ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಸಭಾಪತಿಯಾಗಿ ರಾಜೀವ ಶೆಟ್ಟಿ, ಉಪಸಭಾಪತಿಯಾಗಿ ಕೊಪ್ಪಳದ ಶ್ರೀನಿವಾಸ ಹ್ಯಾಟಿ ಆಯ್ಕೆ
ಕೊಪ್ಪಳ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬೆಂಗಳೂರು ರಾಜ್ಯಶಾಖೆಗೆ ಮೂರು ವರ್ಷಗಳ ಅವಧಿಗೆ ಸಭಾಪತಿ ಹಾಗೂ ಉಪಸಭಾಪತಿ ಹುದ್ದೆಗೆ ಮಂಗಳವಾರ ರೆಡ್ ಕ್ರಾಸ್ ಸಂಸ್ಥೆ ಕಛೇರಿಯಲ್ಲಿ ಚುನಾವಣೆ ಜರುಗಿತು. ಚುನಾವಣೆಯಲ್ಲಿ ಸಭಾಪತಿಯಾಗಿ ಉಡುಪಿ ಶಾಖೆಯ ರಾಜೀವ ಶೆಟ್ಟಿ ಹಾಗೂ ಉಪಸಭಾಪತಿಯಾಗಿ ಕೊಪ್ಪಳ ಶಾಖೆಯ ಡಾ. ಶ್ರೀನಿವಾಸ ಹ್ಯಾಟಿ ಆಯ್ಕೆಯಾಗಿದ್ದಾರೆ.ಸಭಾಪತಿ ಹುದ್ದೆಗೆ ಮೂರು ಜನ ಆಕಾಂಕ್ಷಿಗಳು ಸ್ಪರ್ಧಿಸಿದ್ದರು. ಉಪ ಸಭಾಪತಿ ಹುದ್ದೆಗೆ ಇಬ್ಬರು ಸ್ಪರ್ಧಿಸಿದ್ದರು. ಒಟ್ಟು 30 ಸದಸ್ಯರು ತಮ್ಮ ಮತ ಚಲಾಯಿಸಿದರು. ಅದರಲ್ಲಿ ಸಭಾಪತಿ ಆಯ್ಕೆಯಲ್ಲಿ ಬಾಗಲಕೋಟೆ ಶಾಖೆಯ ಆನಂದ ಜಿಗಜಿನ್ನಿ, ಶಿವಮೊಗ್ಗ ಶಾಖೆಯ ಎಸ್.ಪಿ. ದಿನೇಶ ಹಾಗೂ ಉಡುಪಿ ಶಾಖೆಯ ಬಸ್ರೂರು ರಾಜೀವ ಶೆಟ್ಟಿ ಈ ಮೂರು ಜನರೂ ತಲಾ 10 ಮತಗಳನ್ನು ಪಡೆದರು. ಇದರಲ್ಲಿ ಕೊನೆಗೆ ಚೀಟಿ ಎತ್ತಿದಾಗ ಉಡುಪಿ ಶಾಖೆಯ ಬಸ್ರೂರು ರಾಜೀವ ಶೆಟ್ಟಿ ಸಭಾಪತಿಯಾಗಿ ಆಯ್ಕೆಯಾದರು.ಉಪ ಸಭಾಪತಿಗೆ ಇಬ್ಬರು ಸ್ಪರ್ಧಿಸಿದ್ದರು. ಇದರಲ್ಲಿ ಬಳ್ಳಾರಿಯ ಎಂ.ಎ. ಶಕೀಬ್ 11 ಮತಗಳನ್ನು ಪಡೆದರೆ, ಕೊಪ್ಪಳ ಶಾಖೆಯ ಡಾ.ಶ್ರೀನಿವಾಸ ಹ್ಯಾಟಿ 19 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಡಾ.ಶ್ರೀನಿವಾಸ ಹ್ಯಾಟಿ ಇವರ ಆಯ್ಕೆಗೆ ಕೊಪ್ಪಳ ಭಾರತೀಯ ರೆಡ್ ಕ್ರಾಸ್ ಪದಾಧಿಕಾರಿಗಳು, ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ.