ಫೆ. 4ರಂದು ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವ

 ಫೆ. 4ರಂದು ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವ Mylaralingeshwara Karanika Mahotsava on Feb. 4

ಹೂವಿನಹಡಗಲಿ  28:    ಮೈಲಾರದಲ್ಲಿ ಭಾನುವಾರ ರಥ ಸಪ್ತಮಿಯಂದು ಕಂಕಣ ಧಾರಣೆ ಹಾಗೂ ಹಾಲು ಉಕ್ಕಿಸುವ ಸಾಂಪ್ರದಾಯಿಕ ಆಚರಣೆಯೊಂದಿಗೆ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರೆಗೆ ವಿಧ್ಯುಕ್ತ ಚಾಲನೆ ನೀಡಲಾಯಿತು.ಫೆ.4ರಂದು ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ಮಹೋತ್ಸವ ಜರುಗಲಿದ್ದು, ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ಚಾಲನೆ ಪಡೆದುಕೊಂಡವು.ಬೆಳಿಗ್ಗೆ ಮೈಲಾರಲಿಂಗಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ ಕಂಕಣಧಾರಣೆ ಮಾಡಲಾಯಿತು. ಬಳಿಕ ಸಂಪ್ರದಾಯದಂತೆ ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರು ಕಾರಣಿಕದ ಗೊರವಯ್ಯ ರಾಮಣ್ಣ ಸೇರಿದಂತೆ ಎಲ್ಲ ಬಾಬುದಾರರಿಗೆ ಕಂಕಣಧಾರಣೆ ಮಾಡಿದರು.

ಬಳಿಕ ದೇವಸ್ಥಾನದ ರಂಗ ಮಂಟಪದಲ್ಲಿ ಹಾಲು ಉಕ್ಕಿಸುವ ಕಾರ್ಯಕ್ರಮ ನೆರವೇರಿತು. ಉತ್ತರ ದಿಕ್ಕಿನೆಡೆಗೆ ಹಾಲು ಉಕ್ಕಿ ಹರಿಯಿತು. ’ಹಾಲು ಉಕ್ಕಿ ಹರಿದ ದಿಕ್ಕಿನಲ್ಲಿ ಮಳೆ, ಬೆಳೆ ಸಮೃದ್ಧವಾಗಲಿದೆ’ ಎಂಬುದು ಭಕ್ತರ ನಂಬಿಕೆ.ಬಾಬುದಾರರ ಬಿಕ್ಕಟ್ಟು ಪರಿಹಾರ: ಮೈಲಾರ ಸುಕ್ಷೇತ್ರದಲ್ಲಿ ಧಾರ್ಮಿಕ ಸೇವೆ ನಡೆಸಿಕೊಡುವ ಗೊರವ ಸಮೂಹ ಹಾಗೂ ಬಾಬುದಾರರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸೇವೆಗಳನ್ನು ನಡೆಸಿಕೊಟ್ಟರು.’ಗೌರವ ಸಂಭಾವನೆ ಹೆಚ್ಚಳ ಇತರೆ ಬೇಡಿಕೆ ಈಡೇರಿಸದಿದ್ದರೆ ಕಾರಣಿಕ ನುಡಿ ಸೇವೆ ಸೇರಿದಂತೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಬಹಿಷ್ಕರಿಸುತ್ತೇವೆ’ ಎಂದು ಬಾಬುದಾರರು ಪಟ್ಟು ಹಿಡಿದಿದ್ದರು.ಶಾಸಕ ಕೃಷ್ಣನಾಯ್ಕ, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರು ಬಾಬುದಾರರ ಅಹವಾಲು ಆಲಿಸಿ, ಹಂತ ಹಂತವಾಗಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಿಕ್ಕಟ್ಟು ತಾತ್ಕಾಲಿಕ ಪರಿಹಾರ ಕಂಡಿದೆ.