ವಿಜಯಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ನಿಗದಿತ ಬೆಲೆಗೆ ಒಪ್ಪಿಗೆ ಸೂಚಿಸಲಿ

ವಿಜಯಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ನಿಗದಿತ ಬೆಲೆಗೆ ಒಪ್ಪಿಗೆ ಸೂಚಿಸಲಿ Sugar factories in Vijayapura district should agree to the fixed price

ಸಿಂದಗಿ 13: ಪ್ರತಿ ಟನ್ ಕಬ್ಬಿಗೆ ಸರಕಾರ ನಿಗದಿಗೊಳಿಸಿದ 3300 ಬೆಂಬಲ ಬೆಲೆಯನ್ನು ಕೊಡುವದಾಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಅಡಳಿತ ಮಂಡಳಗಳು ಒಪ್ಪಿಗೆ ಸೂಚಿಸಿ ಸಾರ್ವಜನಿಕ ಜಾಹಿರ ನೋಟಿಸು ಪ್ರಕಟಿಸುವದು ಮತ್ತು 2025 ಸಾಲಿನ ಫಸಲ ಭೀಮಾ ಮತ್ತು ಬೆಳೆ ಫಲಹಾರವನ್ನು ರೈತರಿಗೆ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಪತ್ರಿಭಟನೆ ನಡೆಸಿ ತಹಶೀಲ್ದಾರ ಕರೇಪ್ಪ ಬೆಳ್ಳಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

       ರಾಜ್ಯ ಗೌರವಾಧ್ಯಕ್ಷ ವಕೀಲ ದಾನಪ್ಪಗೌಡ ಚನಗೊಂಡ ಮಾತನಾಡಿ, ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿ ಮಾಡುವ ಪ್ರತಿ ಟನ್ ಕಬ್ಬಿಗೆ 3300 ರೂಪಾಯಿಗಳನ್ನು ಕೊಡುವಂತೆ ನಿರ್ದೇಶನ ನೀಡಿದೆ. ನಮ್ಮದೇ ಪಕ್ಕದ ಜಿಲ್ಲೆಗಳಾದ ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ಸರ್ಕಾರ ನಿಗದಿಗೊಳಿಸಿದಂತೆ ರೈತರಿಗೆ 3300 ರೂಪಾಯಿಗಳನ್ನು ಕೊಡುವದಾಗಿ ಒಪ್ಪಿಗೆ ಸೂಚಿಸಿ ಸಕ್ಕರೆ ಕಾರ್ಖಾನೆಗಳು ಕಬ್ಬನ್ನು ತಮ್ಮ ಕಾರ್ಖಾನೆಗಳಿಗೆ ಕಳುಹಿಸುವಂತೆ ಸಾರ್ವಜನಿಕವಾಗಿ ನೋಟಿಸು ಬಹಿರಂಗಪಡಿಸಿವೆ. ಆದರೆ ವಿಜಯಪುರ ಜಿಲ್ಲೆಯಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳು ಸರ್ಕಾರದ ಆದೇಶ ಪಾಲಿಸುತ್ತಿಲ್ಲ ಕಾರಣ ಕಾರ್ಖಾನೆ ಮಾಲೀಕರ ಸಭೆ ಕರೆದು ನಿಗದಿತ ಬೆಲೆ ನೀಡುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು. 

