ವಿಶೇಷ ಚೇತನರಿಗೆ ಪ್ರೋತ್ಸಾಹ ನೀಡಬೇಕು: ನ್ಯಾ.ರಾಜೇಶ್ ಎನ್‌.ಹೊಸಮನೆ

ವಿಶೇಷ ಚೇತನರಿಗೆ ಪ್ರೋತ್ಸಾಹ ನೀಡಬೇಕು: ನ್ಯಾ.ರಾಜೇಶ್ ಎನ್‌.ಹೊಸಮನೆ Specially gifted people should be encouraged: Justice Rajesh N. Hosamane


ಬಳ್ಳಾರಿ 25 : ವಿಶೇಷ ಚೇತನರ ಪ್ರತಿಭೆಯನ್ನು ಗುರುತಿಸಿ, ಅವರ ಬೆನ್ನೆಲುಬಾಗಿ ನಿಂತು ಜೀವನದಲ್ಲಿ ಅವರು ಗುರಿ ಸಾಧಿಸಲು ಪೋಷಕರು, ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್‌.ಹೊಸಮನೆ ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ವಿಕಲಚೇತನರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿಕಲಚೇತನರಿಗೆ ನಗರದ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಕ್ರೀಡಾ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ “ವಿಕಲಚೇತನರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ವಿಶ್ವ ಮಟ್ಟದಲ್ಲಿ ಡಿಸೆಂಬರ್ 03 ರಂದು ವಿಕಲಚೇತನರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ವಿಶೇಚಚೇತನ ಮಕ್ಕಳ ಸಾಧನೆ ನೋಡಿದರೆ ಎಂತಹವರಿಗೂ ಉತ್ಸಾಹ ಬರುತ್ತದೆ. ಅವರು ಸಾಧನೆಯನ್ನು ಛಲವಾಗಿ ಸ್ವೀಕರಿಸುತ್ತಾರೆ. ಅವರಿಗೆ ಶಿಕ್ಷಣ ಮತ್ತು ಇತರೆ ಎಲ್ಲಾ ಹಕ್ಕುಗಳನ್ನು ನೀಡುವ ಮೂಲಕ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.ಟ್ರಾಮಾಕೇರ್ ಸಂಸ್ಥೆಯ ಅಧೀಕ್ಷಕ ಶಿವುನಾಯಕ್ ಅವರು ಮಾತನಾಡಿ, ವಿಶೇಷಚೇತನರು ದೇವರ ಮಕ್ಕಳು ಇದ್ದಂತೆ. ಕ್ರೀಡೆಗಳಿಂದ ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಯಾಗಿತ್ತದೆ.

ಪ್ರತಿಭೆ ಇರುವ ವಿಶೇಷಚೇತನ ಮಕ್ಕಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಅವರಿಗೆ ಮೊದಲ ಆದ್ಯತೆ ನೀಡಬೇಕು. ವಿಶೇಷಚೇತನರ ಪಾಲನೆ ಮಾಡುವ ಶಿಕ್ಷಕರು, ಪೋಷಕರು ಹಿರೋಗಳಿದ್ದಂತೆ ಎಂದು ಬಣ್ಣಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹೆಚ್‌.ಗೋವಿಂದಪ್ಪ, ನಿರಾಶ್ರಿತ ಪುನರ್‌ವಸತಿ ಕೇಂದ್ರದ ಅಧೀಕ್ಷಕ ಸುಂಕಮ್ಮ, ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಮಹೇಶ್ ಕುಮಾರ್, ವಿಕಲಚೇತನರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಎಲ್ಲಾ ಸಂಸ್ಥೆಗಳ ಅಧ್ಯಕ್ಷರು, ಶಿಕ್ಷಕರು, ವಿಶೇಷಚೇತನ ಮಕ್ಕಳು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.