ಪ್ರಕೃತಿ ನಾಶದಿಂದ ಪ್ರಕೃತಿ ವಿಕೋಪ: ಸಚಿವ ಈಶ್ವರ ಖಂಡ್ರೆ

ಪ್ರಕೃತಿ ನಾಶದಿಂದ ಪ್ರಕೃತಿ ವಿಕೋಪ: ಸಚಿವ ಈಶ್ವರ ಖಂಡ್ರೆ  Natural disasters due to destruction of nature: Minister Ishwar Khandre

ಪ್ರಕೃತಿ ನಾಶದಿಂದ ಪ್ರಕೃತಿ ವಿಕೋಪ: ಸಚಿವ ಈಶ್ವರ ಖಂಡ್ರೆ  

ಸಿಂದಗಿ 30: ಪ್ರಕೃತಿ ವಿಕೋಪ, ಹವಾಮಾನ ವೈಪರಿತ್ಯ ಜಗತ್ತಿನ ಜನರಿಗೆ ಕಾಡುವ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಜನ ತತ್ತರಿಸಿ ಹೋಗಿದ್ದಾರೆ. ಬದುಕು ಅಸ್ಥಿರವಾಗುತ್ತಿದೆ. ಬೀದಿಗೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಮೂಲ ಕಾರಣ ಪ್ರಕೃತಿ ನಾಶವೇ ವಿನಃ ಬೇರೆ ಯಾವುದು ಅಲ್ಲ ಎಂದು ಜೀವಶಾಸ್ತ್ರ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ವಿಷಾದ ವ್ಯಕ್ತಪಡಿಸಿದರು. 

ಸಿಂದಗಿ ಪಟ್ಟಣದ ಹೊನ್ನಪ್ಪಗೌಡ ಲೇಓಟ್ ನಲ್ಲಿ ನಿರ್ಮಾಣಗೊಂಡ ಕರ್ನಾಟಕ ಅರಣ್ಯ ಇಲಾಖೆ, ವಿಜಯಪುರ ಹಾಗೂ ಸಿಂದಗಿ ಪ್ರಾದೇಶಿಕ ಅರಣ್ಯ ವಲಯ ವತಿಯಿಂದ ಹಮ್ಮಿಕೊಂಡ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರೋನ ಸಂದರ್ಭದಲ್ಲಿ ಆಮ್ಲಜನಕದ ಕೊರತೆ ದೇಶದಲ್ಲಿ ತಾಂಡವಾಡುತ್ತಿತ್ತು. ಇದಕ್ಕೆಲ್ಲ ಕಾರಣ ಪರಿಸರದ ನಾಶ. ಈ ದೇಶದಲ್ಲಿ ಸ್ವಚ್ಛಂದವಾಗಿ ಅರಣ್ಯ ಪ್ರದೇಶಗಳು ತಲೆ ಎತ್ತಿ ನಿಂತಿದ್ದರೇ ಕರೋನ ನಮ್ಮಿಂದ ದೂರವಾಗುತ್ತಿತ್ತು. ಅರಣ್ಯ ಪ್ರದೇಶದ ಕೊರತೆಯಿಂದ ನಾವೆಲ್ಲ ಇಂತಹ ಪರಿಸ್ಥಿತಿಗೆ ಬಂದಿದ್ದೇವೆ. 