          ಜಿಲ್ಲಾ ಅಧ್ಯಕ್ಷ ಚಂದ್ರಗೌಡ ಪಾಟೀಲ ಮಾತನಾಡಿ, ಸರ್ಕಾರ ನಿಗದಿಗೊಳಿಸಿದಂತೆ ಬೆಲೆ ಕೊಡಲುಸಾಧ್ಯವಿಲ್ಲ ಅಂತಾ ರೈತರ ಮುಂದೆ ಹೇಳುತ್ತಿದ್ದಾರೆ ಅನ್ನುವ ವದಂತಿ ಆರಂಭವಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ಉಪ ವಿಭಾಗಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ತಹಶಿಲ್ದಾರ ಅವಶ್ಯಕ ಇಲಾಖೆ ಸಹಯೋಗದಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಮತ್ತು ರೈತರ ಜಂಟಿ ಸಭೆ ನಡೆಸಿ ಸರ್ಕಾರ ನಿಗದಿಗೊಳಿಸಿದ ಬೆಲೆ ಕೊಡುವದಾಗಿ ಸಾರ್ವಜನಿಕ ಜಾಹಿರ ನೋಟಿಸು ಹೊರಡಿಸಿ ಕಾರ್ಖಾನೆಗಳನ್ನು ಆರಂಭಿಸುವದಕ್ಕೆ ಒಪ್ಪಿಗೆ ತೆಗೆದುಕೊಳ್ಳಬೇಕು. ಸನ್ 2025ರ ಸಾಲಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಅಕಾಲಿಕ ಚಂಡಮಾರುತ ಮಳೆಯಿಂದ ಅತೀವೃಷ್ಟಿಯಾಗಿ ಜಿಲ್ಲೆಯಲ್ಲಿ ಇರುಳ್ಳಿ, ಮೆಕ್ಕೆಜೋಳ, ಹತ್ತಿ, ತೊಗರಿ ಸಜ್ಜೆ, ಹೆಸರು ಬೆಳೆಗಳು ಹಾಳಾಗಿ ರೈತರು ಆರ್ಥಿಕ ನಷ್ಟ ಅನುಭವಿಸಿರುತ್ತಾರೆ. ಸರ್ಕಾರ ಇಲ್ಲಿಯವರೆಗೆ ಯಾವುದೇ ರೀತಿಯಿಂದ ಪರಿಹಾರ ನೀಡಿರುವದಿಲ್ಲ. ಅದೇ ರೀತಿ ಭೀಮಾ ಫಸಲ್ ಯೋಜನೆಯಲ್ಲಿ ರೈತರಿಗೆ ಸಿಗಬೇಕಾದ ಬೆಳೆ ಪರಿಹಾರ ಇನ್ನು ರೈತರ ಕೈಸೇರಿರುವದಿಲ್ಲ. ಈ ಬಗ್ಗೆ  ಜಿಲ್ಲಾಧಿಕಾರಿಗಳು ತುರ್ತು ಸಭೆ ಕರೆದು ರೈತರಿಗೆ ಸಿಗಬೇಕಾದ ವಿಮಾ ಪರಿಹಾರ ಮತ್ತು ಸರ್ಕಾರ ಘೋಷಿಸಿದ ನೆರೆ ಪರಿಹಾರ ಕೊಡಿಸಲು 4 ದಿನಗಳಲ್ಲಿ ಸೂಕ್ತ ಕ್ರಮ ಜರುಗಿಸದಿದ್ದರೆ ಸಿಂದಗಿ ತಾಲೂಕಿನ ರೈತರು ಹೆದ್ದಾರಿ ತಡೆ ಮೂಲಕ ನಿರಂತರ ಪ್ರತಿಭಟನೆ ಮಾಡಬೇಕಾಗುತ್ತದೆ. ಆಗ ಆಗುವ ಎಲ್ಲ ಹಾನಿಗೆ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

      ಮನವಿ ಸ್ವೀಕರಿಸಿದ ತಹಶೀಲ್ದಾರ ಕರೆಪ್ಪ ಬೆಳ್ಳಿ ಮಾತನಾಡಿ, ಇಂದು ಈ ತಾಲೂಕಿನಲ್ಲಿರುವ ಮೂರು ಕಾರ್ಖಾನೆ ಮಾಲೀಕರ ಸಭೆ ಕರೆದು ಬೆಲೆ ನಿಗದಿಗೊಳಿಸುವಂತೆ ಜಿಲ್ಲಾಧಿಕಾರಿಗಳು ನೋಟೀಸ ನೀಡಿದ್ದು ಅದರಂತೆ ಸಾಯಂಕಾಲದೊಳಗೆ ಬೆಲೆ ನಿಗದಿ ಆಗುತ್ತದೆ ಎಂದ ಅವರು ಹಾನಿಗೊಳಗಾದ ಬಗ್ಗೆ ಎಲ್ಲ ಸಮೀಕ್ಷೆಗಳು ಮುಗಿದಿದ್ದು ಮುಂದಿನ ವಾರದಲ್ಲಿ ರೈತರ ಖಾತೆಗಳಿಗೆ ಹಣ ಜಮೆ ಆಗುತ್ತವೆ ಎಂದು ತಿಳಿಸಿದರು. 

     ನೀಲಮ್ಮ ಯಡ್ರಾಮಿ, ಪರಸು ಗೂಳೂರ, ಲಕ್ಕಮ್ಮ ಬಿರಾದಾರ, ಬಸವರಾಜ ಚಂಡ್ರ​‍್ಪಗೋಳ, ಸಲೀಮ ಮುಲ್ಲಾ,  ಎಂ.ಕೆ ಉಸ್ತಾದ, ಭೀಮಾಶಂಕರ ಹಿರೇಮಠ, ರವಿಕುಮಾರ ಮೂಲಿಮನಿ, ಬಸವಂತ ಚಾವರ, ಎಂ.ಎ.ವಸ್ತ್ರದ, ಶಿವಶರಣ ಹೆಗ್ಗಣದೊಡ್ಡಿ, ರೇವಣಸಿದ್ದ ದಿಂಡವಾರ, ಅಮರ ವಾಲೀಕಾರ, ಬಾಪು ಬಗಲಿ, ಬಸಪ್ಪ ಬಗಲಿ, ಪ್ರಕಾಶ ದಾಸರ, ಸಾಗರ ಜೇರಟಗಿ ಸೇರಿದಂತೆ ನೂರಾರು ರೈತರು ಪತ್ರಿಭಟನೆಯಲ್ಲಿ ಇದ್ದರು.