ಕೇಂದ್ರ ಬಜೆಟ್ 2025-26: ಅಭಿವೃದ್ಧಿಯ ಪಥದಲ್ಲಿ ದೇಶ, ಆದರೆ ದಕ್ಷಿಣ ರಾಜ್ಯಗಳಿಗೆ ನಿರಾಸೆಯ ನೆರಳು!
ಗದಗ 01 : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು "ದೇಶ ಎಂದರೆ ಮಣ್ಣಲ್ಲ, ದೇಶ ಎಂದರೆ ಜನರು" ಎಂಬ ಉತ್ಸಾಹಭರಿತ ಮಾತಿನೊಂದಿಗೆ 2025-26ನೇ ಸಾಲಿನ ಬಜೆಟ್ ಮಂಡಿಸಿದರು. ಭಾರತ 2047ರ ವಿಕಾಸಿತ ಭಾರತದ ಗುರಿಯತ್ತ ವೇಗವಾಗಿ ಬೆಳೆಯುತ್ತಿರುವ ದೇಶ ಎಂಬುದನ್ನು ಅವರು ಉಲ್ಲೇಖಿಸಿದರು. ಈ ಬಜೆಟ್ ಬಡವರು, ಯುವಕರು, ಮಹಿಳೆಯರು ಹಾಗೂ ರೈತರ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ ಆರ್ಥಿಕ ಯೋಜನೆ ಆಗಿದ್ದು, ಬಡತನ ನಿರ್ಮೂಲನೆಗೆ ವಿಶೇಷ ಪ್ರಾಮುಖ್ಯತೆ ನೀಡಿರುವುದು ಒಂದು ಮಹತ್ತರ ಹೆಜ್ಜೆ ಎಂಬಂತೆ ಪ್ರತಿಬಿಂಬಿಸುತ್ತದೆ. "ದನಧಾನ್ಯ ಯೋಜನೆ" ಮೂಲಕ ಯುವಕರನ್ನು ಕೃಷಿ ಕ್ಷೇತ್ರದತ್ತ ಆಕರ್ಷಿಸುವ ಹಾಗೂ ಕೃಷಿಗೆ ಉತ್ತೇಜನ ನೀಡುವ ಮಹತ್ವದ ಪ್ರಯತ್ನ ಈ ಬಜೆಟ್ನಲ್ಲಿ ಮಾಡಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮಿತಿಯನ್ನು ರೂ. 5 ಲಕ್ಷಕ್ಕೆ ಹೆಚ್ಚಿಸಿರುವುದು ರೈತ ಸಮುದಾಯಕ್ಕೆ ಬಹಳ ಉಪಯುಕ್ತ.ಮಹಿಳಾ ಸಬಲೀಕರಣಕ್ಕಾಗಿ 5 ಲಕ್ಷ ಎಸ್.ಸಿ / ಎಸ್.ಟಿ ಮಹಿಳೆಯರಿಗೆ ವಿಶೇಷ ಸಾಲ ಯೋಜನೆ ಘೋಷಣೆ ಮಾಡಲಾಗಿದೆ. ಮಹಿಳೆಯರ ಸಾಲ ಸೌಲಭ್ಯಕ್ಕಾಗಿ ಒಟ್ಟಾರೆ ರೂ. 2 ಕೋಟಿ ಹಾಗೂ ಎಮ್ಎಸ್ಎಮ್ಇ ಕಾರ್ಮಿಕರಿಗೆ ರೂ. 7.4 ಕೋಟಿ ಅನುದಾನ ಮೀಸಲಾಗಿರುವುದು, ಆರ್ಥಿಕ ಪ್ರಗತಿ ದೃಷ್ಟಿಯಿಂದ ಪ್ರಶಂಸನೀಯ. ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಂಋ) ತಂತ್ರಜ್ಞಾನ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ನವೋದ್ಯಮ ಮೌಲ್ಯದ ಮಹತ್ವದ ಕ್ರಮ. 2047ರ ವಿಕಾಸಿತ ಭಾರತದ ಭರವಸೆಯನ್ನು ಕಟ್ಟುವ ಸಂಕಲ್ಪ ಈ ಬಜೆಟ್ನಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿದೆ.ಆದರೆ, ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ನೀರೀಕ್ಷೆ ಇಟ್ಟಿದ್ದರೂ, ಕೇಂದ್ರದ ತೆರಿಗೆ ಆದಾಯದಲ್ಲಿ ಪ್ರಮುಖ ಪಾಲು ನೀಡುವ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಿಗೆ ಈ ಬಜೆಟ್ನಲ್ಲಿ ಬೇಕಾದಷ್ಟು ಅನುದಾನ ಘೋಷಣೆ ಆಗದೆ ಹೋದುದು ವಿಷಾದಕರ ಸಂಗತಿ. ಕರ್ನಾಟಕದ ನೀರೀಕ್ಷೆಗಳಿಗೆ ಹೊಣೆಯಾಗುವ ಬಜೆಟ್ ಆಗಿರಬೇಕಾಗಿದ್ದರೂ, ಅದಕ್ಕೆ ತಕ್ಕ ಉತ್ತರ ಸಿಗದಿರುವುದು ನಿರಾಶೆ ಮೂಡಿಸಿದೆ.