ಜಯ-ಪರಾಜಯಗಳು ಜೀವನ ಪಾಠಗಳು : ಡಾ. ಎ. ಕೆ. ಮಠ

ಜಯ-ಪರಾಜಯಗಳು ಜೀವನ ಪಾಠಗಳು : ಡಾ. ಎ. ಕೆ. ಮಠ Victories and defeats are life lessons: Dr. A. K. Math

         ಗದಗ 26 : ಇಂದಿನ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ಪಾಠ್ಯಕ್ರಮದ ಜೊತೆಗೆ ಸಹಪಠ್ಯ ಚಟುವಟಿಕೆಗಳಿಗೂ ಸಮಾನ ಪ್ರಾಮುಖ್ಯತೆ ನೀಡುವುದು ಅವಶ್ಯಕ. ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಯಷ್ಟೇ ಅಲ್ಲದೆ, ಅವರ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ವ್ಯಕ್ತಿತ್ವ ವಿಕಾಸಕ್ಕೂ ಕ್ರೀಡೆಗಳು ಮಹತ್ವದ ಪಾತ್ರವಹಿಸುತ್ತವೆ. ಇಲ್ಲಿ  ಜಯ-ಪರಾಜಯಗಳು ಜೀವನ ಪಾಠಗಳಷ್ಟೇ ಎಂದು ಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎ. ಕೆ. ಮಠ ತಿಳಿಸಿದರು.  ನಗರದ ಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಕ್ರೀಡಾ ಸಂಘದ ಅಧ್ಯಕ್ಷರಾದ ಪ್ರೊ. ರಾಜು ಯಲಬುರ್ಗಿ ಕ್ರೀಡಾ ಸಾಮಗ್ರಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಎ. ಕೆ. ಮಠ ಅವರು, ಜೀವನದಲ್ಲಿ ಗೆಲುವು ಮತ್ತು ಸೋಲು ನಾಣ್ಯದ ಎರಡು ಮುಖಗಳಂತೆ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ, ಕ್ರೀಡೆಗಳು ಕೇವಲ ಬಹುಮಾನಗಳಿಗಾಗಿ ಅಲ್ಲ, ಅವು ಜೀವನ ಪಾಠಗಳನ್ನು ಕಲಿಸುವ ಸಾಧನವೆಂದರು. ಸೋಲನ್ನು ಸಹಜವಾಗಿ ಸ್ವೀಕರಿಸುವ ಮನೋಭಾವ ಹಾಗೂ ಜಯವನ್ನು ವಿನಯದಿಂದ ಆಚರಿಸುವ ಗುಣ ಕ್ರೀಡಾಂಗಣದಿಂದಲೇ ಬೆಳೆದು ಬರುತ್ತದೆ ಎಂದು ತಿಳಿಸಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿ, ನಿಯಮಪಾಲನೆ, ಶಿಸ್ತು ಹಾಗೂ ತಂಡಭಾವನೆಗಳ ಮಹತ್ವವನ್ನು ಮನದಟ್ಟು ಮಾಡಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ. ವೀರಣ್ಣ ಬಡಿಗೇರ ಕಾರ್ಯಕ್ರಮವನ್ನು ಯಶಶ್ವಿಯಾಗಿ ಸಂಘಟಿಸಿದರು. 

ಉದ್ಘಾಟನಾ ಕಾರ್ಯಕ್ರಮದ ನಂತರ ನಡೆದ ಹೊರಾಂಗಣ ಕ್ರೀಡಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಅಪಾರ ಉತ್ಸಾಹದಿಂದ ಭಾಗವಹಿಸಿ ತಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಿದರು. ವಿವಿಧ ಕ್ರೀಡಾ ಸ್ಪರ್ಧೆಗಳು ಕ್ರೀಡಾಂಗಣವನ್ನು ಕಾವೇರಿಸಿದವು. ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ, ಪರಸ್ಪರ ಸಹಕಾರ ಮತ್ತು ಏಕತೆ ಸ್ಪಷ್ಟವಾಗಿ ಕಾಣಿಸಿತು. ಸಮಗ್ರವಾಗಿ, ಈ ಕ್ರೀಡೋತ್ಸವವು ಶಿಕ್ಷಣದ ಜೊತೆಗೆ ಸಹಪಾಠ್ಯ ಚಟುವಟಿಕೆಗಳ ಮಹತ್ವವನ್ನು ಪ್ರತಿಪಾದಿಸುವುದರ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ದಾರೀದೀಪವಾಗಿತ್ತು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಸರ್ವ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.