ಕೆಎಲ್‌ಇ ಸಂಸ್ಥೆಯನ್ನು ಕಟ್ಟಿದ ಶಿಕ್ಷಕ ತ್ಯಾಗ ಅವಿಸ್ಮರಣೀಯ: ಡಾ.ಎಂ.ಆರ್‌.ಜಯರಾಮ್

ಕೆಎಲ್‌ಇ ಸಂಸ್ಥೆಯನ್ನು ಕಟ್ಟಿದ ಶಿಕ್ಷಕ ತ್ಯಾಗ ಅವಿಸ್ಮರಣೀಯ: ಡಾ.ಎಂ.ಆರ್‌.ಜಯರಾಮ್  The sacrifice of the teacher who built the KLE institution is unforgettable: Dr. M.R. Jayaram

ಬೆಳಗಾವಿ 13: ಸಮಾಜವನ್ನು ಬದಲಿಸುವ ಒಂದು ಅದ್ಭುತ ಶೈಕ್ಷಣಿಕ ಯಾನ ರೋಮಾಂಚನಕಾರಿ. ಒಂದು ಶೈಕ್ಷಣಿಕ ಬೀಜವನ್ನು ಭಿತ್ತಿ ಅಸಂಖ್ಯ ಮರಗಳನ್ನು ಬೆಳೆದವರು ಅವರು. ಅವರ ದೂರದೃಷ್ಟಿಯ ಫಲವಾಗಿಯೇ ಸಂಸ್ಥೆ ಇಂದು ಅಗಾಧವಾಗಿ ಬೆಳೆದಿದೆ. ಅದರ ಹಿಂದೆ ಡಾ.ಕೋರೆಯವರ ಪರಿಶ್ರಮವನ್ನು ನಾವು ಶ್ಲಾಘಿಸಬೇಕೆಂದು ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಆರ್‌. ಜಯರಾಮ್ ಹೇಳಿದರು.  

ಅವರು ಬೆಳಗಾವಿಯ ಜೆಎನ್ ವೈದ್ಯಕೀಯ ಕಾಲೇಜು ಆವರಣದಲ್ಲಿರುವ ಡಾ.ಬಿ.ಎಸ್‌.ಜೀರಗೆ ಸಭಾಗೃಹದಲ್ಲಿ ಆಯೋಜಿಸಿದ್ದ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ  110ನೇ ಸಂಸ್ಥಾಪನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.   

ಸಮಾಜದ ಶೈಕ್ಷಣಿಕ ಅಗತ್ಯತೆಯನ್ನು ಪೂರೈಸುವ ನೆಲೆಯಲ್ಲಿ ಸಪ್ತರ್ಷಿಗಳು ಹಗಲಿರುಳು ಶ್ರಮಿಸಿದರು. ಅವರ ತ್ಯಾಗ ಹಾಗೂ ದೂರದೃಷ್ಟಿಯ ಫಲವಾಗಿಯೇ ಸಂಸ್ಥೆಯು ಬೆಳೆದುನಿಂತಿದೆ. ಅಖಂಡವಾಗಿ ನಾಲ್ಕು ದಶಕಗಳಿಂದ ಈ ಬೃಹತ್ ಸಾಮ್ರಾಜ್ಯವನ್ನು ನಿರ್ಮಿಸುವಲ್ಲಿ ಡಾ.ಕೋರೆಯವರ ಕೊಡುಗೆಯನ್ನು ಅಲ್ಲಗಳೆಯುವಂತಿಲ್ಲ. ನಮ್ಮ ಮೇಲಿರುವ ಜವಾಬ್ದಾರಿ ಬಹಳ ದೊಡ್ಡದು. ಜನರು ಉತ್ತಮವಾದ ನಾಯಕತ್ವಕ್ಕಾಗಿ ನಿಮ್ಮತ್ತ ನೋಡುವರು. ನಾನೂ ಕೂಡ ಈ ದೇಶಕ್ಕೆ ನೀಡಬೇಕಾದ ಶ್ರೇಷ್ಠ ನಾಯಕತ್ವವನ್ನು ನಿಮ್ಮಿಂದಲೇ ನೀರೀಕ್ಷಿಸುತ್ತಿದ್ದೇನೆ. ಸಪ್ತರ್ಷಿಗಳು ಉದಾತ್ತವಾದುದುನ್ನು ಆಲೋಚಿಸಿದರು ಅಮರವಾದ ಕಾರ್ಯವನ್ನು ನಿರ್ವಹಿಸಿದರು ಎಂದು  ಕೆಎಲ್‌ಇ ಅನ್ನು ದೃಷ್ಟಿ, ಬದ್ಧತೆ ಮತ್ತು ತ್ಯಾಗದಿಂದ ನಿರ್ಮಿಸಲಾದ ಪರಂಪರೆ ಎಂದು ಶ್ಲಾಘಿಸಿದರು.  

