ಸವಿತಾ ಸಮಾಜದ ಕಾರ್ಯ ವ್ಯಾಪಾರವಲ್ಲ ಸೇವೆ: ಡಾ. ಬಿರಾದಾರ
ಬೆಳಗಾವಿ 04: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಫೆ. 4ರಂದು ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ನಡೆಯಿತು.
ವಿಶೇಷ ಉಪನ್ಯಾಸ ನೀಡಿದ ಯರಗಟ್ಟಿ ಸಿ.ಎಂ.ಮಾಮನಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಅವರು ಸವಿತಾ ಸಮಾಜ ಪೌರಾಣಿಕ ಮಹತ್ವ ಹೊಂದಿರುವ ಸಮಾಜವಾಗಿದೆ, ಈ ಸಮಾಜ ಆಯುರ್ವೇದ, ವೈದ್ಯಕೀಯ ಮತ್ತು ಓಷದೋಪಚಾರದಂತಹ ಸೇವೆಗಳನ್ನು ಮಾಡುತಿತ್ತು.. ಈ ಸಮಾಜ ನಡೆಸುವ ಕಾರ್ಯ ವ್ಯಾಪಾರವಲ್ಲ ಇದೊಂದು ಸೇವೆಯಾಗಿದೆ ಎಂದು ಹೇಳಿದರು.
ಸವಿತಾ ಮಹರ್ಷಿಗಳು ಬ್ರಹ್ಮುುಜ್ಞಾನಿಗಳು, ಸಂಗೀತ ಮತ್ತು ಆಯುರ್ವೇದ ಪಂಡಿತರಾಗಿದ್ದರು; ಇವರ ಶರೀರವೆ ವಿವಿಧ ಬಗೆಯ ಜ್ಞಾನಗಳ ರೂಪವನ್ನು ತೋರಿಸುತ್ತದೆ. ಪದ್ಮಾಸನ ಶಿಸ್ತಿನ ಸಂಕೇತ, ಹುಲಿಯ ಚರ್ಮದ ಹಾಸಿಗೆ ದುಷ್ಟರ ಸಂಹಾರದ ಸಂಕೇತ, ಹಂಸ ವಿದ್ಯೆ-ವಿವೇಕದ ಸಂಕೇತ, ಡಮರು ಮತ್ತು ಡೋಲು ಸಂಗೀತದ ಸಂಕೇತ ಎಂದರು.
ಸವಿತಾ ಸಮಾಜ ಡಾ. ಅಂಬೇಡ್ಕರ ಅವರು ಹೇಳಿದ ಶಿಕ್ಷಣ, ಸಂಘಟನೆ, ಹೋರಾಟದ ದಾರಿಯಲ್ಲಿ ನಡೆಯಬೇಕು, ಸಮಾಜ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು, ಸತತ ಪ್ರಯತ್ನಗಳನ್ನು ಮಾಡಿ ಪರಿಣಿತಿ ಪಡೆಯಬೇಕು, ಸರ್ಕಾರದ ಯೋಜನೆಗಳನ್ನು ಪಡೆದುಕೊಂಡು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಆಗಬೇಕು ಎಂದರು.
ಸವಿತಾ ಮಹರ್ಷಿ ಸಮಾಜದ ಜಿಲ್ಲಾಧ್ಯಕ್ಷ ಪುಂಡಲೀಕ ರಾಯಚೂರ ಮಾತನಾಡಿ ನಮ್ಮ ಸಮಾಜದ ಜನರಿಗೆ ಇತಿಹಾಸ ಪ್ರಜ್ಞೆ ಬರಬೇಕು, ಸಮಾಜದ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಪುಂಡಲೀಕ ರಾಯಚೂರ, ಶೇಖರ ರೆಡ್ಡಿ, ಶೇಖರ ಗೋ ರೆಡ್ಡಿ, ಕೃಷ್ಣ ರೆಡ್ಡಿ ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.