ಧಾರ್ಮಿಕ ಸಂಸ್ಥೆಗಳ ಪಾವಿತ್ರ್ಯ ಕಾಪಾಡಿ: ಪಾಲನಕರ

ಧಾರ್ಮಿಕ ಸಂಸ್ಥೆಗಳ ಪಾವಿತ್ರ್ಯ ಕಾಪಾಡಿ: ಪಾಲನಕರ  Protect the sanctity of religious institutions: Guardians

ಗದಗ  29:  ಧಾರ್ಮಿಕ ಸಂಸ್ಥೆಗಳ ಆಂತರಿಕ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಸಂಸ್ಥೆಗಳ ಗೌರವ ಹಾಗೂ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡಬಹುದು. ಆದ್ದರಿಂದ ಇಂತಹ ವಿಷಯಗಳಲ್ಲಿ ನಿಷ್ಪಕ್ಷಪಾತ ಹಾಗೂ ಜವಾಬ್ದಾರಿಯುತ ನಿಲುವು ಅಗತ್ಯ ಎಂದು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪಾಲನಕರ ಅಭಿಪ್ರಾಯಪಟ್ಟಿದ್ದಾರೆ.  

ಈ ಕುರಿತು ಪ್ರಕಟಣೆ ನೀಡಿರುವ ಅವರು, ಹಲವು ದಶಕಗಳಿಂದ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ವೀರೇಶ್ವರ ಪುಣ್ಯಾಶ್ರಮವು ಜಾತಿ-ಮತ ಭೇದವಿಲ್ಲದೆ ಎಲ್ಲರಿಗೂ ಆಶ್ರಯ ಮತ್ತು ಸೇವೆ ನೀಡುತ್ತ ಬಂದಿದೆ. ಇಂತಹ ಸಂಸ್ಥೆಗಳ ಆಡಳಿತಕ್ಕೆ ಸಂಬಂಧಿಸಿದ ಆಂತರಿಕ ವಿಚಾರಗಳು ಸಾರ್ವಜನಿಕ ಚರ್ಚೆಗೆ ಗ್ರಾಸವಾಗುವುದರಿಂದ ಸಂಸ್ಥೆಯ ಘನತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.  

ಯಾವುದೇ ಧಾರ್ಮಿಕ ಸಂಸ್ಥೆ, ದೇವಸ್ಥಾನ ಅಥವಾ ಮಠಗಳ ಆಂತರಿಕ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸುವುದರಿಂದ ಭಕ್ತರಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಧಾರ್ಮಿಕ ಸಂಸ್ಥೆಗಳ ಪಾವಿತ್ರ್ಯ ಮತ್ತು ವಿಶ್ವಾಸ ಉಳಿಯುವಂತೆ ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.  

ಭಕ್ತಿ, ಸೇವೆ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಧಾರ್ಮಿಕ ಸಂಸ್ಥೆಗಳು ಸಮಾಜದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ರಾಘವೇಂದ್ರ ಪಾಲನಕರ ತಿಳಿಸಿದ್ದಾರೆ.