ಸಂಗೀತ ಮನಸ್ಸು ಪುಳಕಿತಗೊಳಿಸುವ ಸಾಧನ

ಸಂಗೀತ ಮನಸ್ಸು ಪುಳಕಿತಗೊಳಿಸುವ ಸಾಧನ Music is a means of enthralling the mind


ವಿಜಯಪುರ 29: ಇಂದು ಮಾನವ ಜೀವನದಲ್ಲಿ ಏನೆಲ್ಲವನ್ನು ಗಳಿಸಬಲ್ಲ, ಸಂಪಾದಿಸಬಲ್ಲ. ಆದರೆ ಆತನ ಜೀವನದಲ್ಲಿ ಒಂದಿಷ್ಟು ಸುಖ-ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ನಗು ಸರ್ವರ ರೋಗಗಳಿಗೆ ಮದ್ದು. ಮನುಷ್ಯನ ಮೊಗದಲ್ಲಿ ಕೊಂಚ ನಗು, ಸಂತೋಷ ಮತ್ತು ಮನಸ್ಸನ್ನು ಪುಳಕಿತಗೊಳಿಸಲು ಹಾಸ್ಯ ಮತ್ತು ಸಂಗೀತ ಆಲಿಸುವುದು ಅವಶ್ಯಕ. ದೇವಸ್ಥಾನಗಳಲ್ಲಿ ಸಂಗೀತ ಸಭಾ ನಡೆಸುವುದರ ಮೂಲಕ ಧಾರ್ಮಿಕ-ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವದು ಸಂತೋಷದ ಸಂಗತಿ ಎಂದು ಮುಖ್ಯ ಅತಿಥಿ ಬಿಗ್ ಬಾಸ್ ಖ್ಯಾತಿಯ ಮೈಸೂರಿನ ಕಲಾವಿದೆ ಸುಮಾ ರಾಜಕುಮಾರ ಅವರು ಅಭಿಪ್ರಾಯಪಟ್ಟರು. 

 ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್‌-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಆಂಜನೇಯ ದೇವಸ್ಥಾನದಲ್ಲಿ 6 ನೆಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ: 26-01-2026 ರಂದು ಜರುಗಿದ ಸಂಗೀತ ರಸಮಂಜರಿ, ಹಾಸ್ಯಮಯ ಜಾದೂ ಹಾಗೂ ಮಾತನಾಡುವ ಗೊಂಬೆ ಕಾರ್ಯಕ್ರಮ ದಲ್ಲಿ ಮಾತನಾಡುತ್ತಿದ್ದರು.  

ಅವರು ಮಾತನಾಡುತ್ತಾ, ಸಂಗೀತ ಮನುಷ್ಯನ ಮನೋರೋಗಗಳನ್ನು ದೂರ ಮಾಡುತ್ತದೆ. ಮನಸ್ಸಿಗೆ ಆಹ್ಲಾದ ಮತ್ತು ರಂಜನೀಯವಾದ ಕಲೆಯಾಗಿ ಮಾನಸಿಕ ನೆಮ್ಮದಿ ನೀಡುವ ಸಾಧನವಾಗಿದೆ. ಸಂಗೀತ ಕಲಿಕೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಕಲಿಯುವ ಹಂಬಲ, ಸಾಧಿಸುವ ಛಲವೊಂದಿದ್ದರೆ ಎಂತಹ ಸಾಧನೆಯನ್ನು ಮಾಡಬಹುದು ಇದಕ್ಕೆ ಭೀಮಸೇನ್ ಜೋಶಿ ಅವರೇ ನಮಗೆಲ್ಲ ನಿದರ್ಶನವೆಂದು ಹೇಳಿದರು. ನಾವು ಬದುಕು-ಸಂಸಾರದ ಜಂಜಾಟದಿಂದ ಸ್ವಲ್ಪ ರಿಲ್ಯಾಕ್ಸ್‌ ಪಡೆಯಲು ಭಕ್ತಿ-ಭಾವ ಗೀತೆ, ಭಜನೆ, ಕೀರ್ತನೆ, ತತ್ವಪದ, ದೇವರ ನಾಮಸ್ಮರಣೆ, ಧಾರ್ಮಿಕ-ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಧ್ಯಾತ್ಮಿಕತೆಯ ಕಡೆಗೆ ಹೆಚ್ಚಿನ ಒಲವು ಹೊಂದುವುದು ಅಗತ್ಯವಾಗಿದೆ. ಆಧುನಿಕತೆೆ, ಸಮೂಹ ಮಾಧ್ಯಮ, ಸಾಮಾಜಿಕ ಜಾಲತಾಣ, ಪಾಶ್ಚಾತ್ಯೀಕರಣದ ಪ್ರಭಾವದಿಂದ ನಮ್ಮ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಗೀತ ಇವೆಲ್ಲವೂ ನಶಿಸಿ ಹೋಗುತ್ತಿರುವ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಸಕ್ರೀಯವಾಗಿ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗುತ್ತಾ, ನಮ್ಮ ಮುಂದಿನ ಯುವ ಪೀಳಿಗೆ ಸಂಗೀತದ ಸುಧೆಯನ್ನು ಉಳಿಸಿ-ಬೆಳೆಸಿಕೊಂಡು ಹೋಗುವಂತೆ ಪ್ರೇರೇಪಿಸಬೇಕಾಗಿದೆ ಎಂದು ಹೇಳಿದರು. 