 ಶೇ.33 ಭೂಮಿ ಈ ದೇಶದಲ್ಲಿ ಅರಣ್ಯಕ್ಕೆ ಮೀಸಲಾಗಿರಬೇಕು. ರಾಜ್ಯದಲ್ಲಿ ಶೇ.21ರಷ್ಟು ಪ್ರದೇಶ ಪರಿಸರ ಮತ್ತು ಅರಣ್ಯಕ್ಕೆ ಮೀಸಲಾಗಬೇಕು. ಆದರೆ ಇಂದು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಪರಿಸರ ಸಂಪತ್ತನ್ನ ಹಾಳು ಮಾಡುತ್ತಿದ್ದೇವೆ. ಕರ್ನಾಟಕದ ಪಶ್ಚಿಮ ಘಟ್ಟದಿಂದ ಅನೇಕ ಅನುಕೂಲಗಳಿವೆ. ಪ್ರಕೃತಿ ಪರಿಸರ ಸಂರಕ್ಷಣೆ ಮಾಡದಿದ್ದರೆ ಮತ್ತು ಪರಿಸರ ಸಮತೋಲನ ಕಾಪಾಡದಿದ್ದರೆ ನಮ್ಮ ಬದುಕು ಅತ್ಯಂತ ದುಸ್ತರವಾಗುತ್ತದೆ. ಇಲ್ಲಿಯವರೆಗೆ ಅರಣ್ಯ ಇಲಾಖೆಯಿಂದ 11.5 ಕೋಟಿ ಸಸಿಗಳನ್ನು ರಾಜ್ಯದಲ್ಲಿ ನೆಡಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಶೇ.5 ಅರಣ್ಯ ಪ್ರದೇಶವಿದೆ. ಹಂತ ಹಂತವಾಗಿ ಆ ಶೇಕಡ ಪ್ರಮಾಣವನ್ನು ಜಾಸ್ತಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ವಿಜಯಪುರ ಜಿಲ್ಲೆಯಲ್ಲಿ 5ಲಕ್ಷ ಸಸಿ ನೆಡಲು ಸರ್ಕಾರದಿಂದ ಅನುದಾನವನ್ನ ಬಿಡುಗಡೆ ಮಾಡಲಾಗಿದೆ. ಬೀದರ್ ಜಿಲ್ಲೆಯಲ್ಲಿ ಇಲ್ಲಿಯವರೆಗೆ 40ಲಕ್ಷ ಸಸಿಗಳನ್ನು ನೀಡಲಾಗಿದೆ. ಪರಿಸರ ಉಳಿಯಬೇಕು ನಾವೆಲ್ಲ ಭೌತಿಕ ಸುಖವನ್ನು ನೋಡದೆ ಆರೋಗ್ಯಕರ ಬದುಕಿನ ಕಡೆಗೆ ಹೆಜ್ಜೆ ಹಾಕಬೇಕು ಎಂದರು. 

  ಉತ್ತಮವಾದ ಮತ್ತು ಆರೋಗ್ಯಕರವಾದ ಭೂಮಿಯನ್ನು ಮುಂದಿನ ಪೀಳಿಗೆಗೆ ನಾವು ಹಸ್ತಾಂತರಿಸಬೇಕು. ಇಂದಿನ ಯುವ ಜನಾಂಗ ದಾರಿತಪ್ಪುತ್ತಿದ್ದಾರೆ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ ಅಂತವರಿಗೆ ಉದ್ಯಾನವನದ ಬಳಕೆ ಹೆಚ್ಚು ಪರಿಚಿತಗೊಂಡ ನಂತರ ತಮ್ಮ ಆರೋಗ್ಯವನ್ನು ತಾವು ಸುಧಾರಿಸಿಕೊಳ್ಳುತ್ತಾರೆ ಪರಿಸರ ಸ್ನೇಹಿ ಗಣಪತಿಗಳನ್ನು ಕಡ್ಡಾಯವಾಗಿ ನಾವು ಬಳಕೆ ಮಾಡಬೇಕು. ರಾಜ್ಯ ಸರ್ಕಾರ 5 ಗ್ಯಾರಂಟಿಗಳ ನಡುವೆ ರಾಜ್ಯವನ್ನ ಅತ್ಯಂತ ಸಮಗ್ರವಾಗಿ ಮುಂದು ನಡೆಸಿಕೊಂಡು ಬರುತ್ತಿದೆ ಕ್ಷೇತ್ರದ ಶಾಸಕರಿಗೆ ಸರ್ಕಾರ ಕ್ಷೇತ್ರಗಳ ಅಭಿವೃದ್ಧಿಗೆ ರೂ.50ಕೋಟಿ ಅನುದಾನವನ್ನು ನೀಡುತ್ತಿದ್ದಾರೆ ಅರಣ್ಯ ಇಲಾಖೆಯಿಂದ ಪ್ರತಿ ಶಾಸಕರಿಗೆ ರೂ.01ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದೇವೆ. ಆದರೆ ಸಿಂದಗಿ ಶಾಸಕ ಅಶೋಕ ಮನಗೂಳಿ ನಮ್ಮ ಮೇಲೆ ಒತ್ತಡ ಹೇರಿ ಉದ್ಯಾನವನದ ನಿರ್ಮಾಣಕ್ಕೆ ರೂ.2ಕೋಟಿ ಅನುದಾನವನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಅವರ ಈ ಕೆಲಸವನ್ನು ಕಂಡು ಮುಂದಿನ ದಿನಮಾನಗಳಲ್ಲಿ ಸಿಂದಗಿ ಮತಕ್ಷೇತ್ರದ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಸಚಿವರಿಗೆ ಖುದ್ದಾಗಿ ನಾನೇ ಭೇಟಿಯಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಲು ಮುಂದಾಗುತ್ತೇನೆ ಎಂದರು. 

