ಅಥಣಿಯ ರಾಮಮಂದಿರದಲ್ಲಿ ಶ್ರೀರಾಮ ನವಮಿಯ ನಿಮಿತ್ತ ರಾಮಜನ್ಮೋತ್ಸವ ಆಚರಣೆ

Ram Janmashtami celebrations on the occasion of Sri Rama Navami at the Ram Mandir in Athani

ಅಥಣಿಯ ರಾಮಮಂದಿರದಲ್ಲಿ ಶ್ರೀರಾಮ ನವಮಿಯ ನಿಮಿತ್ತ ರಾಮಜನ್ಮೋತ್ಸವ ಆಚರಣೆ 


ಅಥಣಿ, 06: ಅಥಣಿಯ ಸಮರ್ಥರಾಮದಾಸರಿಂದ ಸ್ಥಾಪಿಸಲ್ಪಟ್ಟ ಅತ್ಯಂತ ಪುರಾತನ ರಾಮಮಂದಿರದಲ್ಲಿ ವಿಜೃಂಭಣೆಯಿಂದ ರಾಮನವಮಿ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ರಾಮಮಂದಿರದ ಪ್ರಾಂಗಣದಲ್ಲಿ ರಾಮ ಜನ್ಮಕ್ಕಾಗಿ ತೊಟ್ಟಿಲನ್ನು ಕಟ್ಟಿ , ತೊಟ್ಟಿಲನ್ನು ವಿವಿಧ ಹೂವು, ಎಲೆ, ಗಳಿಂದ ಸಿಂಗರಿಸಲಾಗಿತ್ತು.  

           ತಳಿರು ತೋರಣಗಳಿಂದ ರಾಮಮಂದಿರವನ್ನು ಅಲಂಕರಿಸಲಾಗಿತ್ತು ಗರ್ಭಗುಡಿಯಲ್ಲಿರುವ ರಾಮ ಲಕ್ಷ್ಮಣ ಸೀತಾ ಮಾತೆಯರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೇರೆಬೇರೆ ನಗರಗಳಿಂದ ವಿವಿಧ ಬಗೆಯ ಹೂವುಗಳನ್ನು ತರಿಸಿ ಸುಂದರವಾಗಿ ಅಲಂಕರಿಸಲಾಗಿತ್ತು. ದೆವಸ್ಥಾನದ ಅರ್ಚಕ ಲಕ್ಷ್ಮಣ ರಾಮದಾಸಿ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬೆಳಿಗ್ಗೆ ಶ್ರೀ ರಾಮ ನಾಮ ಭಜನೆ ಹಾಗೂ ಶ್ರೀ ರಾಮರಕ್ಷಾ ಸ್ತೋತ್ರ ಪಠಣ, ವಿಶೇಷ ಪೂಜೆ, ಕ್ಷೀರಾಭಿಷೇಕ ಹಾಗೂ ಆರತಿಯನಂತರ ಮಂತ್ರಪುಷ್ಪ ಜರುಗಿತು. ವಿವಿಧ ರೀತಿಯ ಹಣ್ಣುಗಳಿಂದ ನೈವೇದ್ಯ ಮಾಡಲಾಯಿತು. ನಂತರ ಪಂಚಾಮೃತ ಹಾಗೂ ತೀರ್ಥ ವಿತರಿಸಲಾಯಿತಯ. ನಂತರ ರಾಮ ದೇವರ ಬಾಲ ವಿಗ್ರಹವನ್ನು ತೊಟ್ಟಿಲಿಗೆ ಹಾಕುವ ಕಾರ್ಯಕ್ರಮ ಆರಂಭವಾಯಿತು. ಇದೇ ಸಂದರ್ಭದಲ್ಲಿ ವಾದಿರಾಜ ಜಂಬಗಿ ಇವರಿಂದ  

    ಶ್ರೀರಾಮ ನವಮಿಯ ಅಂಗವಾಗಿ ರಾಮ ಜನ್ಮದ ವೃತ್ತಾಂತದ ಪ್ರವಚನ ಕಾರ್ಯಕ್ರಮ ಹಾಗೂ ಹರಿ ಕೀರ್ತನೆ ನಡೆಯಿತು . 

