ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ: ಚಾಂದಪಾಶಾ ಹವಾಲ್ದಾರ್

ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ: ಚಾಂದಪಾಶಾ ಹವಾಲ್ದಾರ್  The service of Anganwadi workers is commendable: Chandpasha Havaldar

ತಾಳಿಕೋಟಿ 07 :  ಮಗುವಿಗೆ ಜನ್ಮ ಕೊಟ್ಟ ಒಬ್ಬ ತಾಯಿಯ ಜವಾಬ್ದಾರಿ ಎಷ್ಟಿರುತ್ತದೆಯೋ ಅಷ್ಟೇ ಜವಾಬ್ದಾರಿಯನ್ನು ಅಂಗನವಾಡಿಯಲ್ಲಿ ಕಾರ್ಯ ನಿರ್ವಹಿಸುವ ಮಾತೆಯರು ಹೊಂದಿದ್ದು, ಮಗು ಹುಟ್ಟಿದ ಎರಡು ವರ್ಷಗಳ ನಂತರ ತಾಯಿಗಿಂತ ಹೆಚ್ಚಿನ ಲಾಲನೆ ಪಾಲನೆ ಆರೈಕೆಗಳ ಜವಾಬ್ದಾರಿಯನ್ನು ಹೊತ್ತು ಮಗುವಿನ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಪೀಸ್ ಇಂಟರ್ನ್ಯಾಷನಲ್ ಶಾಲೆಯ ಮುಖ್ಯಗುರುಗಳಾದ ಚಾಂದಪಾಶಾ ಹವಾಲ್ದಾರ ಹೇಳಿದರು. ಗ್ರಾಮದ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಜಯಪುರ, ಶಿಶು ಅಭಿವೃದ್ಧಿ ಯೋಜನೆ ಸಿಂದಗಿ ಹಾಗೂ ಅಜೀಂ ಪ್ರೇಮ್ಜಿ ಫೌಂಡೇಶನ್ ವಿಜಯಪುರ ಅವರ ಸಹಯೋಗದಲ್ಲಿ ಕಲಕೇರಿ ವಲಯ ಮಟ್ಟದ ಬಾಲಮೇಳ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಪಂ ಸದಸ್ಯರಾದ ನಬಿಲಾಲ ನಾಯ್ಕೋಡಿ ಮತ್ತು ಸುಧಾಕರ ಅಡಕಿ ಅವರು ಮಾತನಾಡಿ ಪ್ರತಿಯೊಂದು ಮಗುವಿಗೆ ಆಟದೊಂದಿಗೆ ಪಾಠವನ್ನು ಕಲಿಸುತ್ತಾ ಅವರ ಹಸಿವನ್ನು ನೀಗಿಸುವ ತಮ್ಮ ಕರ್ತವ್ಯದೊಂದಿಗೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಅಂಗನವಾಡಿಯ ಶಿಕ್ಷಕಿಯರ ಬದುಕಿನ ಚಿಂತನೆಯನ್ನು ಸರಕಾರ ಮತ್ತು ಸಮಾಜ ಮಾಡಬೇಕಾದ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಸರಕಾರ ಅವರ ಗೌರವಧನವನ್ನು ಹೆಚ್ಚಿಸುವ ನಿರ್ಧಾರ ಮಾಡಬೇಕಿದೆ ಎಂದು ಹೇಳಿದರು. ಕಲಕೇರಿ ಭಾಗದ ಒಟ್ಟು 11 ಅಂಗನವಾಡಿಯ ಮಕ್ಕಳಿಗಾಗಿ ಏರಿ​‍್ಡಸಿದ ಬಾಲಮೇಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಲಿಕಾ ಮತ್ತು ಪ್ರತಿಭಾ ಚಟುವಟಿಕೆಗಳಲ್ಲಿ ಅತ್ಯಂತ ಸಂಭ್ರಮದಿಂದ ಪಾಲ್ಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇದೇ ವೇಳೆ ಸಮಾಜ ಸೇವಕರಾದ ಭಾಗ್ಯವಂತ ಮೋಪಗಾರ ಅವರು ಎಲ್ಲ ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಬಟ್ಟೆಯನ್ನು ವಿತರಿಸಿದರು.

ಮತ್ತು ಗ್ರಾಮ ಪಂಚಾಯತ ಸದಸ್ಯರಾದ ಸುಧಾಕರ ಅಡಕಿ ಅವರು ವಿದ್ಯಾರ್ಥಿ ಗಳಿಗೆ 20 ಡಜನ್ ನೋಟ್ಬುಕ್ ಮತ್ತು ಪೆನ್ ವಿತರಿಸಿದರು. ಇದೇ ವೇಳೆ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು ಮತ್ತು ವಿಶೇಷವಾಗಿ ಮಕ್ಕಳಿಗಾಗಿಯೇ 20ಕ್ಕೂ ಹೆಚ್ಚು ವಿವಿಧ ಬಗೆಯ ಪ್ರದರ್ಶನಾ ಸ್ಟಾಲ್ಗಳನ್ನು ಹಾಕುವ ಮೂಲಕ ಮಕ್ಕಳ ಗಮನ ಸೆಳೆಯುವ ವಿವಿಧ ಬಗೆಯ ವಸ್ತುಗಳನ್ನು ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಲಾಖೆಯ ವಲಯ ಮೇಲ್ವಿಚಾರಕರಾದ ಎ.ಎಮ್‌.ಸಜ್ಜನ ಅವರು ವಹಿಸಿದ್ದರು, ಅತಿಥಿಗಳಾಗಿ ಸಿಂದಗಿ ವಿಭಾಗದ ಮೇಲ್ವಿಚಾರಕರಾದ ಲಕ್ಷ್ಮೀ ನಾಟೀಕಾರ, ಎ.ಪಿ.ಕುಂಬಾರ, ಸುನಿತಾ ಕಪ್ಪೆನವರು, ಶೈಲಜಾ ಪಾಟೀಲ, ಜಯಶ್ರೀ ದೊಡಮನಿ, ಎ.ಆರ್‌.ಚವ್ಹಾಣ, ಪ್ರಮೋದ ಮತ್ತು ಕಲಕೇರಿ ಗ್ರಾಪಂ ಕಾರ್ಯದರ್ಶಿಗಳಾದ ಸಿದ್ದಯ್ಯ ಸ್ಥಾವರಮಠ, ಮುಖ್ಯಗುರುಗಳಾದ ಜೆ.ಬಿ.ಕುಲಕರ್ಣಿ, ಶಿವಕುಮಾರ ಪಟ್ಟಣಶೆಟ್ಟಿ, ಯುನೂಸ್ ಚೌದ್ರಿ, ಡಾ.ನವೀನಶಂಕರ ವೈದ್ಯಾಧಿಕಾರಿಗಳು, ಉಪ್ಪಾರ ಸಮಾಜದ ಮುಖಂಡರಾದ ಭಾಗ್ಯವಂತ ಮೋಪಗಾರ, ಆಬೀದ ಇನಾಮದಾರ, ಸಂಜೀವ ಉತಾಳೆ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಕಿಶೋರಿಯರು, ಆಶಾ ಕಾರ್ಯಕರ್ತೇಯರು ಸೇರಿದಂತೆ ಇತರರು ಇದ್ದರು.