ವಿಸ್ತರಣೆ ಮತ್ತು ಶ್ರೇಷ್ಠತೆಯ ಹೊಸ ಯುಗಕ್ಕೆ ಕೊಂಡೊಯ್ದಿದ್ದಕ್ಕಾಗಿ ಡಾ. ಕೋರೆ ಅವರನ್ನು ವಿಶೇಷವಾಗಿ ಶ್ಲಾಘಿಸಿದರು. ರಾಷ್ಟ್ರೀಯ ಬೆಳವಣಿಗೆಗೆ, ವಿಶೇಷವಾಗಿ ಉತ್ಪಾದನಾ ವಲಯದಲ್ಲಿ ಕೆಲಸ ಮಾಡಲು ಸರ್ಕಾರದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಅಗತ್ಯವನ್ನು ಡಾ. ಜಯರಾಮ್ ಒತ್ತಿ ಹೇಳಿದರು. ಈ ರಾಷ್ಟ್ರೀಯ ಧ್ಯೇಯವನ್ನು ಬೆಂಬಲಿಸಲು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರದ ಮೇಲೆ ಕೇಂದ್ರೀಕರಿಸುವ ಖಖಿಇಒ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಅವರು ಕೆಎಲ್‌ಇಗೆ ಕರೆ ನೀಡಿದರು.  

