿಸಿ ದುಡಿಯುವ ಮುಖೇನ ಪಕ್ಷಕ್ಕೆ ಬಲ ತುಂಬೋಣ ಎಂದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜುಬೇರ್ ಮಾತನಾಡಿ, ಮಾಜಿ ಸಚಿವ ಅನ್ಸಾರಿಯವರ ಪ್ರಯತ್ನದ ಫಲ ಗಂಗಾವತಿಯ ಪ್ರತಿ ಗಲ್ಲಿಗಲ್ಲಿಯು ಅಭಿವೃದ್ಧಿ ಕಂಡಿದೆ, ಈಗಲು ಅವರು ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರಲ್ಲಿದ್ದರೂ ಗಂಗಾವತಿಯ ಜನತೆಗಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಕೆಲಸ ಮಾಡುತ್ತಿದ್ದಾರೆ ಅವರನ್ನು ಮುಂದಿನ ಬಾರಿ ಗೆಲ್ಲಿಸಿ ಕ್ಷೇತ್ರಕ್ಕೆ ಕೊಡುಗೆ ನೀಡೋಣ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ರಕ್ಷಾಸಮಿತಿ ಸದಸ್ಯ ಮಲ್ಲಿಕಾರ್ಜುನ ತಟ್ಟಿ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ರೆಹಮತ್ ಸಂಪಂಗಿ, ಕಾಂಗ್ರೆಸ್ ಮುಖಂಡರಾದ ಹನೀಫ್, ವಸಂತ್ ಮಾಲಿಪಾಟೀಲ್, ಖಾಜಾ ಶಫಾತ್ ಹುಸೇನ್ ಇತರರಿದ್ದರು.