ಮಾಜಿ ಸೈನಿಕರಾದ ಶ್ರೀ ಚಂದ್ರಶೇಖರ ಇಂಗಳೇಶ್ವರ ಅವರು ಮಾತನಾಡುತ್ತಾ, ಪ್ರತಿಯೊಬ್ಬರೂ ಜೀವನದಲ್ಲಿ “ಬದುಕು ಅಥವಾ ಸಂಸಾರ” ಎಂಬ ಜಂಜಾಟದಲ್ಲಿ ಎದುರಾಗುವ ಎಲ್ಲ ಕಷ್ಟ-ನಷ್ಟ, ಸುಖ-ದುಃಖ ಮತ್ತು ಸಮಸ್ಯೆಗಳೆಲ್ಲವನ್ನು ಸಮನಾಗಿ ಸ್ವೀಕರಿಸುತ್ತಾ, ಪ್ರತಿ ಕ್ಷಣವು ಸುಖ-ಶಾಂತಿ-ನೆಮ್ಮದಿ ಮತ್ತು ಸಮಾಧಾನದೊಂದಿಗೆ ನಮ್ಮ ಬದುಕನ್ನು ಸಾಗಿಸಬೇಕು. ಈ ದೇವಸ್ಥಾನವು ಜಾತ್ರಾ ಮಹೋತ್ಸವವನ್ನು ವಿಶೇಷವಾಗಿ ಆಚರಿಸುತ್ತಾ, ನಗರದ ಮಾದರಿ ಬಡಾವಣೆಯಾಗಿದೆ ಎಂದರು. 

ಸಮಾರಂಭದಲ್ಲಿ ದತ್ತಾ ಗೋಲಂಡೆ, ಕಸ್ತೂರಿ ಸಾವಳಗಿ, ಶಕುಂತಲಾ ಅಂಕಲಗಿ, ಶಾಂತಾ ಕಪಾಳಿ, ಕಲ್ಪನಾ ರಜಪೂತ, ಸಿದ್ದಮ್ಮ ಪಾಟೀಲ, ಕಮಲಾ ತೆನಿಹಳ್ಳಿ ಇನ್ನಿತರು ವೇದಿಕೆಯ ಮೇಲಿದ್ದರು. 

ನ್ಯಾಯವಾದಿ ರಾಜು ಶಿವಗೊಂಡ, ಶ್ರೀಶೈಲ ಮಾಳಿ, ಗೊಲ್ಲಾಳ ಎಚ್ಚಿ, ಎಸ್‌.ಬಿ.ಬಶೆಟ್ಟಿ, ಪ್ರಕಾಸ ನಾಗನೂರ, ಪ್ರೊ. ಎಂ.ಎಸ್‌.ಖೊದ್ನಾಪೂರ, ಎ.ಬಿ.ಬಿರಾದಾರ, ಮಹಾದೇವ ಕಪಾಳಿ, ಮಹಾದೇವ ಪಾಟೀಲ, ಚೇತನ ದೇವನಾಯಕ, ಎಸ್‌.ಎಂ.ಬಂಗಾರಿ, ಪ್ರೊ. ಮಾರುತಿ ಜೋಶಿ, ರಾಘವೇಂದ್ರ ಪಾಟೀಲ, ಸ್ವಪ್ನಾ ಶಿವಗೊಂಡ, ಸರೋಜಾ ಬಾಗಲಕೋಟ, ಸ್ವಪ್ನಾ ಚಾಬೂಕಸವಾರ, ದೀಪಾ ಮಠಪತಿ, ಸುಜಾತಾ ನಾಗನೂರ ಇನ್ನಿತರು ಸಹ ಉಪಸ್ಥಿತರಿದ್ದರು.