ಆಶೀರ್ವಚನ ನೀಡಿದ ಹೈದರಾಬಾದ್‌ನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಬೋಧಮಯಾನಂದ ಮಹಾರಾಜ್ ಅವರು ಜ್ಞಾನದಿಂದ ಅದ್ಭುತವಾದುದನ್ನು ಸಾಧಿಸಲು ಸಾಧ್ಯ. ಜ್ಞಾನವೆಂಬ ಶಕ್ತಿ ಮಾತ್ರ ಸಮಾಜವನ್ನು ರಾಷ್ಟ್ರವನ್ನು ಸಬಲಗೊಳಿಸುತ್ತದೆ. ಅಂತಹ ಜ್ಞಾನ ದಾಹವನ್ನು ನೀಗಿಸಿ ಈ ಭಾಗದಲ್ಲಿ ಅಕ್ಷರಕ್ರಾಂತಿಯನ್ನು ಮಾಡಿದ ಕೆಎಲ್‌ಇ ಸಂಸ್ಥೆಯ ಏಳು ಜನ ಸಪ್ತರ್ಷಿಗಳನ್ನು ನಾನು ಮನಸಾರೆ ಸ್ಮರಿಸುತ್ತೇನೆ. ಒಮ್ಮೆ ನಾವು ಜ್ಞಾನದ ಹಿಂದಿರುವ ಆತ್ಮ, ಅರ್ಥ ಮತ್ತು ಸ್ಫೂರ್ತಿಯನ್ನು ಕಳೆದುಕೊಂಡರೆ ಬದುಕಿಗೆ ಅರ್ಥವಿಲ್ಲ. ಇಂದಿನ ಸಮಾಜದಲ್ಲಿ ತೀವ್ರ ಮಾನಸಿಕ ಒತ್ತಡ ಮತ್ತು ಸಾಮಾಜಿಕ ಮಾಧ್ಯಮದ ಅತಿಯಾದ ಪ್ರಭಾವದಿಂದ ಕೆಲವರು ಅಸಹಜ ಮಾರ್ಗಕ್ಕೆ ತಿರುಗುತ್ತಿದ್ದಾರೆ. ಯುವ ಪೀಳಿಗೆ ಕೆಲವೊಮ್ಮೆ ಅಭಿಮಾನ ಮತ್ತು ಪ್ರೇಮದ ಭ್ರಮೆಯಲ್ಲಿ ದೊಡ್ಡ ತಪ್ಪುಗಳನ್ನು ಮಾಡುತ್ತಿರುವುದು ನೋವಿನ ವಿಷಯ. ಒಂದು ಕಡೆ ನಾವು ಭಾರತದ ವಿಜ್ಞಾನಿಗಳು ಬಾಹ್ಯಾಕಾಶದತ್ತ ಏರುತ್ತಿರುವಾಗ, ಇನ್ನೊಂದು ಕಡೆ ಮೌಲ್ಯಗಳ ಕುಸಿತದಿಂದ ಸಮಾಜ ನೋವಿನ ಘಟನೆಗಳನ್ನು ನೋಡುತ್ತಿದೆ. ಇದು ನಾವು ಎಲ್ಲರೂ ಚಿಂತಿಸಬೇಕಾದ ಸಮಯ. ಉತ್ತಮವಾದ ಸಂಸ್ಕಾರದಿಂದ ನಾವು ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ. ಮಾತ್ರವಲ್ಲ ಸ್ವಾಮೀ ವಿವೇಕಾನಂದರು ದೇಶವನ್ನು ಇಲ್ಲಿಯ ಸಂಸ್ಕೃತಿಯನ್ನು ಪ್ರೀತಿಸಲು ಕರೆನೀಡಿದರು. ನಮ್ಮ ಅಂತರಂಗದಲ್ಲಿ ಅಂತಹ ದೇಶಪ್ರೇಮವನ್ನು ಸ್ಥಾಯಿಯಾಗಿ ನೆಲೆಗೊಳಿಸಿಕೊಳ್ಳಬೇಕಾಗಿದೆ ಎಂದು ನುಡಿದರು.  

ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಶಿಕ್ಷಣದ ಮೂಲಕ ಸಮಾಜವನ್ನು ಸಬಲೀಕರಣಗೊಳಿಸಲು ಕೆಎಲ್‌ಇಅನ್ನು ಸ್ಥಾಪಿಸಿದ ದಾರ್ಶನಿಕ ಸ್ಥಾಪಕ ಪಿತಾಮಹರಾದ ಸಪ್ತಋಷಿಗಳಿಗೆ, ಸಂಸ್ಥಾಪಕರಿಗೆ, ದಾನಿಗಳಿಗೆ ಎಷ್ಟೇ ಗೌರವ ಸಲ್ಲಿಸಿದರು ಕಡಿಮೆಯೇ. ಕೆಎಲ್‌ಇಯ ಪ್ರಜಾಪ್ರಭುತ್ವ ತಳಹದಿಯ ಮೇಲೆ ನಿಂತಿದೆ. ಭಾಷಾತೀತವಾಗಿ-ಧರ್ಮಾತೀತವಾಗಿ-ಜಾತ್ಯಾತೀತವಾಗಿ ಸಂಸ್ಥೆಯು ಬೆಳೆದಿದೆ. ಶಿಕ್ಷಣ ಎಲ್ಲ ಬೇಕುಬೇಡಿಕೆಯನ್ನು ಪೂರೈಸಿದೆ. ಶೈಕ್ಷಣಿಕ-ಆರೋಗ್ಯ-ಸಂಶೋಧನಾ ಕ್ಷೇತ್ರದಲ್ಲಿ ಅದ್ವಿತೀಯವಾದ ಕೊಡುಗೆಯನ್ನು ನೀಡಿ ರಾಷ್ಟ್ರನಿರ್ಮಾಣದಲ್ಲಿ ತನ್ನದೇ ಆದ ಕೊಡುಗೆಯನ್ನು ಸಲ್ಲಿಸಿದೆ. 2025 ರಲ್ಲಿ ಉತ್ತರ ಕರ್ನಾಟಕದಲ್ಲಿ ಮೊದಲ ಕೃಷಿ ಕಾಲೇಜು ಪ್ರಾರಂಭವಾದದ್ದು ಮಹತ್ವದ ಸಾಧನೆ ಎಂದು ಅವರು ಎತ್ತಿ ಹೇಳಿದರು.  

