ಹಾಡಿರೇ ರಾಗಗಗಳ-ತೂಗಿರೇ ದೀಪಗಳ ಕಾರ್ಯಕ್ರಮ

ಹಾಡಿರೇ ರಾಗಗಗಳ-ತೂಗಿರೇ ದೀಪಗಳ  ಕಾರ್ಯಕ್ರಮ Sing the melodies and light the lights program

          ಧಾರವಾಡ   19: ಗ್ರಾಮೀಣ ಭಾಗದ ತಳಸಮುದಾಯದ ಪರಿಶಿಷ್ಟ ಜಾತಿಯ ಕಲಾವಿದರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರವು ಈ ಒಂದು ಯೋಜನೆಯನ್ನು ಜಾರಿಗೆ ತಂದಿರುವುದು ಓಚಿತ್ಯಪೂರ್ಣವಾದದ್ದು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹೇಳಿದರು.  

ಅವರು ಇಂದು (ನ.19) ಡಾ.ದ.ರಾ.ಬೇಂದ್ರೆ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಶೇಷ ಘಟಕ ಯೋಜನೆಯಡಿ ಏರಿ​‍್ಡಸಲಾಗಿದ್ದ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ ಇಂತಹ ವಿಶಿಷ್ಠ ಯೋಜನೆಗಳಿಂದ ತಳ ಸಮುದಾಯದ ಮತ್ತು ಗ್ರಾಮೀಣ ಪ್ರದೇಶದ ಜಾನಪದ ಕಲಾವಿದರುಗಳಿಗೆ ಹೆಚ್ಚೆಚ್ಚು ವೇದಿಕೆಗಳು ಲಭಿಸುತ್ತವೆ ಎಂದರು.   

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿನಿರ್ದೇಶಕ ಕೆ.ಎಚ್‌.ಚನ್ನೂರ ಮಾತನಾಡಿ, ಜಾನಪದ ಕಲಾವಿದರು ನಮ್ಮ ನಾಡಿನ ಧ್ವನಿಯಾಗಿದ್ದಾರೆ.  ನಮ್ಮ ಹಳ್ಳಿಯ ಜನಪದ ಸಂಸ್ಕೃತಿಯನ್ನು ಬಿಂಬಿಸುವ ಸಾಂಪ್ರದಾಯಿಕ ಹಾಡುಗಳು, ನಮ್ಮ ಇತಿಹಾಸದ ಹೋರಾಟಗಾರರ ಶೌರ‌್ಯ, ಬಲಿದಾನದ ಮಹಿಮೆಯನ್ನು ಕಣ್ಣಿಗೆ ಕಟ್ಟುವಂತೆ ಸಾರುವ ಲಾವಣಿಗಳು ಮುಂದುವರೆಸಿಕೊಂಡು ಬಂದಿರುವ ಪರಂಪೆರೆಯನ್ನು ಉಳಿಸಿ ಬೆಳೆಸುವ ಮೂಲ ಆಶಯವೇ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮದ್ದಾಗಿದೆ. ಕಲಾವಿದರ ಕಲೆಯನ್ನು ಆಸ್ವಾಧಿಸುವ ಕಿವಿಯಾಗೋಣ ಎಂದರು.   

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಡಾ.ಸರಜೂ ಕಾಟ್ಕರ್ ಅವರು ಮಾತನಾಡಿ, ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿಯ ಜಾನಪದ ಕಲೆಯಾದ ಸೋಲಿಗರ ಹಾಡುಗಳು ಅದ್ಭುತವಾದವು. ನೆರೆಯ ಆಂಧ್ರ​‍್ರದೇಶ, ತಮಿಳುನಾಡು ಮತ್ತು ಕರ್ನಾಟಕದ ಸಾಂಪ್ರದಾಯಿಕ ಕಲೆಗಳ ಮಿಶ್ರಣವಾಗಿರುವ ಅಪರೂಪದ ಕಲೆಯಾಗಿದೆ. ಅವರ ಹಾಡಿನ ಸಾಲುಗಳಿಂದ ಹಾಡಿರೇ ರಾಗಗಳ-ತೂಗಿರೇ ದೀಪಗಳ ಶೀರ್ಷಿಕೆ ಆಯ್ದುಕೊಂಡು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.   