ಶಾಸಕ ಅಶೋಕ ಮನಗೂಳಿ, ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮಾತನಾಡಿ, ಉದ್ಯಾನವನ್ನು ಸಾರ್ವಜನಿಕರು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು. ಅರಣ್ಯ ಇಲಾಖೆಯು ವಾಯು ವಿಹಾರ‌್ಕಕೆ ಸಮಯ ನಿಗದಿಪಡಿಸಬೇಕು. ಸಿಂದಗಿ ನಗರದ ಉದ್ಯಾನವನಗಳ ಅಭಿವೃದ್ಧಿಗೆ ಸಚಿವರು 5.10ಕೋಟಿ ಅನುದಾನ ನೀಡಬೇಕು ಎಂದು ಬೇಡಿಕೆ ಇಟ್ಟರು. 

ಸಾನಿಧ್ಯವನ್ನು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಿದ್ದರು. ಬೆಳಗಾವಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಪ್ರಾಸ್ತಾವಿಕ ಮಾತನಾಡಿದರು.  

 ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಇರ್ಷಾದ ನೇವಾರ, ರಾಜೀವ ಬಿರಾದಾರ, ಕಾಡು ಬೆಳೆಸುವ ನಿಟ್ಟಿನಲ್ಲಿ ಸಹಕರಿಸಿ ತಮ್ಮ ತೋಟದಲ್ಲಿ ಗಿಡ-ಮರಗಳನ್ನು ನೆಟ್ಟು ಪೋಷಿಸಿದ ರೇಣುಕಾ ಎಸ್, ಹಿಕ್ಕನಗುತ್ತಿ ಮಹಾದೇವ ಬಿರಾದಾರ, ಶಿವಪ್ಪ ಹಳ್ಳಿ ಹಚ್ಯಾಳ ಅವರಿಗೆ ಸರಕಾರದಿಂದ ನೀಡುವ ಹಣವನ್ನು ವಿತರಣೆ ಮಾಡಲಾಯಿತು. ಚಿರತೆ ರಕ್ಷಿಸುವಲ್ಲಿ ಸಹಕಾರ ನೀಡಿದ ಆಸಂಗಿಹಾಳ ಗೋವಿಂದ ರಾಠೋಡ, ಸಚಿನ ಪ್ಯಾಟಿ, ನಿವೃತ್ತಿಯಾಗುತ್ತಿರುವ  ಎಸ್‌.ಎಸ್‌.ಬಿರಾದಾರ, ಸಿಬ್ಬಂದಿಗಳಾದ ವಿಠ್ಠಲ ಚನ್ನೂರ, ಮಹಾದೇವ ಯಂಕಂಚಿ, ಶಿವಪ್ಪಗೌಡ, ಚನ್ನಪ್ಪ ಪೂಜಾರಿ, ರಮೇಶ ಹೇಳವರ ಅವರಿಗೆ ಉತತಮ ಕೆಲಸಗಾರರು ಎಂದು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು. ವಿಜಯಪುರ ಉಪ ಅರಣ್ಯ ವಲಯಾಧಿಕಾರಿ ಮಲ್ಲಿನಾಥ ಕುಸನಾಳ ಸ್ವಾಗತಿಸಿದರು. ಶಿಕ್ಷಕ ಸಿದ್ದಲಿಂಗ ಚೌಧರಿ ನಿರೂಪಿಸಿದರು.