ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿದ್ದರೆ ಮಾತ್ರ ಜೀವನದ ಪ್ರತಿಯೊಂದು ಕ್ಷಣವನ್ನು ಆನಂದಿಸಲು ಸಾಧ್ಯ : ಚಂದ್ರಕಾಂತ ಶ್ರಾವಗೆ

ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿದ್ದರೆ ಮಾತ್ರ ಜೀವನದ ಪ್ರತಿಯೊಂದು ಕ್ಷಣವನ್ನು ಆನಂದಿಸಲು ಸಾಧ್ಯ : ಚಂದ್ರಕಾಂತ ಶ್ರಾವಗೆ Only if you are physically and mentally fit can you enjoy every moment of life: Chandrakant Shrava

ಬೆಳಗಾವಿ: ಉತ್ತಮ ಆರೋಗ್ಯವೇ ನಮ್ಮೆಲ್ಲರ ನಿಜವಾದ ಸಂಪತ್ತು. ಓರ್ವ ವ್ಯಕ್ತಿಯು ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢವಾಗಿರಲು ಆರೋಗ್ಯ ಅತೀ ಅವಶ್ಯಕ. ಅದಲ್ಲದೇ ರೋಗಮುಕ್ತ ಜೀವನ ನಡೆಸಲು, ದೀರ್ಘಾಯುಷ್ಯ ಹೊಂದಲು ಹಾಗೂ ಒತ್ತಡದ ಮಧ್ಯೆಯೂ ಉತ್ತಮ ಕಾರ್ಯ ನಿರ್ವಹಿಸಲು ಆರೋಗ್ಯ ಅತೀ ಅವಶ್ಯಕ. ಇಂತಹ ಆರೋಗ್ಯ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿದ್ದಾಗಲೇ ದೊರೆಯುತ್ತದೆ. ಉತ್ತಮ ಆರೋಗ್ಯ ಉಳ್ಳವರು ಮಾತ್ರ ಜೀವನದ ಪ್ರತಿಯೊಂದು ಕ್ಷಣವನ್ನು ಆನಂದಿಸಲು ಸಾಧ್ಯ ಎಂದು ಹಿರಿಯ ತಜ್ಞ ವೈದ್ಯ ಡಾ. ಚಂದ್ರಕಾಂತ ಶ್ರಾವಗೆ ಅಭಿಪ್ರಾಯ ಪಟ್ಟರು. ಅವರು ಇಂದು ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮೇಶ್ವರ ಆಂಗ್ಲ ಮಾಧ್ಯಮ ಶಾಲೆಯ 10ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಮುಂದುವರಿದು ಮಾತನಾಡಿದ ಅವರು ಹತ್ತನೇ ವರ್ಗದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಲು ವಿದ್ಯಾರ್ಥಿಗಳು ಪರೀಕ್ಷಾ ಭಯದಿಂದ ಮುಕ್ತರಾಗಿ ಆನಂದದಿಂದ ಅಧ್ಯಯನ ಮಾಡುವುದರ ಜೊತೆಗೆ ಯೋಗ, ಧ್ಯಾನ, ಸಮತೋಲಿತ ಆಹಾರ ಹಾಗೂ ನಿಯಮಿತ ವ್ಯಾಯಾಮ ಮಾಡಬೇಕು. ಕೇವಲ ಪಠ್ಯಪುಸ್ತಕದ ಹುಳುಗಳಾಗದೇ ಸರ್ವತೋಮುಖ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್‌.ಪಿ. ಹಿರೇಮಠ ಮಾತನಾಡಿ ಪರಿಶ್ರಮವಿಲ್ಲದೇ ಸಾಧನೆ ಅಸಾಧ್ಯ. ವಿದ್ಯಾರ್ಥಿಗಳು ಉನ್ನತ ಗುರಿ ಹೊಂದಿ ಅದರ ಈಡೇರಿಕೆಗೆ ನಿರಂತರ ಪ್ರಯತ್ನಿಸಬೇಕು. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದರು. ವೇದಿಕೆಯ ಮೇಲೆ ಶಾಲೆಯ ಸಂಯೋಜಕ ರಾಜಶೇಖರ ಪಾಟೀಲ, ಪ್ರಾಚಾರ್ಯೆ ಪೂಜಾ ನಾಯ್ಕ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿನಿ ತನುಶ್ರೀ ಯರಜನ್ನವರ ಸ್ವಾಗತಿಸಿದರು. ಪಲ್ಲವಿ ಬಾಳೇಕುಂದ್ರಿ ಹಾಗೂ ಸೌಜನ್ಯ ದಡೇದ ನಿರೂಪಿಸಿದರು. ಆಕಾಶ ನಂದಿ ಪರಿಚಯಿಸಿದರು. ಕೊನೆಗೆ ರಿತಿಕಾ ಮೇತ್ರಿ ವಂದಿಸಿದರು.