ಕವಿಗಳು ಕವಿತೆಗಳನ್ನು ರಾಗಗಳಿಗೆ ಲಯಬದ್ಧವಾಗಿ ಪೋಣಿಸಿದಾಗ ಮಾತ್ರ ಅವುಗಳು ಜನರ ಹೃದಯ ಗೆಲ್ಲುವ ಹಾಡುಗಳಾಗಲು ಸಾಧ್ಯವಾಗುತ್ತವೆ.  ಜನಪದ ಕಲಾವಿದರು ತಮ್ಮ ಲೋಕಾನುಭವದಿಂದ ಸಾಹಿತ್ಯ ನಿರ್ಮಾಣ ಮಾಡಿರುವಂತಹವುಗಳಾಗಿದ್ದವು, ಯಾರೂ ತಮ್ಮ ಗೀತೆಗಳ ಕೆಳಗೆ ತಮ್ಮ ಹೆಸರನ್ನು ಬರೆಯಲಿಲ್ಲ, ಅವುಗಳು ಜನರಿಂದ ಜನರಿಗೆ ಬಂದಂಥವುಗಳಾಗಿದ್ದವು. ಅವು ಜನಪದ ಸಾಹಿತ್ಯವಾಗಿ ಇಂದಿಗೂ ಪ್ರಸ್ತುತ ಎಂದರು.    

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸದಸ್ಯ ಇಮಾಮಸಾಬ ವಲ್ಲೆಪ್ಪನವರ, ಪ್ರಭು ಕುಂದರಗಿ ಹಾಗೂ ಹಿರಿಯ ಜಾನಪದ ಕಲಾವಿದೆ ಸಾವಿತ್ರಿ ಪೂಜಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.   ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಪ್ರಾಸ್ತಾವಿಕ ಮಾತನಾಡಿದರು. ಆರತಿ ದೇವಶಿಖಾಮನಿ ನಿರೂಪಿಸಿದರು. ಹಿರಿಯ ಪತ್ರಕರ್ತ ಗಣೇಶ ಕದಂ, ಸಮುದಾಯದ ಹಿರಿಯ ಕಲಾವಿದ ಬಿ.ಐ.ಈಳಗೇರ ಅವರು ಹಾಜರಿದ್ದರು.   

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಪೂಜಾರ ಮತ್ತು ವೃಂದದಿಂದ ಗೀಗೀ ಪದಗಳು,  ಶರೀಫ್ ದೊಡ್ಡಮನಿ ಮತ್ತು ವೃಂದ ಹಾಗೂ ಯಕ್ಕೇರೆಪ್ಪ ನಡುವಿನಮನಿ ಮತ್ತು ವೃಂದದಿಂದ ತತ್ವಪದಗಳು, ಶ್ರೀಧರ ಭಜಂತ್ರಿ ಮತ್ತು ವೃಂದದಿಂದ ಶಹನಾಯಿ ವಾದನ, ಮಡಿವಾಳಪ್ಪ ಭಜಂತ್ರಿ ಮತ್ತು ವೃಂದದಿಂದ ವಚನ ಗಾಯನ, ಕೀರ್ತನಾ ನಾಯಕ ಮತ್ತು ವೃಂದದಿಂದ ಸುಗಮ ಸಂಗೀತ, ಅಶ್ವಿನಿ ಉಳ್ಳಿಕಾಶಿ ಮತ್ತು ವೃಂದದಿಂದ ಭಾವಗೀತಗಳ ಗಾಯನ, ಸ್ಟಿಫನ್ ಲುಂಜಳ ಮತ್ತು ವೃಂದದಿಂದ ವಾದ್ಯ ಸಂಗೀತ, ಚನ್ನಮ್ಮ ಹುಲಮನಿ ಮತ್ತು ವೃಂದದಿಂದ ಸೋಬಾನ ಹಾಡುಗಳು ಹಾಗೂ ಮಹಾಂತೇಶ ದೊಡಮನಿ ಮತ್ತು ವೃಂದದಿಂದ ಹೋರಾಟದ ಹಾಡುಗಳ ಗಾಯನ ಕಾರ್ಯಕ್ರಮ ಜರುಗಿದವು.