          ಸಾಕಷ್ಟು ಸಂಖ್ಯೆಯಲ್ಲಿ ರಾಮಜನ್ಮದ ವೇಳೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಮಧ್ಯಾಹ್ನ 12 ಗಂಟೆಗೆ ರಾಮಜನ್ಮ ಕಾಲದ ಸಮಯದಲ್ಲಿ ರಾಮಚಂದ್ರ ದೇವರ ಬಾಲ ಮೂರ್ತಿಯನ್ನು ತೊಟ್ಟಿಲಿಗೆ ಹಾಕಿ ನಾಮಕರಣ ಮಾಡುವ ಮೂಲಕ ರಾಮಜನ್ಮೋತ್ಸವ ನಡೆಯಿತು. ರಾಮ ಜನ್ಮದ ನಿಮಿತ್ತ ಕೆಲ ಭಕ್ತಾದಿಗಳು ಉಪವಾಸ ವೃತ ಕೈಗೊಳ್ಳುತ್ತಾರೆ. ಆದ್ದರಿಂದ ರಾಮ ಮಂದಿರದಲ್ಲಿ ಪಾನಕ, ಮಜ್ಜಿಗೆ , ಕೋಸಂಬರಿಗಳನ್ನು ಭಕ್ತಾದಿಗಳಿಗೆ ನೀಡಲಾಯಿತು. ಸುಡುವ ರಣ ಬಿಸಿಲಿನಲ್ಲಿ ಪಾನಕ, ಮಜ್ಜಿಗೆ ಭಕ್ತಾದಿಗಳ ದಣಿವನ್ನು ತಣಿಸಿದ್ದಂತೂ ನಿಜ.  

     ಸುಮಂಗಲೆಯರು ಸಾಕಷ್ಟು ಸೇರಿರುವ ಈ ಸಂದರ್ಭದಲ್ಲಿ ಎಲ್ಲರೂ ಕುಂಕುಮ ಹಚ್ಚಿ ಉಡಿ ತುಂಬಿ ರಾಮ ಜನ್ಮೋತ್ಸವದ ಸಂಭ್ರಮವನ್ನು ಆಚರಿಸಿದರು. 

  ಶ್ರೀರಾಮ ಜನ್ಮೋತ್ಸವದ ಹಿಂದಿನ ದಿವಸ ಸೀತಾದೇವಿಗೆ ಉಡಿತುಂಬುವ ಕಾರ್ಯಕ್ರಮ ಹಾಗೂ ಶ್ರೀ ಸುಧಾ ಮಹಿಳಾ ಮಿತ್ರಮಂಡಳಿಯವತಿಯಿಂದ ಭಜನೆ ಜರುಗಿತು. 

     ಈ ಸಂದರ್ಭದಲ್ಲಿ ಪಂಡಿತ ಬಿಂದುಮಾಧವಾಚಾರ್ಯ ಜೋಶಿ, ಪಂಡಿತ ಜಯರಾಮಾಚಾರ್ಯ ಮದನಪಲ್ಲಿ, ಪುರಸಭಾ ಸದಸ್ಯೆ ಮೃಣಾಲಿನಿ ದೇಶಪಾಂಡೆ, ಕ್ಷಮಾ ರಾಮದಾಸಿ, ಪ್ರವೀಣ ರಾಮದಾಸಿ, ಸುಧೀಂದ್ರ ಬಾದರಾಯಣಿ, ಸಚಿನ ಕುಲಕರ್ಣಿ, ಆದೀಪ ಮಾಶಾಳ, ಪ್ರಸಾದ ಜೇರೆ, ಸಂದೇಶ ಕುಲಕರ್ಣಿ, ನಾರಾಯಣ ದೇಶಪಾಂಡೆ, ವಾದಿರಾಜ ಬಾದರಾಯಣಿ, ಸುರೇಶ ಜೋಶಿ, ಗೀರೀಶ ಕುಲಕರ್ಣಿ, ಪ್ರಸಾದ ಕುಲಕರ್ಣಿ, ಸೌರಭ ಮಾಶಾಳ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಹಿಂದೂ ಸಮಾಜಬಾಂಧವರು ಉಪಸ್ಥಿತರಿದ್ದರು. 

ರಾಮನವಮಿಯ ನಿಮಿತ್ತದ ಕಾರ್ಯಕ್ರಮಗಳು 

ಎ.7 ಸೋಮವಾರದಂದು ಮಹಾಮಂಗಳಾರತಿ, ಮಧ್ಯಾಹ್ನ ತೀರ್ಥ ಪ್ರಸಾದ ವಿತರಣೆ, ಸಂಜೆ  ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. ಎ.8 ಮಂಗಳವಾರಂದು ಗ್ರಾಮ ಪ್ರದಕ್ಷಿಣೆ, ಲಲಿತ ಹಾಗೂ ಭಜನಾ ಕಾರ್ಯಕ್ರಮ, ಎ.9 ರಂದು ಶನಿವಾರದಿಂದ ಎ.12 ರವರೆಗೆ ತತ್ವಜ್ಞಾನಾಚಾರ್ಯ ಉಮರ್ಜಿ ಇವರಿಂದ ಪ್ರವಚನ ಜರುಗುವುದು.