ಕೆಎಲ್‌ಇಯ ಆರೋಗ್ಯ ಸೇವೆಯ ಕೊಡುಗೆಗಳನ್ನು ಡಾ. ಕೋರೆ ವಿವರಿಸಿದರು, ಕೆಎಲ್‌ಇ ವೈದ್ಯರು ಜಾಗತಿಕವಾಗಿ ಅತ್ಯುತ್ತಮ ಸೇವೆಗಳನ್ನು ನೀಡುತ್ತಿದ್ದಾರೆ ಎಂದು ಗಮನಿಸಿದರು. ಹುಬ್ಬಳ್ಳಿಯಲ್ಲಿ ಮುಂಬರುವ ದಿನಗಳಲ್ಲಿ 1000 ಹಾಸಿಗೆಗಳ ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜ ನೂತನ ಕಟ್ಟಡ ಲೋಕಾರೆ​‍್ಣಗೊಳ್ಳಲಿದೆ ಎಂದರು. ಇದು ಕೆಎಲ್‌ಇಯ ಒಟ್ಟು ಆರೋಗ್ಯ ರಕ್ಷಣಾ ಸಾಮರ್ಥ್ಯವನ್ನು 4500 ಹಾಸಿಗೆಗಳಿಗೆ ತಲುಪಿಸಿದೆ ಎಂದು ಹೇಳಿದರು. ಜನರ ಮನೆ ಬಾಗಿಲಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೊಂಡೊಯ್ಯಲು ಈ ಪ್ರದೇಶದಲ್ಲಿ ಹೆಚ್ಚಿನ ಆಸ್ಪತ್ರೆಗಳನ್ನು ಸ್ಥಾಪಿಸುವ ಯೋಜನೆಗಳ ಬಗ್ಗೆಯೂ ಡಾ. ಕೋರೆ ಪ್ರಸ್ತಾಪಿಸಿದರು.  

ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿಯವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ, ಆಜೀವ ಸದಸ್ಯ ಮಂಡಳಿಯ ಕಾರ್ಯಧ್ಯಕ್ಷೆ ಡಾ.ದೀಪಾ ಮೆಟಗುಡ್ ಉಪಸ್ಥಿತರಿದ್ದರು. ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಆಜೀವ ಸದಸ್ಯರು ಪಾಲ್ಗೊಂಡಿದ್ದರು.  

ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯಮಟ್ಟದಲ್ಲಿ ಸಾಧನೆಗೈದ ಕೆಎಲ್‌ಇ ಸಂಸ್ಥೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು, ವೈದ್ಯರನ್ನು, ಶಿಕ್ಷಕರನ್ನು, ನರ್ಸಿಂಗ್ ಸಿಬ್ಬಂದಿ ವರ್ಗದವರನ್ನ ಗೌರವಿಸಿ ಸತ್ಕರಿಸಲಾಯಿತು. 66 ಚಿನ್ನ, 49 ಬೆಳ್ಳಿ ಪದಕಗಳನ್ನು ವಿತರಿಸಲಾಯಿತು. ಡಾ.ನೇಹಾ ದಡೇದ, ಡಾ.ಮಹೇಶ ಗುರನಗೌಡರ, ಡಾ.ಆದಿತ್ಯ ಆಚಾರ್ಯ ನಿರೂಪಿಸಿದರು. ಡಾ.ದೀಪಾ ಮೆಡಗುಡ್ ವಂದಿಸಿದರು.