ವಿದ್ಯಾರ್ಥಿಗಳು ಅಭ್ಯಾಸ, ಕ್ರೀಡೆಗಳ ಕಡೆಗೆ ಗಮನವಹಿಸಿ ಸಾಧನೆಗೈಯಲಿ: ಉಡುಪಿಕರ

ವಿದ್ಯಾರ್ಥಿಗಳು ಅಭ್ಯಾಸ, ಕ್ರೀಡೆಗಳ ಕಡೆಗೆ ಗಮನವಹಿಸಿ ಸಾಧನೆಗೈಯಲಿ: ಉಡುಪಿಕರ Students should focus on studies and sports and achieve success: Udupikar

                ವಿಜಯಪುರ 18: ದಿ. 17ರಂದು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ವಿದ್ಯಾವರ್ಧಕ ಸಂಘದ ಬಿ. ವ್ಹಿ. ದರಬಾರ ಪದವಿ ಮಹಾವಿದ್ಯಾಲಯ ಹಾಗೂ ದ್ವಾರಕಾದಾಸ ವಿಠ್ಠಲದಾಸ ದರಬಾರ ಮೆಮೋರಿಯಲ್ ಟ್ರಸ್ಟನ ಕುಮುದ್ಬೇನ್ ದರಬಾರ ಬಿಬಿಎ, ಬಿಸಿಎ ಮಹಾವಿದ್ಯಾಲಯದ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಜರುಗಿತು.  

               ಅಧ್ಯಕ್ಷತೆಯನ್ನು ವಹಿಸಿ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪ್ರಕಾಶ ಎಸ್‌. ಉಡುಪಿಕರ ಅವರು ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಇಂದಿನ ಈ ಮೊಬೈಲ್ ಯುಗದಲ್ಲಿ ವಾಟ್ಸಾಪ್ ಹಾಗೂ ರೀಲ್ಸ್‌ನಂತಹ ಸಾಮಾಜಿಕ ಜಾಲತಾಣಗಳನ್ನು ತೊರೆದು ಹೆಚ್ಚು ಅಭ್ಯಾಸದ ಕಡೆ ಹಾಗೂ ಕ್ರೀಡೆಗಳ ಕಡೆಗೆ ಗಮನವಹಿಸಿ ಸಾಧನೆಗೈಯಬೇಕೆಂದು ತಿಳಿಸಿದರು.  

              ಐ.ಸಿ.ಎ.ಐ. ನಡೆಸುವ ಸಿ.ಎ. ಫೌಂಡೇಷನ್ ಪರೀಕ್ಷೆಯಲ್ಲಿ ಪಾಸಾದ ಮೂವರು ವಿದ್ಯಾರ್ಥಿಗಳಾದ ಲಿಖಿತ್ ಶೆಟ್ಟಿ, ಸಮರ್ಥ ಇನಾಮದಾರ ಮತ್ತು ವೆಂಕಟೇಶ ತೋಶ್ನಿವಾಲ ಹಾಗೂ ಬಿ.ಕಾಂ. ವಿಭಾಗದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ 11ನೇ ರಾ​‍್ಯಂಕ್ ಪಡೆದ ವಿದ್ಯಾರ್ಥಿನಿ ಶಿವಾನಿ ಯಡವಣ್ಣವರ ಮತ್ತು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಯೋಗಾದಲ್ಲಿ ಯುನಿವರ್ಸಿಟಿ ಬ್ಲ್ಯೂ ಆಗಿ ಆಯ್ಕೆಯಾದ ಶ್ರೀಗಿರಿ ಹಿಪ್ಪರಗಿ ಇವನನ್ನು ಸನ್ಮಾನಿಸಲಾಯಿತು.  

                 ಪಿ.ಯು. ವಿದ್ಯಾರ್ಥಿಗಳಿಗಾಗಿ ನಡೆಸಿದ ಸ್ವದೇಶ-2025 ಸ್ಪರ್ಧೆಗಳಲ್ಲಿ ವಿಜೇತರಾದ ಎಲ್ಲ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು. ವಿ. ಭ. ದರಬಾರ ಪದವಿ ಪೂರ್ವ ಕಾಲೇಜಿನ ಜನರಲ್ ಚಾಂಪಿಯನ್ ಆಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯ ವಿಕಾಸ ಕೆ. ದರಬಾರ ಹಾಗೂ ಪ್ರಾಚಾರ್ಯ ಗೀರೀಶ ಎಚ್‌. ಮಣೂರ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ. ವ್ಹಿ. ಬಿ. ಗ್ರಾಮಪುರೋಹಿತ ಇವರು ಪ್ರಾಸ್ತಾವಿಕ ಹಾಗೂ ಸ್ವಾಗತ ಬಯಸಿದರು. ಕಾಲೇಜಿನ ವಿದ್ಯಾರ್ಥಿ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ದೀಪಿಕಾ ಪಾರ್ಮಾರ ವಂದಿಸಿದರು.